ಮಂಗಳೂರು: ಕರಾವಳಿ ಕರ್ನಾಟಕದ ಸಮುದ್ರದಲ್ಲಿ ಸಾವಿರಾರು ಮೀನುಗಾರರು ಪ್ರತಿದಿನ ಜೀವನೋಪಾಯಕ್ಕಾಗಿ ತೆರಳುತ್ತಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ತೀರದಿಂದ ನೂರಾರು ಬೋಟುಗಳು ಆಳ ಸಮುದ್ರಕ್ಕೆ ಹೋಗುತ್ತವೆ. ಆದರೆ, ಮೀನುಗಾರಿಕೆ ವೇಳೆ ತುರ್ತು ಪರಿಸ್ಥಿತಿ ಎದುರಾದಾಗ, ಅಸ್ವಸ್ಥತೆ, ಅಪಘಾತ, ಬೆಂಕಿ ಅವಘಡ ಅಥವಾ ಬೋಟಿನ ತಾಂತ್ರಿಕ ದೋಷ ತಕ್ಷಣದ ನೆರವು ತೀರಾ ಕಡಿಮೆ. ಈ ದೀರ್ಘಕಾಲದ ಕೊರತೆಯನ್ನು ಮನಗಂಡ ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘ ಮೂರು ವರ್ಷಗಳ ಹಿಂದೆ ತುರ್ತು ‘ಬೋಟ್ ಆಂಬ್ಯುಲೆನ್ಸ್’ ಅನ್ನು ಸ್ವಂತ ವೆಚ್ಚದಲ್ಲಿ ಸಿದ್ಧಪಡಿಸಿ ಕಾರ್ಯಾಚರಣೆಗೆ ತಂದಿದೆ.
ಸುಮಾರು ರೂ. 16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈ ಎಮರ್ಜೆನ್ಸಿ ಬೋಟ್ನಲ್ಲಿ ಸೈರನ್, ಕೆಂಪು ಎಚ್ಚರಿಕೆ ದೀಪಗಳು, ಸ್ಟ್ರೆಚರ್, ಆಮ್ಲಜನಕ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಲೈಫ್ ಜಾಕೆಟ್ ಗಳನ್ನು ಅಳವಡಿಸಲಾಗಿದೆ. ಸೈರನ್ ಶಬ್ದ ಕೇಳುತ್ತಿದ್ದಂತೆಯೇ ಇತರೆ ದೋಣಿಗಳು ದಾರಿ ಬಿಡುವಂತೆ ವ್ಯವಸ್ಥೆ ಮಾಡಲಾಗಿದೆ. ಮೈಕ್ ಮೂಲಕ ಮಾಹಿತಿ ನೀಡುವ ವ್ಯವಸ್ಥೆಯೂ ಇದ್ದು, ತೀರ ಪ್ರದೇಶದವರೊಂದಿಗೆ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ.
ಸೇವೆಯ ನಿರ್ವಹಣೆಗೆ ಮೂವರು ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಲಾಗಿದೆ. ಇವರು ಸಮುದ್ರದ ಕಠಿಣ ಪರಿಸ್ಥಿತಿಗಳಲ್ಲೂ ಈಜಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ದೋಣಿಗಳು ಮಗುಚಿದ ಸಂದರ್ಭಗಳಲ್ಲಿ ಉಸಿರಾಟದ ತೊಂದರೆಯಿಂದ ಸಂಭವಿಸುವ ಸಾವುಗಳನ್ನು ತಪ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಬೋಟ್ ನಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಶೀಘ್ರವಾಗಿ ದಡಕ್ಕೆ ತಲುಪಿಸಲು ಸಾಧ್ಯವಾಗುತ್ತಿದೆ.
ಈ ಬೋಟ್ ಹಲವು ಸಂದರ್ಭಗಳಲ್ಲಿ ಈ ಬೋಟ್ ಜೀವ ರಕ್ಷಣೆಗೆ ನೆರವಾಗಲಿದೆ. ಒಂದು ಮೀನುಗಾರಿಕಾ ಬೋಟ್ನಲ್ಲಿ 15–20 ಮಂದಿ ಇರುವ ವೇಳೆ ಒಬ್ಬರಿಗೆ ಆರೋಗ್ಯ ಸಮಸ್ಯೆ ಉಂಟಾದರೂ, ಈ ಎಮರ್ಜೆನ್ಸಿ ಬೋಟ್ ತಕ್ಷಣ ಕಾರ್ಯಪ್ರವೃತ್ತವಾಗುತ್ತದೆ. ಅನಾರೋಗ್ಯ ಪೀಡಿತನನ್ನು ಸುರಕ್ಷಿತವಾಗಿ ತೀರಕ್ಕೆ ತಂದು, ಅಗತ್ಯವಿದ್ದರೆ ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಸಂಘದ ಸ್ವಯಂಸೇವಕರು ನಿರ್ವಹಿಸುತ್ತಾರೆ.
ಸರ್ಕಾರಕ್ಕೆ ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಗದ ಕಾರಣ, ಉಳ್ಳಾಲ ವಲಯ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘ ಮುಂದೆ ಬಂದು ಈ ಕ್ರಮ ಕೈಗೊಂಡಿದೆ. ಕೆಲವು ದಾನಿಗಳ ಸಹಾಯದಿಂದ ಬೋಟ್ ಸಿದ್ಧಗೊಂಡಿದ್ದರೂ, ಇನ್ನೂ ಸುಮಾರು ರೂ 6 ಲಕ್ಷ ಸಾಲ ಬಾಕಿ ಉಳಿದಿದೆ. ಆದರೂ ಸಂಘವು ಕಾರ್ಯಾಚರಣೆಯನ್ನು ನಿಲ್ಲಿಸಿಲ್ಲ. ಜೀವ ರಕ್ಷಣೆಯೇ ಮೊದಲ ಆದ್ಯತೆ ಎಂದು ಹೇಳುತ್ತದೆ.
“ಸಮುದ್ರದಲ್ಲಿ ಮೀನುಗಾರಿಕೆ ಮಾಡುವಾಗ ಅನೇಕರು ಜೀವ ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಎಮರ್ಜೆನ್ಸಿ ಬೋಟ್ ಸಿಗಲಿಲ್ಲ. ಆದ್ದರಿಂದ ನಾವೇ ಇದನ್ನು ಸಿದ್ಧಪಡಿಸಿದ್ದೇವೆ. ಬೋಟ್ನಲ್ಲಿ ಫಸ್ಟ್ ಏಡ್, ಆಕ್ಸಿಜನ್, ಫೈರ್ ಕಿಟ್ ಮತ್ತು ಲೈಫ್ ಜಾಕೆಟ್ಗಳಿವೆ. ತುರ್ತು ಕರೆ ಬಂದ ಕೂಡಲೇ ನಾವು ಸ್ಥಳಕ್ಕೆ ಹೋಗುತ್ತೇವೆ. ಇದು ಹೆಸರು ಅಥವಾ ಪ್ರಚಾರಕ್ಕಾಗಿ ಅಲ್ಲ. ಮೀನು ಕಾರ್ಮಿಕರ ಜೀವ ಉಳಿಸುವುದಕ್ಕಾಗಿ ಮಾಡಿರುವ ಕೆಲಸ” ಎನ್ನುತ್ತಾರೆ.
ಸಮುದ್ರದ ಅಪಾಯಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ತುರ್ತು ರಕ್ಷಣಾ ವ್ಯವಸ್ಥೆ ಅತ್ಯಗತ್ಯ. ಉಳ್ಳಾಲದ ಮೀನುಗಾರರ ಸಂಘದ ‘ಬೋಟ್ ಆಂಬ್ಯುಲೆನ್ಸ್’ ಪ್ರಯತ್ನ ಮಾದರಿಯಾಗಿದ್ದು, ಇವರ ಸ್ವಯಂಸ್ಪೂರ್ತಿ ಮತ್ತು ಪರಸ್ಪರ ಸಹಕಾರವನ್ನು ತೋರಿಸುತ್ತದೆ. ಇದೇ ಮಾದರಿಯನ್ನು ಸರ್ಕಾರ ಬೆಂಬಲಿಸಿ ವಿಸ್ತರಿಸಿದರೆ, ಅನೇಕ ಅಮೂಲ್ಯ ಜೀವಗಳನ್ನು ಉಳಿಸಬಹುದು. ಪ್ರಸ್ತುತ ಒಂದು ಬೋಟ್ ಆ್ಯಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದ ಆರ್ಥಿಕ ನೆರವು ದೊರೆತಲ್ಲಿ ಇನ್ನಷ್ಟು ಆಧುನಿಕ ಉಪಕರಣಗಳನ್ನು ಅಳವಡಿಸಿ ಜಿಲ್ಲೆಯಾದ್ಯಂತ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಮೀನುಗಾರರ ಸಂಘ ಹೊಂದಿದೆ. ಕರಾವಳಿ ಭಾಗದ ಜೀವ ರಕ್ಷಣೆಯಲ್ಲಿ ಈ ಪ್ರಯತ್ನ ಮಾದರಿಯಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post