ಕಾಸರಗೋಡು; ತಿಂಗಳ ಹಿಂದೆ ಮಂಗಳೂರಿನ ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯನ್ನು ಗುರುವಾರ ಕಾಸರಗೋಡಿನಲ್ಲಿ ಬಂಧಿಸಿರುವುದಾಗಿ ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್ ತಿಳಿಸಿದ್ದಾರೆ.
ಕಲ್ಲಿಕೋಟೆಯ ಕೊಯಿಲಾಂಡಿ ನಿವಾಸಿ ಶಿಫಾಸ್ (33) ವಶಕ್ಕೆ ಪಡೆದ ಆರೋಪಿ. ಗುರುವಾರ ಮಧ್ಯಾಹ್ನ ಕ್ಯಾಲಿಕಟ್ ನಿಂದ ರೈಲಿನಲ್ಲಿ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದ ಶಿಫಾಸ್, ಕಾಸರಗೋಡು ನಗರದ ಮಲ್ಲಿಕಾರ್ಜುನ ದೇವಸ್ಥಾನದ ಆವರಣಕ್ಕೆ ಬಂದಾಗಲೇ ಸಿವಿಲ್ ಡ್ರೆಸ್ ನಲ್ಲಿದ್ದ ಪೊಲೀಸರು ಬಲೆಗೆ ಹಾಕಿದ್ದಾರೆ. ಕಾಸರಗೋಡು ಡಿವೈಎಸ್ಪಿ ಸುಧಾಕರನ್ ಮತ್ತು ಡಿಸಿ ಆರ್ ಬಿ ಡಿವೈಎಸ್ಪಿ ಅಬ್ದುಲ್ ರಹೀಂ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿ ಪತ್ತೆಗೆ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ, ಮೊಬೈಲ್ ಟವರ್ನಲ್ಲಿ ದಾಖಲಾದ ಕರೆಗಳ ಮಾಹಿತಿ ವಿಶ್ಲೇಷಿಸಲು ಹಾಗೂ ವಿವಿಧ ಲಾಡ್ಜ್, ಹೋಟೆಲ್ಗಳನ್ನು ಪರಿಶೀಲಿಸಲು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಕೇರಳ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿತ್ತು. ಆರೋಪಿಯನ್ನು ಕಾಸರಗೋಡಿನಲ್ಲಿ ಗುರುವಾರ ಪತ್ತೆಹಚ್ಚಲಾಗಿದೆ.

ಮಂಗಳೂರಿನ ಹಂಪನಕಟ್ಟೆಯಲ್ಲಿರುವ ‘ಮಂಗಳೂರು ಜ್ಯುವೆಲ್ಲರ್ಸ್’ ಎಂಬ ಚಿನ್ನಾಭರಣ ಅಂಗಡಿಯ ಸಿಬ್ಬಂದಿ, ಸ್ಥಳೀಯ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ(50) ಎಂಬವರನ್ನು ಫೆಬ್ರವರಿ 3ರಂದು ಅಂಗಡಿಯಲ್ಲೇ ಚೂರಿಯಿಂದು ಕೊಲೆ ಮಾಡಲಾಗಿತ್ತು. ಅಂದು ಮಧ್ಯಾಹ್ನ ಅಂಗಡಿಯ ಮಾಲಕ ಊಟಕ್ಕೆ ತೆರಳಿ ಹಿಂದಿರುಗಿದ ವೇಳೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಯೋರ್ವ ಅವರನ್ನು ಚೂರಿಯಿಂದು ಕೊಲೆ ಮಾಡಿ ಪರಾರಿಯಾಗಿರುವುದಾಗಿ ಜ್ಯುವೆಲ್ಲರಿಯ ಮಾಲಕ ಕೇಶವ ಆಚಾರ್ಯ ಬಂದರು ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. ಒಂದು ತಿಂಗಳ ಕಾಲವೂ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಅಚಾನಕ್ಕಾಗಿ ಬಲೆಗೆ ಬಿದ್ದಿದ್ದಾನೆ. ಮಂಗಳೂರು ಪೊಲೀಸರು ಇನ್ನಷ್ಟೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಷ್ಟೆ.
ಎಂಜಿನಿಯರಿಂಗ್ ಕಲಿಕೆ: ಆರೋಪಿ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ಗೆ ಪ್ರವೇಶ ಪಡೆದಿದ್ದ. ಎರಡು ವರ್ಷಗಳ ನಂತರ ಶಿಕ್ಷಣ ಮೊಟಕುಗೊಳಿಸಿದ್ದ ಎಂದು ಅವರು ಹೇಳಿದ್ದಾರೆ
Discover more from Coastal Times Kannada
Subscribe to get the latest posts sent to your email.








Discussion about this post