ಸುಳ್ಯ : ದೇಶಾದ್ಯಂತ “ತೂಗುಸೇತುವೆಗಳ ಸರದಾರ” ಎಂದೇ ಪ್ರಸಿದ್ಧಿ ಪಡೆದಿದ್ದ ಪದ್ಮಶ್ರೀ ಪುರಸ್ಕೃತ ಸುಳ್ಯದ ಡಾ. ಗಿರೀಶ್ ಭಾರದ್ವಾಜ್ ಅವರಿಗೆ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಕುಟುಂಬಸ್ಥರು, ಬಂಧು – ಬಳಗ, ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾರವಾದ ಹೃದಯದಿಂದ ಅಂತಿಮ ನಮನ ಸಲ್ಲಿಸಿದರು.
ಜಿಲ್ಲಾಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಿ, ಪಾರ್ಥಿವ ಶರೀರಕ್ಕೆ ಪುಷ್ಪನಮನ ಅರ್ಪಿಸಲಾಯಿತು. ಗೌರವ ವಂದನೆಯೊಂದಿಗೆ ಅಂತ್ಯಕ್ರಿಯೆಯ ವಿಧಿವಿಧಾನಗಳು ನೆರವೇರಿದವು. ತಮ್ಮ ವಿನೂತನ ತಾಂತ್ರಿಕ ಸಾಧನೆಗಳ ಮೂಲಕ ದೇಶಾದ್ಯಂತ ಹೆಸರಾಗಿದ್ದ ಡಾ. ಭಾರದ್ವಾಜ್ ಅವರ ಅಗಲಿಕೆ ಸಾರ್ವಜನಿಕರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.


ಅಂತ್ಯಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಆರ್. ಅರುಣ್ ಕುಮಾರ್, ಸುಳ್ಯ ತಹಶೀಲ್ದಾರ್ ಮಂಜುಳಾ, ರಾಜ್ಯ ಕಾರ್ಮಿಕ ವೇತನ ಸಲಹಾ ಮಂಡಳಿ ಸದಸ್ಯ ಟಿ. ಎಂ. ಶಾಹಿದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಗೌರವ ನಮನ ಸಲ್ಲಿಸಿದರು.
ದುರ್ಗಮ ಪ್ರದೇಶಗಳ ಜನರ ಬದುಕಿಗೆ ಹೊಸ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಡಿಮೆ ವೆಚ್ಚದಲ್ಲಿ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿದ್ದ ಡಾ. ಗಿರೀಶ್ ಭಾರದ್ವಾಜ್ ಅವರ ಸೇವೆಯನ್ನು ಗಣ್ಯರು ಈ ಸಂದರ್ಭದಲ್ಲಿ ಸ್ಮರಿಸಿದರು. ಅವರ ತಾಂತ್ರಿಕ ಪ್ರತಿಭೆ, ಸರಳ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಿಂತನೆ ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿದೆ.
“ಜನಸೇವೆಯೇ ನಿಜವಾದ ಸಾಧನೆ” ಎಂಬ ಸಂದೇಶವನ್ನು ತಮ್ಮ ಬದುಕಿನ ಮೂಲಕ ಸಾರಿದ ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆಯಿಂದ ಸಮಾಜವು ಓರ್ವ ಅಪರೂಪದ ತಾಂತ್ರಿಕ ತಜ್ಞ, ಮಾನವತಾವಾದಿ ಹಾಗೂ ಜನಪರ ಚಿಂತಕನನ್ನು ಕಳೆದುಕೊಂಡಿದೆ. ಎಂದು ಶ್ರದ್ಧಾಂಜಲಿ ಸಲ್ಲಿಸಿದವರು ಅಭಿಪ್ರಾಯಪಟ್ಟರು. ಅಂತಿಮ ದರ್ಶನಕ್ಕಾಗಿ ರಾಜ್ಯದ ವಿವಿಧ ಭಾಗಗಳಿಂದ ಸಾರ್ವಜನಿಕರು ಆಗಮಿಸಿ ಪುಷ್ಪನಮನ ಸಲ್ಲಿಸಿದರು.

Discover more from Coastal Times Kannada
Subscribe to get the latest posts sent to your email.








Discussion about this post