ಮಂಗಳೂರು: “ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣೆ ಕಾಯಿದೆ’ಯಡಿ ದ.ಕ. ಜಿಲ್ಲೆಯಲ್ಲಿ 3 ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದು ಇದಕ್ಕೆ ಮಹಿಳೆ ಯರಲ್ಲಿ ರಕ್ಷಣೆಯ ಬಗ್ಗೆ ಉಂಟಾಗಿರುವ ಜಾಗೃತಿ ಕಾರಣವಾಗಿರಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರೇಮ ಪ್ರಕರಣ, ಅಕ್ರಮ ಸಂಬಂಧದ ಕಲಹ ಮೊದಲಾದವುಗಳು ಹೆಚ್ಚಾಗಿ ವರದಿಯಾಗಿವೆ. ‘2020ರಲ್ಲಿ ಅಧಿಕಾರ ಸ್ವೀಕರಿಸಿದ ಮೇಲೆ ಈವರೆಗೆ ಮಹಿಳಾ ಆಯೋಗಕ್ಕೆ 6,728 ದೂರುಗಳು ದಾಖಲಾಗಿದ್ದು, 4,120 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. 2,608 ದೂರಗಳು ಪರಿಶೀಲನೆಯಲ್ಲಿವೆ. ಈ ದೂರುಗಳ ಪೈಕಿ 1,400ಕ್ಕೂ ಹೆಚ್ಚು ಪ್ರಕರಣಗಳು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ್ದರೆ, 1,905 ಪ್ರಕರಣಗಳು ರಕ್ಷಣೆ ಕೋರಿ, 347 ವರದಕ್ಷಿಣೆ ಕಿರುಕುಳ, 26 ವರದಕ್ಷಿಣೆ ಸಾವು, ಕೊಲೆ, 37 ಲೈಂಗಿಕ ದೌರ್ಜನ್ಯ, 208 ಪೊಲೀಸ್ ದೌರ್ಜನ್ಯ ಪ್ರಕರಣಗಳಾಗಿವೆ. 1,053 ಸು–ಮೋಟೊ ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದರು.
‘ಪ್ರೇಮ ಪ್ರಕರಣಗಳು, ಲಿವ್ ಇನ್ ಸಂಬಂಧಗಳು, ಸೈಬರ್ ಅಪರಾಧಗಳಿಗೆ ಸಂಬಂಧಿಸಿ ಅನೇಕ ದೂರುಗಳು ಬರುತ್ತಿರುವ ಕಾರಣ ಈ ಬಗ್ಗೆ ಶಾಲೆ– ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಲಿವ್ ಇನ್ ಸಂಬಂಧ ಹೊಂದಿರುವ ಅನೇಕ ಯುವತಿಯರು ಜತೆಗಿರುವ ಪುರುಷನಿಂದ ಮೋಸ ಹೋದಾಗ, ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಆಯೋಗಕ್ಕೆ ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಅಂತಹ ಯುವತಿಯರಲ್ಲಿ ಆತ್ಮಸ್ಥೈರ್ಯ ತುಂಬಿ, ಛಲ ಬೆಳೆಸುವ ಕಾರ್ಯವನ್ನು ಆಯೋಗ ಮಾಡುತ್ತಿದೆ’ ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post