ಜಮ್ಮು : ಈ ವರ್ಷದ ಅಮರನಾಥ ಯಾತ್ರೆ ಆರಂಭವಾಗಿ 4 ದಿನ ಕಳೆದಿದ್ದು, ಅಷ್ಟರಲ್ಲೇ ಒಂದು ಕಹಿ ಸುದ್ದಿ ಹೊರಬಿದ್ದಿದೆ. ಇಲ್ಲಿನ ಭಗವತಿ ನಗರ ಯಾತ್ರಿ ನಿವಾಸದ ಬಳಿ ಮಲಗಿದ್ದಾಗ ಹಾವು ಕಚ್ಚಿ ಉತ್ತರ ಪ್ರದೇಶದ ಯಾತ್ರಿಕರೊಬ್ಬರು ಸಾವಿಗೀಡಾಗಿದ್ದಾರೆ. ಇದು ಯಾತ್ರೆಯ ಮೊದಲ ಸಾವಾಗಿದೆ.
ಮೃತರನ್ನು ಅಮಿತ್ ಕುಮಾರ್ (42) ಎಂದು ಗುರುತಿಸಲಾಗಿದೆ. ಇವರು, ಉತ್ತರ ಪ್ರದೇಶದ ಕಾನ್ಪುರ ನಗರ ನಿವಾಸಿ. ಹಾವು ಕಡಿದ ಬಳಿಕ ಅವರನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿ) ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಜಮ್ಮುವಿನ ಭಗವತಿ ನಗರದ ಮುಖ್ಯ ಯಾತ್ರಿ ನಿವಾಸದ ಬಳಿಯ ಪಾದಚಾರಿ ಮಾರ್ಗದಲ್ಲಿ ಅಮಿತ್ ಅವರು ಮಲಗಿದ್ದಾಗ ಹಾವು ಕಚ್ಚಿತು ಎಂದು ಅವರೊಂದಿಗೆ ಬಂದ ಸಹ ಯಾತ್ರಿಕರು ತಿಳಿಸಿದ್ದಾರೆ. ನಂತರ ಅವರನ್ನು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಯಿತು.
ವೈದ್ಯರ ಪ್ರಯತ್ನದ ಹೊರತಾಗಿಯೂ, ಅವರ ಸ್ಥಿತಿ ಹದಗೆಟ್ಟಿತು. ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ಮೃತರ ಜೊತೆ ಅವರ ಸ್ನೇಹಿತ ರಾಜೇಶ್ ಶುಕ್ಲಾ ಕೂಡ ಇದ್ದರು. ಅವರು ಇತರ ಯಾತ್ರಿಕರೊಂದಿಗೆ ಆಸ್ಪತ್ರೆಯಲ್ಲಿ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಶವವನ್ನು ಜಿಎಂಸಿ ಜಮ್ಮುವಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಜಿಎಂಸಿ ವೈದ್ಯಕೀಯ ಅಧೀಕ್ಷಕ ಡಾ. ವೀರೇಂದ್ರ ತ್ರಿಶಾಲ್ ಅವರು ಮಾಧ್ಯಮಕ್ಕೆ ಈ ಬಗ್ಗೆ ದೃಢಪಡಿಸಿದರು. ಇಂದು ಬೆಳಗ್ಗೆ ಹಾವು ಕಡಿತಕ್ಕೆ ತುತ್ತಾದ ಯಾತ್ರಿಕರೊಬ್ಬರು ಆಸ್ಪತ್ರೆಗೆ ಬಂದರು. ಪರಿಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ಕಾನೂನು ವಿಧಿಗಳು ಪೂರ್ಣಗೊಂಡ ನಂತರ, ಸಂಜೆ 5 ಗಂಟೆ ಸುಮಾರಿಗೆ ಮೃತದೇಹವನ್ನು ಜೊತೆಗಿದ್ದ ಯಾತ್ರಾರ್ಥಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಡಾ.ತ್ರಿಶಾಲ್ ಹೇಳಿದರು.

Discover more from Coastal Times Kannada
Subscribe to get the latest posts sent to your email.








Discussion about this post