ಉಳ್ಳಾಲ, ಮೇ 7 : ಬೈಕ್ ಮತ್ತು ಆಟೋ ರ್ಯಾಲಿ ನಡೆಯುತ್ತಿದ್ದಾಗ ಎಸ್ಡಿಪಿಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ. ಉಳ್ಳಾಲದ ಅಬ್ಬಕ್ಕ ವೃತ್ತದಿಂದ ದೇರಳಕಟ್ಟೆಯವರೆಗೆ ಎಸ್ಡಿಪಿಐ ಹಮ್ಮಿಕೊಂಡಿದ್ದ ಆಟೋ ರಿಕ್ಷಾ ಹಾಗೂ ಬೈಕ್ ರ್ಯಾಲಿಯ ಸಂದರ್ಭದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದ ವಾಹನ ಚಾಲಕನಿಗೆ ಹಲ್ಲೆ ನಡೆಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪ ಘಟನೆ ನಡೆದಿದೆ.
ಕಾಂಗ್ರೆಸ್ ಕಾರ್ಯಕರ್ತ ನೌಫಾಲ್ (35) ಹಲ್ಲೆಗೊಳಗಾಗಿದ್ದಾರೆ. ನಾಟೆಕಲ್ ಸಮೀಪ ಅಸೈಗೋಳಿಯಿಂದ ಚೆಂಬುಗುಡ್ಡೆ ಸಾರ್ವಜನಿಕ ಸಭೆಗೆ ತೆರಳುತ್ತಿದ್ದ ಪ್ರಚಾರದ ವಾಹನ ಎಸ್ಡಿಪಿಐ ರ್ಯಾಲಿಗೆ ನಾಟೆಕಲ್ ಸಮೀಪ ಎದುರಾಗಿತ್ತು. ಎಸ್ಡಿಪಿಐ ಕಾರ್ಯಕರ್ತರ ಬೈಕ್ ಹಾಗೂ ರಿಕ್ಷಾ ರ್ಯಾಲಿಯಿಂದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಕಾಂಗ್ರೆಸ್ ಪರ ಹಾಡನ್ನು ಚುನಾವಣಾ ಪ್ರಚಾರ ವಾಹನದಲ್ಲಿ ಹಾಕಲಾಗಿತ್ತು. ಇದಕ್ಕೆ ಎಸ್ಡಿಪಿಐ ಕಾರ್ಯಕರ್ತರು ಆಕ್ಷೇಪಿಸಿ, ನಿಲ್ಲಿಸುವಂತೆ ಸೂಚಿಸಿದ್ದರು. ಗಣನೆಗೆ ತೆಗೆದುಕೊಳ್ಳದ ಚಾಲಕ ವಾಹನಕ್ಕೆ ಅಡ್ಡ ಇಟ್ಟವರಿಗೆ ಹಾರ್ನ್ ಹಾಕಲು ಆರಂಭಿಸಿದ್ದಾರೆ. ಇದರಿಂದ ಕೆರಳಿದ ಎಸ್ಡಿಪಿಐ ಕಾರ್ಯಕರ್ತರು ಚಾಲಕ ನೌಫಾಲ್ ಕಾಲರ್ ಪಟ್ಟಿ ಹಿಡಿದೆಳೆದು ಹಲ್ಲೆ ನಡೆಸಿದ್ದಾರೆ. ಐಫೋನ್ ಕಸಿದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಗಾಯಾಳು ನೌಫಾಲ್ನನ್ನು ನಾಟೆಕಲ್ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ದೇರಳಕಟ್ಟೆ ಸಮೀಪ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು. ತದನಂತರ ಎಸ್ಡಿಪಿಐ ಕಾರ್ಯಕರ್ತನೊಬ್ಬನನ್ನು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇರಳಕಟ್ಟೆಯಲ್ಲಿ ನಡೆಯುತ್ತಿದ್ದ ಎಸ್ಡಿಪಿಐ ಸಾರ್ವಜನಿಕ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಘಟನಾ ಸ್ಥಳಕ್ಕೆ ಉಪ ಪೊಲೀಸ್ ಆಯುಕ್ತರುಗಳಾದ ಅಂಶು ಕುಮಾರ್ ಐಪಿಎಸ್, ಬಿ.ಪಿ ದಿನೇಶ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತೆ ಧನ್ಯ ಎನ್. ನಾಯಕ್ ಹಾಗೂ ಉಳ್ಳಾಲ ಮತ್ತು ಕೊಣಾಜೆ ಠಾಣಾ ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post