ಬಂಟ್ವಾಳ : ವಿಶ್ವಕರ್ಮರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಅನೇಕ ಕೊಡುಗೆಗಳನ್ನು ನೀಡಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ್ ಮನವಿ ಮಾಡಿದ್ದಾರೆ.

ಬಿ.ಸಿ.ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಿದ್ದಾರೆ, ಪುತ್ತೂರು ಕ್ಷೇತ್ರದಲ್ಲಿಯೂ ಬಿಜೆಪಿ ಸಮರ್ಥ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ರನ್ನು ಕಣಕ್ಕೆ ಇಳಿಸಿದ್ದು, ಎಲ್ಲರೂ ಬಿಜೆಪಿ ಅಭ್ಯರ್ಥಿಗಳಿಗೆ ಮತಹಾಕುವ ಮೂಲಕ ಬಿಜೆಪಿಗೆ ಶಕ್ತಿತುಂಬುವ ಕಾರ್ಯ ನಡೆಸಬೇಕು ಎಂದವರು ಹೇಳಿದರು. ಕೋಲಾರ ಹಾಗೂ ಗುಲ್ಬರ್ಗಾದಲ್ಲಿ 10 ಕೋಟಿ ವೆಚ್ಚದ ಶಿಲ್ಪಕಲಾ ಭವನ ಸ್ಥಾಪನೆ, ಶಿಗ್ಗಾಂವ್ ನಲ್ಲಿ 1.90 ಕೋಟಿವೆಚ್ಚದ ಸಮುದಾಯ ಭವನ ನಿರ್ಮಾಣ, ಮಠಗಳಿಗೆ ನೆರವು ಸಹಿತ ವಿವಿಧೆಡೆಗಳಲ್ಲಿ ತರಬೇತಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ನೆರವು ನೀಡಿದ್ದು, ಸಾಮಾಜಿಕ ಸುಧಾರಣೆಗೆ ಅನೇಕ ಅನುಕೂಲಗಳನ್ನೂ ಮಾಡಿಕೊಟ್ಟಿದೆ ಎಂದರು.
ಪ್ರತೀ ಜಿಲ್ಲೆಯಲ್ಲಿಯೂ ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಸಮುದಾಯ ಭವನಗಳ ಸ್ಥಾಪನೆ, ತರಬೇತಿ ಕೇಂದ್ರಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು. ಕರ್ನಾಟಕದಲ್ಲಿ ಜ್ಯುವೆಲ್ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಇದೆಲ್ಲವೂ ಸಾಕಾರಗೊಳ್ಳಲಿದೆ ಎಂದರು.

ಈ ಸಂದರ್ಭ ವಿಶ್ವಕರ್ಮ ಸಮಾಜದ ಮುಖಂಡರಾದ ಸಂತೋಷ್ ಪತ್ತಾರ್,ಉಪ್ಪಾರ ಸಮಾಜದ ಮುಖಂಡರಾದ ನಾಗರಾಜ್ ಉಪ್ಪಾರ್, ಬೆಂಗಳೂರು ಬಿಜೆಪಿ ಮುಖಂಡರಾದ ಧರ್ಮವೀರ್ ಸಿಂಗ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post