ಮಂಗಳೂರು, ನ.6 : ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಇದರ ನವೀಕೃತ ಕಚೇರಿ ವಿಶ್ವಸೌಧ ಕಟ್ಟಡ ಉದ್ಘಾಟನೆ ಮತ್ತು ಸೊಸೈಟಿಯ ವಜ್ರಮಹೋತ್ಸವದ ಸಮಾರೋಪ ಸಮಾರಂಭ ನ.9ರಂದು ಕೊಟ್ಟಾರದಲ್ಲಿ ನಡೆಯಲಿದೆ.
ನವೀಕೃತ ವಿಶ್ವಸೌಧ ಕಟ್ಟಡವನ್ನು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಉದ್ಘಾಟಿಸುವರು. ನವೀಕೃತ ಆಡಳಿತ ಕಚೇರಿಯನ್ನು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ಮಾಡಲಿದ್ದಾರೆ. ಸ್ಪೀಕರ್ ಯುಟಿ ಖಾದರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಕೆನರಾ ಜುವೆಲ್ಲರ್ಸ್ ಮಾಲಕ ಧನಂಜಯ ಪಾಲ್ಕೆ, ಅಯೋಧ್ಯ ರಾಮಲಲ್ಲಾ ಮೂರ್ತಿಯ ನಿರ್ಮಾತೃ ಮೈಸೂರಿನ ಅರುಣ್ ಯೋಗಿರಾಜ್, ಮಂಗಳೂರು ಉತ್ತರ- ದಕ್ಷಿಣ ಕ್ಷೇತ್ರದ ಶಾಸಕರು ಉಪಸ್ಥಿತಿ ಇರಲಿದ್ದಾರೆ ಎಂದು ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಸೊಸೈಟಿ ಅಸ್ತಿತ್ವಕ್ಕೆ ಬಂದು ಯಶಸ್ವಿ 60 ವರ್ಷಗಳಾಗಿದ್ದು ಈಗ ವಜ್ರ ಮಹೋತ್ಸವ ಆಚರಿಸುತ್ತಿದೆ. ಕಳೆದ 33 ವರ್ಷಗಳಿಂದ ಲೆಕ್ಕ ಪರಿಶೋಧನೆಯಲ್ಲಿ ಎ ವರ್ಗದ ಮಾನ್ಯತೆ ಪಡೆದಿದೆ. 253 ಕೋಟಿ ಠೇವಣಿ ಹೊಂದಿದ್ದು, 240 ಕೋಟಿ ಸಾಲ, 51 ಕೋಟಿ ಹೂಡಿಕೆ ಬಂಡವಾಳ ಹೊಂದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ 18 ಶಾಖೆಗಳಿದ್ದು ವಾರ್ಷಿಕ 18 ಪರ್ಸೆಂಟ್ ಡಿವಿಡೆಂಟ್ ನೀಡಲಾಗುತ್ತಿದೆ. ಚಿನ್ನದ ಕೆಲಸ ಸೇರಿ ಕುಸುರಿ ಕೌಶಲ್ಯದಲ್ಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಎಸ್ ಕೆಜಿಐ ಪಾಲ್ಕೆ ಪ್ರಶಸ್ತಿ ನೀಡುತ್ತ ಬಂದಿದ್ದೇವೆ.
ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆ ಮಾಡಿದ 363 ವಿದ್ಯಾರ್ಥಿಗಳಿಗೆ 11.70 ಲಕ್ಷ ವಿದ್ಯಾರ್ಥಿ ವೇತನ ನೀಡಲಾಗಿದೆ. 2024ನೇ ವರ್ಷವನ್ನು ವಜ್ರ ಮಹೋತ್ಸವ ವರ್ಷವೆಂದು ಆಚರಿಸುತ್ತಿದ್ದು 60 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ಉಪಾಧ್ಯಕ್ಷ ಆನಂದ ಆಚಾರ್ಯ ಮತ್ತಿತರರು ಇದ್ದರು.
Discover more from Coastal Times Kannada
Subscribe to get the latest posts sent to your email.








Discussion about this post