ಮಂಗಳೂರು, ಫೆ 07: ನಗರದ ಶಕ್ತಿನಗರದ ಬಳಿಯ ಖಾಸಗಿ ನರ್ಸಿಂಗ್ ಸಂಸ್ಥೆಯ ಹಾಸ್ಟೆಲ್ನಲ್ಲಿ ಕಲುಷಿತ ಆಹಾರ ಸೇವನೆಯಿಂದ 137 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಪ್ರಕರಣದ ಹಿನ್ನಲೆಯಲ್ಲಿ ಖಾಸಗಿ ಕಾಲೇಜು ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಪೋಷಕರು, ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಯ ನಡುವೆ ಫೆ.7ರಂದು ಸಭೆ ನಡೆಯಿತು.
ಸಭೆಯಲ್ಲಿ ಹಾಸ್ಟೆಲ್ ಆಹಾರ ಸೇವಿಸಿದ ನಂತರ ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಹಾಸ್ಟೆಲ್ನಲ್ಲಿನ ಆಹಾರ, ನೀರು ಮತ್ತು ಸೌಲಭ್ಯಗಳ ಗುಣಮಟ್ಟ ಸಮಸ್ಯೆ ಕುರಿತು ಪೋಷಕರು ಪ್ರಸ್ತಾಪಿಸಿದ್ದು, ಫೆ. 5 ರಂದು ಹಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರೂ ಸರಿಯಾದ ಸಮಯಕ್ಕೆ ಪೋಷಕರಿಗೆ ಮಾಹಿತಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದರು.
ಇದೇ ವೇಳೆ ಓರ್ವ ಪೋಷಕರು, ’ಪ್ರತಿ ವರ್ಷ ಆಹಾರ ಕಲುಷಿತಗೊಂಡು ಇಂತಹ ಘಟನೆ ಸಂಭವಿಸುತ್ತಿದೆ ಆದರೆ ಆಡಳಿತ್ ಮಂಡಳಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಆರೋಪಿಸಿದರು. ಫೆ. 5 ರಂದು ಭೋಜನದ ನಂತರ, ಸೋಮವಾರ ಫೆಬ್ರವರಿ 6 ರಂದು ಬೆಳಿಗ್ಗೆ 4 ಗಂಟೆಗೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಾಂತಿ, ತಲೆಸುತ್ತು ಸೇರಿದಂತೆ ಅಸ್ವಸ್ಥತೆ ಕಾಡಿತ್ತು.



ಈ ಕುರಿತು ಮಾತನಾಡಿದ ಪ್ರಾಂಶುಪಾಲರಾದ ಶಾಂತಿ ಲೋಬೋ , “ಫೆಬ್ರವರಿ 6 ರಂದು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು, ಆದರೆ ಕೆಲವು ವಿದ್ಯಾರ್ಥಿಗಳು ಮಾತ್ರ ವಾಂತಿ ಮತ್ತು ಸುಸ್ತುವಿನಿಂದ ಬಳಲುತ್ತಿದ್ದು 20 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಸಂಜೆಯೇ 20 ವಿದ್ಯಾರ್ಥಿಗಳನ್ನು ಡಿಸ್ಚಾರ್ಜ್ ಮಾಡಲಾಗಿತ್ತು”.
“ಆದರೆ ಇದಾದ ಬಳಿಕ ರಾತ್ರಿ ಮತ್ತೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಪರಿಸ್ಥಿತಿ ಸರಿಪಡಿಸುವವರೆಗೆ ಕಾಲೇಜು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಪಾಲಕರು ಎತ್ತಿರುವ ಎಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಇವೆಲ್ಲವನ್ನು ಸರಿಪಡಿಸುವವರೆಗೆ ಕಾಲೇಜು ತೆರೆಯುವುದಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಚೇತರಿಸಿಕೊಂಡ ನಂತರ ಡಿಸ್ಚಾರ್ಜ್ ಆಗಿದ್ದಾರೆ. 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾತ್ರ ಇನ್ನು ಆಸ್ಪತ್ರೆಯಲ್ಲಿದ್ದು ಅವರ ಆರೋಗ್ಯ ಸ್ಥಿರವಾಗಿದೆ. ವಿದ್ಯಾರ್ಥಿಗಳ ಆಸ್ಪತ್ರೆ ವೆಚ್ಚವನ್ನು ಭರಿಸುವುದಾಗಿ ಆಡಳಿತ ಮಂಡಳಿ ತಿಳಿಸಿದೆ” ಎಂದು ಹೇಳಿದ್ದಾರೆ.
ದಕ್ಷಿಣ ವಲಯದ ಎಸಿಪಿ ಧನ್ಯ ಮಾತನಾಡಿ, ‘ಪಾಲಕರು ಬೇಡಿಕೆ ಮತ್ತು ಸಮಸ್ಯೆಗಳನ್ನು ಆಡಳಿತ ಮಂಡಳಿಯ ಮುಂದಿಟ್ಟಿದ್ದಾರೆ. ಆಡಳಿತ ಮಂಡಳಿಯು ಪೋಷಕರ ಮುಂದಿಟ್ಟಿರುವ ಸಮಸ್ಯೆಗಳನ್ನು ಪರಿಹರಿಸಿ ಸಮಸ್ಯೆಯನ್ನು ನಿವಾರಿಸುತ್ತದೆ. ಆಡಳಿತ ಮಂಡಳಿಯು ಸ್ಪಂದಿಸದಿದ್ದರೆ ಅಥವಾ ಸರಿಪಡಿಸಲು ವಿಫಲವಾದರೆ, ಪೊಲೀಸ್ ಇಲಾಖೆ ಪೋಷಕರಿಗೆ ಸಹಾಯ ಮಾಡಲು ಸಿದ್ದವಾಗಿದೆ ” ಎಂದು ಹೇಳಿದ್ದಾರೆ.



ಸಿಟಿ ಆಸ್ಪತ್ರೆ ಮತ್ತು ಕಾಲೇಜು ಆಡಳಿತದ ವಿರುದ್ಧ ಎಫ್ಐಆರ್ ದಾಖಲು ; ಶಕ್ತಿನಗರದ ಸಿಟಿ ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ವಿಷಾಹಾರ ಸೇವನೆ ಪ್ರಕರಣದ ಬಗ್ಗೆ ಕದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್, ಆಸ್ಪತ್ರೆ ಮತ್ತು ಕಾಲೇಜು ಆಡಳಿತ ನಿರ್ಲಕ್ಷ್ಯ ವಹಿಸಿದ್ದಾಗಿ ದೂರು ನೀಡಿದ್ದು ಅದರಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಶಕ್ತಿನಗರದ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್ ನಲ್ಲಿ ವಿಷಾಹಾರ ಸೇವನೆಯಿಂದಾಗಿ ದಿಢೀರ್ ಆಗಿ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ನಿನ್ನೆ ಮಧ್ಯಾಹ್ನದಿಂದಲೇ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದ್ದು ಕಾಲೇಜು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಸಂಜೆ ವೇಳೆಗೆ ಶಕ್ತಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ತಪಾಸಣೆ ನಡೆಸಿದ್ದು ಜಾಗ್ರತೆ ವಹಿಸಲು ಸೂಚಿಸಿದ್ದರು. ಅಲ್ಲದೆ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಕೈಗೊಂಡಿದ್ದರು. ಈ ಬಗ್ಗೆ ಸೂಕ್ತ ಕ್ರಮ ಪಾಲಿಸದಿರುವ ಆಡಳಿಯ ಮಂಡಳಿಯ ವಿರುದ್ಧ ಕ್ರಮಕೈಗೊಳ್ಳುವಂತೆ ದ.ಕ. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ್ ಅವರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post