ಬಂಟ್ವಾಳ, ಸೆ.7: ನವದಂಪತಿ ಪ್ರಯಾಣಿಸುತ್ತಿದ್ದ ಆಲ್ಟೋ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿಯಾಗಿ ಬಳಿಕ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಬಿಸಿ ರೋಡ್ ಬಳಿಯ ತಲಪಾಡಿಯಲ್ಲಿ ನಡೆದಿದೆ. ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದು ಪತಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನೀಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾವನ್ನಪ್ಪಿದ ನವವಿವಾಹಿತ ಯುವತಿ. ಘಟನೆಯಿಂದ ಗಂಭೀರ ಗಾಯಗೊಂಡ ಅನೀಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೆಪ್ಟೆಂಬರ್ 5 ರಂದು ಬಂಟ್ವಾಳ ತಾಲೂಕಿನ ದೇಂತಡ್ಕ ದೇವಸ್ಥಾನದಲ್ಲಿ ಇವರ ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮ ಸಂಬಂಧಿಸಿ ದೇಂತಡ್ಕ ದೇವಸ್ಥಾನಕ್ಕೆ ಬಂದು ಹಿಂತಿರುಗುವಾಗ ಪತ್ನಿ ಮನೆಗೆ ತೆರಳುತ್ತಿದ್ದಾಗ ಭೀಕರ ಅಪಘಾತ ನಡೆದಿದೆ
ಆಲ್ಟೋ ಕಾರನ್ನು ಚಲಾಯಿಸುತ್ತಿದ್ದ ಅನೀಶ್ ವೇಗವಾಗಿದ್ದಾಗಲೇ ನಿಯಂತ್ರಣ ತಪ್ಪಿದ್ದು ಏಕಮುಖ ರಸ್ತೆಯಿಂದ ಡಿವೈಡರ್ ಮೇಲೆ ಹಾರಿ ವಿರುದ್ಧ ದಿಕ್ಕಿನಿಂದ ಮಂಗಳೂರು ಕಡೆಯಿಂದ ಬಿ.ಸಿ ರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್ಟಿ.ಸಿ ಬಸ್ಸಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು ಸಹಪ್ರಯಾಣಿಕೆಯಾಗಿದ್ದ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Discussion about this post