ಉಡುಪಿ, ಮೇ.10: ಟೂರಿಸ್ಟ್ ಕಾರಿನಲ್ಲಿ ಶವವನ್ನು ಕಟ್ಟಿ ಡಿಕ್ಕಿಯಲ್ಲಿ ಇಟ್ಟು ಒಯ್ಯುತ್ತಿದ್ದಾಗ ಬೈಂದೂರಿನ ಶಿರೂರ್ ಟೋಲ್ ಗೇಟ್ ಬಳಿ ಆಂಬುಲೆನ್ಸ್ ಚಾಲಕನೊಬ್ಬ ಅಡ್ಡಗಟ್ಟಿ ಟೂರಿಸ್ಟ್ ಕಾರು ಚಾಲಕನನ್ನು ದಬಾಯಿಸಿದ ಪ್ರಸಂಗದ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ ಮೂಲದ ಕುಟುಂಬ ಉಡುಪಿಯ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವ ಒಯ್ಯುವುದಕ್ಕೆ ಆಂಬುಲೆನ್ಸ್ ಬಳಿ ಮಾತನಾಡಿದಾಗ 12 ಸಾವಿರ ಆಗುತ್ತೆ ಎಂದಿದ್ದಕ್ಕೆ ಸಂಬಂಧಿಕ ವ್ಯಕ್ತಿಯ ಟೂರಿಸ್ಟ್ ಕಾರಿನಲ್ಲಿ ಶವವನ್ನು ಇಟ್ಟು ಊರಿನತ್ತ ಒಯ್ದಿದ್ದಾರೆ.

ಈ ವಿಚಾರ ತಿಳಿದ ಆಂಬುಲೆನ್ಸ್ ಚಾಲಕ ಶಿರೂರು ಹೆದ್ದಾರಿಯಲ್ಲಿ ಅಡ್ಡಗಟ್ಟಿದ್ದು, ಟೂರಿಸ್ಟ್ ಕಾರು ಇರೋದು ಶವ ಒಯ್ಯುವುದಕ್ಕಾ.. ಆಂಬುಲೆನ್ಸಲ್ಲಿ ನಾವು ಪ್ರಯಾಣಿಕರನ್ನು ಒಯ್ಯಬೇಕಾ.. ಟೂರಿಸ್ಟ್ ಮಾಡಬೇಕಾ.. ನಿನಗೆ ಟೂರಿಸ್ಟ್ ಕಾರಿನಲ್ಲಿ ಶವ ಒಯ್ಯಲು ಪರ್ಮಿಶನ್ ಕೊಟ್ಟೋರು ಯಾರು ಅಂತ ತೀವ್ರ ಪ್ರಶ್ನೆ ಮಾಡಿದ್ದಾನೆ. ನಾವು ಬಡವರು, ನಮ್ಮ ಅಕ್ಕಂದಿರೇ ಕಾರಿನಲ್ಲಿದ್ದಾರೆ. ನಮ್ಮ ಹತ್ತಿರದ ಸಂಬಂಧಿ ವ್ಯಕ್ತಿ ತೀರಿಕೊಂಡಿದ್ದರು. ಆಂಬುಲೆನ್ಸ್ ನಲ್ಲಿ ವಿಪರೀತ ಬಾಡಿಗೆ ಹೇಳಿದ್ದರಿಂದ ಟೂರಿಸ್ಟ್ ಕಾರಿನಲ್ಲಿ ಒಯ್ದಿದ್ದೇವೆ. ತಪ್ಪು ಅಂತ ಗೊತ್ತಿದೆ, ನಾವು ಬಡವರು ಬಿಟ್ಟು ಬಿಡಿ ಎಂದರೂ ಆಂಬುಲೆನ್ಸ್ ಚಾಲಕ ಬಿಡದೆ ಕಾಡಿದ್ದಾನೆ.
ಯೆಲ್ಲೋ ಬೋರ್ಡ್ ಹಾಕಿರುವ ನಿನ್ನದು ಟೂರಿಸ್ಟ್ ಟ್ಯಾಕ್ಸಿ. ನೀನು ಪ್ರಯಾಣಿಕರನ್ನು, ಟೂರಿಸ್ಟ್ ಗಳನ್ನು ಒಯ್ಯಬೇಕೇ ವಿನಾ ಶವಗಳನ್ನಲ್ಲ. ಶವ ಒಯ್ಯುವುದಕ್ಕಾಗಿಯೇ ಆಂಬುಲೆನ್ಸ್ ಇರೋದು. ನಿನ್ನ ಕಾರನ್ನು ನಾನು ಸೀಜ್ ಮಾಡಿಸಲಾ ಎಂದು ಆವಾಜ್ ಹಾಕುತ್ತಾನೆ. ಉಡುಪಿ ಜಿಲ್ಲೆಯ ಗಡಿಭಾಗ ಶಿರೂರಿನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

Discover more from Coastal Times Kannada
Subscribe to get the latest posts sent to your email.








Discussion about this post