ಮಂಗಳೂರು : ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಪಣಂಬೂರು, ಕಸಬಾ ಬೆಂಗರೆ ನಿವಾಸಿಯಾದ ಮೊಹಮ್ಮದ್ ಸಿನಾನ್(19), ಕಸಬಾ ಬೆಂಗರೆ ನಿವಾಸಿ ಮೊಹಮ್ಮದ್ ಸಾಹಿಲ್(22), ಉಳ್ಳಾಲ ನಿವಾಸಿಯಾದ ಫೈಜಲ್ (35) ಹಾಗೂ ಪಡುಬಿದ್ರಿ ಕಂಚಿನಡ್ಕ ನಿವಾಸಿ ಮೊಹಮ್ಮದ್ ಸಾಹಿಲ್(18) ಎನ್ನಲಾಗಿದೆ.
ಬಂಧಿತರಿಂದ 2,15,000 ಮೌಲ್ಯದ 6 ಬೈಕ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳು ಮಂಗಳೂರು ನಗರದ ಗೂಡ್ಸ್ ಶೆಡ್ ಪರಿಸರದಲ್ಲಿ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದ್ದು ಈ ಕುರಿತು ಮಂಗಳೂರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 27ರಂದು ತೊಕ್ಕೊಟ್ಟು ಗ್ರಾಂಡ್ ಸಿಟಿ ಕಾಂಪ್ಲೆಕ್ಸ್ ಬಳಿ ಕಳವಾಗಿದ್ದ ಹೀರೋ ಹೊಂಡಾ ಸಿಟಿ ಸ್ಪ್ಲೆಂಡರ್ ಬೈಕ್, 28ರಂದು ಕೋಟೆಕಾರು ಕೊರಗಜ್ಜನ ಕಟ್ಟೆ ಬಳಿಯಿಂದ ಕಳವು ಮಾಡಿದ್ದ ಹೀರೋ ಹೊಂಡಾ ಸ್ಪ್ಲೆಂಡರ್, ಮಂಗಳೂರಿನ ಬಂದರು ಠಾಣೆ ವ್ಯಾಪ್ತಿಯ ಕಸಬಾ ಬೆಂಗ್ರೆ ಬಳಿ ಕಳವಾಗಿದ್ದ ಆಕ್ಟಿವಾ ಸ್ಕೂಟರ್, ಮಾ.27ರಂದು ಕದ್ರಿ ಠಾಣೆ ವ್ಯಾಪ್ತಿಯ ಕದ್ರಿ ಜಿಮ್ಮಿಸ್ ಸೂಪರ್ ಮಾರ್ಕೆಟ್ ಬಳಿಯಿಂದ ಕಳವು ಮಾಡಿದ್ದ ಯಮಹಾ ಎಫ್ ಝೆಡ್ ಬೈಕ್, ಬಂದರು ಠಾಣೆ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯ ದುಬೈ ಮಾರ್ಕೆಟ್ ಬಳಿಯಿಂದ ಕಳವು ಮಾಡಿದ್ದ ಯಮಹಾ ಎಫ್ ಝೆಡ್ ಬೈಕ್. ಕಂಕನಾಡಿ ನಗರ ಠಾಣೆ ವ್ಯಾಪ್ತಿಯ ನಂತೂರು ತಾರೆತೋಟ ಬಳಿಯಿಂದ ಮಾ.30ರಂದು ಕಳವು ಮಾಡಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಅನ್ನು ಪೊಲೀಸರು ತ್ವರಿತ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಹಾಗೂ ವಶಪಡಿಸಿಕೊಂಡ ವಾಹನಗಳನ್ನು ಮುಂದಿನ ಕ್ರಮಕ್ಕೆ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿಯವರಾದ ಪಿ ಎ ಹೆಗ್ಡೆ, ಇನ್ಸ್ ಫೆಕ್ಟರ್ ಶ್ಯಾಮ್ ಸುಂದರ್ ಹೆಚ್. ಎಂ, ಪಿಎಸೈ ಸುದೀಪ್, ಶರಣಪ್ಪ ಭಂಡಾರಿ, ಎಎಸೈ ಮೋಹನ್ ಕೆ.ವಿ ಹಾಗೂ ಸಿಸಿಬಿ ಸಿಬಂದಿಗಳು ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post