ಮಂಗಳೂರು: “ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಅದ್ಭುತವಾಗಿ ಸಿದ್ಧಗೊಂಡಿರುವ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ದುಬಾರಿ ಟಿಕೆಟ್ ಕೊಟ್ಟು ಸಿನಿಮಾ ನೋಡಲು ಸಾಧ್ಯವಾಗದವರು ಇಂಥದ್ದೊಂದು ಸುಂದರ ಹಾಗೂ ಅತ್ಯುತ್ತಮ ಸಿನಿಮಾವನ್ನು ನೋಡದೆ ಇರಬಾರದು ಎಂಬ ಉದ್ದೇಶದಿಂದ ಕೇವಲ 99 ರೂ. ಟಿಕೆಟ್ ನಿಗದಿಪಡಿಸಿದ್ದು, ಇದು ತುಳುಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್ ಥಿಯೇಟರ್ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ“ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್ವೆಜ್ ಒಂದು ಅತ್ಯುತ್ತಮ ಹಾಗೂ ಭಿನ್ನ ಕಥಾವಸ್ತುವನ್ನು ಹೊಂದಿದೆ. ಸು ಫ್ರಂ ಸೋ ಸಿನಿಮಾದ ಹೆಚ್ಚಿನ ಕಲಾವಿದರು ನಾನ್ವೆಜ್ ಸಿನಿಮಾದಲ್ಲೂ ಇದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು, ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿ ದ್ದಾರೆ. ಜತೆಗೆ ಕುಸೇಲ್ದರಸೆ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್ ಪ್ರಮುಖ ಪಾತ್ರದಲ್ಲಿದ್ದಾರೆ“ ಎಂದವರು ಹೇಳಿದರು.
ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ ”ಚಿತ್ರದಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆಯಿಲ್ಲ, ಮನೋರಂಜನೆಯೂ ಕಡಿಮೆ ಇಲ್ಲ, ಸಂದೇಶ – ಕಥೆಯೂ ಅದ್ಭುತವಾಗಿದೆ. ನಾನ್ವೆಜ್ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ. ಪ್ರೀತಿಯ ಹಿಂದೆ ಹೋಗುತ್ತಿರುವ ಮುಗ್ಧ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆದ ಕಾರಣ ಇದು ಯುವ ಸಮುದಾಯವನ್ನು ಸೆಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳೊಂದಿಗೆ ಹೆತ್ತವರು ಜತೆಯಾಗಿ ಕುಳಿತು ನೋಡಬೇಕಾದ ಸಿನಿಮಾವಾಗಿದ್ದು, ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡು ಹೋಗಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್“ ಎಂದು ಹೇಳಿದರು.
ನಾಯಕನಟ ಅಥರ್ವ ಪ್ರಕಾಶ್ ಮಾತಾಡಿ, ”ನಾನ್ವೆಜ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಟೀಸರ್ನಲ್ಲಿರುವ ಪ್ರತಿಯೊಂದು ಅಂಶವೂ ಕುತೂಹಲ ಕೆರಳಿಸುತ್ತಿದ್ದು, ಒಂದು ಸೂಕ್ಷ್ಮ ವಿಷಯವನನ್ನು ಹಿಡಿದುಕೊಂಡು ಕಥೆಯನ್ನು ಎಷ್ಟು ಹಾಸ್ಯಮಯವಾಗಿ ಕೊಂಡೊಯ್ಯಲಾಗಿದೆ ಎಂಬುದನ್ನು ಟೀಸರ್ ತೋರಿಸುತ್ತಿದೆ. ಮಕ್ಕಳ ಮನಸ್ಸೇ ಹಾಗೆ. ವಿಜ್ಞಾನಿಗಳಂತೆ ಅವರು ಒಂದು ವಿಷಯಕ್ಕಾಗಿ ಶೋಧಿಸುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಒಂದು ಪ್ರಮುಖ ಟ್ವಿಸ್ಟ್ ಇದ್ದು, ಅದರ ಮೂಲಕ ಇಡೀ ಕಥೆಯನ್ನು ಸುಂದರವಾಗಿ ಹಾಸ್ಯದಿಂದಲೇ ಕೊಂಡೊಯ್ಯಲಾಗಿದೆ. ಟ್ರೆಂಡ್ನಲ್ಲಿರುವ ಎಲ್ಲ ಪ್ರಮುಖ ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಟೀಸರ್ ಸೂಪರ್ ಆಗಿದೆ. ಸಿನಿಮಾವಂತೂ ಭರ್ಜರಿ ಮನೋರಂಜನೆ ನೀಡಲಿದೆ“ ಎಂದರು.
ಮಲ್ಟಿಫ್ಲೆಕ್ಸ್ ಗಳಲ್ಲಿ 99 ರೂಪಾಯಿ! ; ತುಳು ಸಿನಿಮಾರಂಗದಲ್ಲಿ ಹೊಸತನ ಇಲ್ಲ” ಅನ್ನೋ ಮಾತು ಮತ್ತೆ ಮತ್ತೆ ಕೇಳಿಸೋ ಸಮಯದಲ್ಲೇ, ಆ ಮಾತಿಗೆ ನೇರ ಉತ್ತರ ಕೊಡುವಂತೆ ‘ನಾನ್ ವೆಜ್’ ಸಿನಿಮಾ ಫೆಬ್ರವರಿ 6ರಿಂದ ಚಿತ್ರಮಂದಿರಗಳಿಗೆ ಗ್ರಾಂಡ್ ಎಂಟ್ರಿ ಕೊಡ್ತಾ ಇದೆ. ಹೆಸರು ಕೇಳಿದ್ರೆ ಥ್ರಿಲ್ಲು, ವಿಷಯ ಕೇಳಿದ್ರೆ ಕುತೂಹಲ – ಕಚಗುಳಿ … ಒಟ್ಟಾರೆ ಇದು ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬೋ ಪ್ರಯತ್ನ. ಇತ್ತೀಚಿನ ವರ್ಷಗಳಲ್ಲಿ ತುಳು ಸಿನಿಮಾಗಳು ಪ್ರಯೋಗಾತ್ಮಕವಾಗಿ ಬಂದರೂ ಪ್ರೇಕ್ಷಕರವರೆಗೆ ತಲುಪೋದು ಕಷ್ಟವಾಗಿತ್ತು. ನಿರ್ಮಾಪಕರು ಬಂಡವಾಳ ಹೂಡೋದು ಯೋಚಿಸುವ ಸ್ಥಿತಿ. ಅಂಥ ಸಂದರ್ಭದಲ್ಲಿ ಕುಟುಂಬ ಸಮೇತ ಕೂತು ನೋಡಬಹುದಾದ, ಮನರಂಜನೆಯ ಭರ್ಜರಿ ಬಾಡೂಟ ಹಿಡಿದು ಬರೀ 99 ರೂಪಾಯಿಗಳಿಗೆ ‘ನಾನ್ ವೆಜ್’ ಚಿತ್ರ ಥಿಯೇಟರ್ಗೆ ಬರುತ್ತಿದೆ.
ಇಲ್ಲಿ ಪ್ರತಿಯೊಂದು ದೃಶ್ಯವೂ ಕುತೂಹಲ ಕೆರಳಿಸುತ್ತದೆ, ಸಾಕಷ್ಟು ನಗುವಿಗೂ ಕಾರಣವಾಗುತ್ತದೆ. ಮುಂದೇನು ಎಂಬ ಕುತೂಹಲ ಕೊನೆ ತನಕವೂ ಇರಲಿದೆ. ಪ್ರತಿಯೊಬ್ಬ ನಟ- ನಟಿಯರೂ ಅದ್ಭುತವಾಗಿ ನಟಿಸಿದ್ದಾರೆ. ಇನ್ನೇನು ಬೇಕು ಒಂದು ಸಿನಿಮಾ ಗೆಲ್ಲಲು? ಇಂಥದ್ದೊಂದು ಸಿನಿಮಾ ಫೆಬ್ರವರಿ 6ರಂದು ಬಿಡುಗಡೆಯಾಗಲಿದ್ದು, ಈಗಲೇ ಅದರ ಟೀಸರ್ ಎಲ್ಲರಲ್ಲೂ ಸಿನಿಮಾ ನೋಡಲು ಕಾತರಿಸುವಂತೆ ಮಾಡಿದೆ. ಅಂದ ಹಾಗೆ ಈ ಸಿನಿಮಾ ಯಾವುದೆಂಬ ಪ್ರಶ್ನೆಗೆ “ನಾನ್ವೆಜ್” ಎಂಬುದು ಉತ್ತರವಾಗಿದೆ. ಇದೊಂದು ಕುಟುಂಬ ಸಮೇತರಾಗಿ ಎಲ್ಲರೂ ಕುಳಿತು ನೋಡಬಹುದಾದ ಸಿನಿಮಾ. ಯಾಕೆಂದರೆ ಇದರಲ್ಲಿ ಎಲ್ಲೂ ದ್ವಂದ್ವಾರ್ಥವಾಗಲೀ, ಮುಜುಗರ ತರಿಸುವಂಥ ಸಂಭಾಷಣೆ ಅಥವಾ ದೃಶ್ಯವಾಗಲೀ ಇಲ್ಲವೇ ಇಲ್ಲ. ಮಕ್ಕಳ ಸಹಜ ಕುತೂಹಲಕ್ಕೆ ಉತ್ತರ ನೀಡುವಂಥ ಈ ಸಿನಿಮಾವನ್ನು ಪ್ರತಿಯೊಬ್ಬ ಹೆತ್ತವರೂ ತಮ್ಮ ಮಕ್ಕಳಿಗೆ ತೋರಿಸಲೇಬೇಕಾಗಿದೆ.
ಈ ಹಿಂದೆ ಸೂಪರ್ಹಿಟ್ ಹಾಗೂ ಅಸಂಖ್ಯ ದಾಖಲೆಗಳಿಗೆ ಕಾರಣವಾಗಿರುವ “ಚಾಲಿಪೋಲಿಲು” ಸಿನಿಮಾವನ್ನು ಕೊಟ್ಟಿರುವ ಪ್ರಕಾಶ್ ಪಾಂಡೇಶ್ವರ ಅವರು “ನಾನ್ವೆಜ್” ಸಿನಿಮಾದ ನಿರ್ಮಾಪಕರು. ಪ್ರಕಾಶ್ ಪಾಂಡೇಶ್ವರ ಅವರ ಸಿನಿಮಾ ಎಂದರೆ ಕೇಳುವುದೇ ಬೇಡ. ಅದರಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂಥ ಅತ್ಯುತ್ತಮ ವಿಷಯಗಳು ಇದ್ದೇ ಇರುತ್ತವೆ. ಸಾಲದ್ದಕ್ಕೆ ಈ ಸಿನಿಮಾಕ್ಕೆ ಯಶಸ್ವಿ ನಿರ್ದೇಶಕ ಕೆ.ಸೂರಜ್ ಶೆಟ್ಟಿ ಅವರ ನಿರ್ದೇಶನವೂ ಇರುವುದು ಮತ್ತೊಂದು ಪ್ಲಸ್ ಪಾಯಿಂಟ್. ಸೂರಜ್ ಶೆಟ್ಟಿ ಈ ಹಿಂದೆ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿದವರು. ಆದ್ದರಿಂದ ಪ್ರಕಾಶ್ ಪಾಂಡೇಶ್ವರ ಮತ್ತು ಸೂರಜ್ ಶೆಟ್ಟಿ ಜೋಡಿ ಕೆಲಸ ಮಾಡಿರುವ “ನಾನ್ವೆಜ್” ಸಿನಿಮಾದ ಬಗ್ಗೆ ಎಲ್ಲರಲ್ಲೂ ನಿರೀಕ್ಷೆ ಅಪಾರವಿದೆ. ಆ ನಿರೀಕ್ಷೆಯನ್ನು ಮೀರಿಸುವಂಥ ಸಿನಿಮಾವಾಗಿ ಇದು ಹೊರಹೊಮ್ಮುವುದು ಖಚಿತ. ಈ ಸಿನಿಮಾದಲ್ಲಿ ಬಾಲ್ಯದಲ್ಲಿ ಎಲ್ಲರೂ ಅನುಭವಿಸಿದ ಸನ್ನಿವೇಶಗಳ ಗುಚ್ಛಗಳಿವೆ. ಆದ್ದರಿಂದ ಇದೊಂದು ಎಲ್ಲರ ಜೀವನದ ನಿಜಕಥೆ ಎಂದೇ ಹೇಳಬಹುದು.
ಮಂಗಳೂರಿನ ಪ್ರತಿಭೆ ಅಥರ್ವ ಪ್ರಕಾಶ್ ಅವರ ಮನಸ್ಪರ್ಶಿ ಅಭಿನಯ, ನಾಯಕಿ ಸಂಜನಾ ಬುರ್ಲಿ ಅವರ ಆಕರ್ಷಕತೆ, ಹಾಸ್ಯದಲ್ಲಿ ಕಚಗುಳಿ ಇಡುವ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಪುಷ್ಪರಾಜ್ ಬೊಳ್ಳಾರ್, ವಿಸ್ಮಯ ವಿನಾಯಕ್ ಹಾಸ್ಯ, ನವೀನ್ ಡಿ ಪಡೀಲ್, ರೂಪಾ ವರ್ಕಾಡಿ ಇವರೆಲ್ಲರೂ ಈ ಸಿನಿಮಾದಲ್ಲಿರುವುದು ನಿರೀಕ್ಷೆ ದುಪ್ಪಟ್ಟಾಗಲು ಮತ್ತೊಂದು ಪ್ರಮುಖ ಕಾರಣ. ಅಂದ ಹಾಗೆ ಫೆ. 6ರಂದು ಬಿಡುಗಡೆಯಾಗಲಿರುವ ಈ ಸಿನಿಮಾವನ್ನು ಮಲ್ಟಿಪ್ಲೆಕ್ಸ್ನಲ್ಲೂ ಕೇವಲ 99 ರೂಪಾಯಿಗೆ ನೋಡಬಹುದು. ಇದು ಸಿನಿಮಾ ಪ್ರಿಯರಿಗೆ ಚಿತ್ರತಂಡದ ಉಡುಗೊರೆ. ಆದ್ದರಿಂದ ಇಂಥದ್ದೊಂದು ಸದವಕಾಶವನ್ನು ಯಾರೂ ಮಿಸ್ ಮಾಡಿಕೊಳ್ಳದೆ ಮಲ್ಪಿಪ್ಲೆಕ್ಸ್ನಲ್ಲಿ ಚಿತ್ರನೋಡಿ ನಕ್ಕು ಹಗುರಾಗಿ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸೂರಜ್ ಶೆಟ್ಟಿ, ನಟ ವಿಸ್ಮಯ ವಿನಾಯಕ,ನಟ ಅಥರ್ವ ಪ್ರಕಾಶ್ ಮತ್ತು ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.

Discover more from Coastal Times Kannada
Subscribe to get the latest posts sent to your email.








Discussion about this post