ಮಂಗಳೂರು, ಸೆ.5 : ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ಪೆರ್ನೆಯಲ್ಲಿ ಹಟ್ಟಿಯಿಂದ ಹಸುವನ್ನು ಕದ್ದು ಅಲ್ಲಿಯೇ ತೋಟದಲ್ಲಿ ಕಡಿದು ಮಾಂಸಗೈದ ಪ್ರಕರಣದಲ್ಲಿ ಮಂಗಳೂರಿನ ಕುದ್ರೋಳಿಯ ನಿವಾಸಿ, ಬೀಫ್ ಸ್ಟಾಲ್ ಮಾಲಕ ಮಹಮ್ಮದ್ ಮನ್ಸೂರ್ (48), ಉಳ್ಳಾಲ ಚೆಂಬುಗುಡ್ಡೆ ನಿವಾಸಿ ಇರ್ಷಾದ್ (34), ಮಂಗಳೂರು ಕಣ್ಣೂರು ನಿವಾಸಿ ಅಬ್ದುಲ್ ಅಝೀಮ್ (18) ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪೆರ್ನೆಯಲ್ಲಿ ಗುರುವಾರ ನಸುಕಿನಲ್ಲಿ ದೇಜಪ್ಪ ಮೂಲ್ಯ ಎಂಬವರ ಮನೆ ಹಟ್ಟಿಯಲ್ಲಿದ್ದ ಗಬ್ಬದ ಹಸುವನ್ನು ಕದ್ದೊಯ್ದು ಅವರದೇ ತೋಟದಲ್ಲಿ ಕಡಿದು ಮಾಂಸ ಮಾಡಿ ಒಯ್ಯಲಾಗಿತ್ತು. ದುಷ್ಕರ್ಮಿಗಳ ಕೃತ್ಯದ ಭಾರೀ ಆಕ್ರೋಶ ಕೇಳಿಬಂದಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹ ಮಾಡಿದ್ದರು. ಪುತ್ತೂರು ಶಾಸಕ ಅಶೋಕ್ ರೈ ಕೂಡ ಆಕ್ರೋಶ ವ್ಯಕ್ತಪಡಿಸಿ, ಹಸುವನ್ನು ಕದ್ದು ಹತ್ಯೆಗೈದ ಆರೋಪಿಗಳ ಕೈ ಕಡಿಯಬೇಕೆಂದು ಹೇಳಿದ್ದರು.
ಪೊಲೀಸರು ತನಿಖೆ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ಆರೋಪಿಗಳು ಆ.14ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತುಂಬೆ ಬಳಿ ಜಾನುವಾರು ಕಳವುಗೈದು, ಅಲ್ಲಿಯೇ ಪರಿಸರದಲ್ಲಿ ಹತ್ಯೆಗೈದು ಮಾಂಸ ಮಾಡಿದ್ದು ಪತ್ತೆಯಾಗಿತ್ತು. ಮರುದಿನ ಅದರ ಅವಶೇಷಗಳು ಅಲ್ಲಿಯೇ ಸಮೀಪದಲ್ಲಿ ಪತ್ತೆಯಾಗಿತ್ತು. ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಕ್ರ:125/2025, ಕಲಂ: 303(2), BNS, ಕಲಂ: 4,12 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ-2020 ಹಾಗೂ ಕಲಂ 11(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post