ಉಳ್ಳಾಲ, ಜೂ.11: ಕಡಲ್ಕೊರೆತ ತಡೆಗೆ ಮುಂದಿನ ವರ್ಷದಿಂದಲೇ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಸರಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನ ನಿರ್ಲಕ್ಷಿಸುವುದಾಗಲಿ, ಅವರಿಂದ ಹಣ ಪೀಕಿಸುವುದು ಗಮನಕ್ಕೆ ಬಂದರೆ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವಿವಾರ ಅಪರಾಹ್ನ ಸಮುದ್ರ ಕೊರೆತದ ಈ ಪ್ರದೇಶಕ್ಕೆ ಭೇಟಿ ನೀಡುವ ಕೆಲವೇ ಹೊತ್ತಿನ ಮುಂಚೆ ಕಡಲ ಅಲೆಗಳ ಆರ್ಭಟ ಮುಂದುವರಿಯಿತು. ಅಷ್ಟೇ ಅಲ್ಲ ಅತಿಥಿಗೃಹ, ತೆಂಗಿನಮರಗಳು ಸಮುದ್ರ ಪಾಲಾದವು.
ಈ ಹಿಂದೆಯೇ ಸಮುದ್ರಪಾಲಾಗಿ ಭಾಗಶ: ಹಾನಿಗೊಳಗಾಗಿದ್ದ ಬಟ್ಟಪ್ಪಾಡಿಯ ಅತಿಥಿಗೃಹದ ಒಂದು ಪಾರ್ಶ್ವ ಸಮುದ್ರ ಪಾಲಾಯಿತು. ಕಳೆದ ಮೂರು ದಿನಗಳಲ್ಲಿ ಕಡಲ ಅಲೆಯ ಆರ್ಭಟ ಮಿತಿಮೀರಿದ್ದು, ಸಮುದ್ರದ ತಟದಲ್ಲಿದ್ದ ಸುಮಾರು 50ಕ್ಕೂ ಅಧಿಕ ತೆಂಗಿನ ಮರಗಳು ಸಮುದ್ರದ ಪಾಲಾಗಿದೆ. ಅದಲ್ಲದೆ ರಸ್ತೆಗಳಿಗೆ ಹಾನಿಯಾಗಿದ್ದು, ಸಂಪರ್ಕ ಕಡಿದು ಹೋಗಿವೆ. ಒಂದೆರೆಡು ಮನೆಗಳಿಗೂ ಹಾನಿಯಾಗಿವೆ.




ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ: ಸಚಿವ ದಿನೇಶ್ ಗುಂಡೂರಾವ್ : ಉಳ್ಳಾಲ ಸಹಿತ ಜಿಲ್ಲೆಯ ಕರಾವಳಿ ತೀರದಲ್ಲಿ ಪ್ರತೀ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತಿರುವ ಕಡಲ್ಕೊರೆತಕ್ಕೆ ಮುಂದಿನ ವರ್ಷದಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮನೆ ಕಳಕೊಂಡವರಿಗೆ ಮನೆ ನಿರ್ಮಾಣಕ್ಕೆ ಜಾಗದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಭಾಗದಲ್ಲಿ ಶಾಶ್ವತ ಪರಿಹಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ಪೀಕರ್ ಜೊತೆ ಚರ್ಚಿಸಲಿದ್ದೇನೆ. ಚಂಡಮಾರುತ ಸಹಿತ ಪ್ರಕೃತಿ ವಿಕೋಪದ ಮುಂದೆ ಕ್ರಮ ಕೈಗೊಳ್ಳಲು ಅಸಾಧ್ಯ. ಆದರೂ ಮಳೆ ಸ್ವಲ್ಪ ಕಡಿಮೆಯಾದ ತಕ್ಷಣ ತಾತ್ಕಾಲಿಕ ಕಾಮಗಾರಿ ನಡೆಸಲು ತಿಳಿಸಿದ್ದೇನೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಪರಿಹಾರ ಈವರೆಗೆ ಸಿಕ್ಕಿಲ್ಲ : ಕಳೆದ ವರ್ಷ ಮನೆ ಕಡಲಿನ ಅಬ್ಬರಕ್ಕೆ ಭಾಗಶ: ಹೋಗಿದೆ. ಸೋಮೇಶ್ವರದ ಅಧಿಕಾರಿಗಳು ನೋಟಿಸ್ ನೀಡಿ ಬಾಡಿಗೆ ಮನೆಗೆ ಕಳುಹಿಸಿದ್ದಾರೆ. ಪರಿಹಾರ ರೂ.90 ಸಾವಿರ ನೀಡುವುದಾಗಿ ಆಶ್ವಾಸನೆ ನೀಡಿದ್ದರೂ ಈವರೆಗೆ ಸಿಕ್ಕಿಲ್ಲ. ಬಾಡಿಗೆ ಹಣವನ್ನು ಕೈಯಿಂದಲೇ ನೀಡುತ್ತಾ ಬಂದಿರುತ್ತೇನೆ. ಮುಂದಿನ ದಿನಗಳಲ್ಲಾದರೂ ಶಾಶ್ವತ ಪರಿಹಾರವನ್ನು ನೀಡಬೇಕು ಎಂದು ಬೆಟ್ಟಂಪಾಡಿ ಮನೆ ಕಳೆದುಕೊಂಡ ರಾಜೀವಿ ಉಸ್ತುವಾರಿ ಸಚಿವ ರಲ್ಲಿ ಮನವಿ ಮಾಡಿಕೊಂಡರು.

ಇದೇ ಸಂದರ್ಭ ಉಳ್ಳಾಲ ಅಬ್ಬಕ್ಕ ವೃತ್ತದ ಬಳಿಯಲ್ಲಿರುವ ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗೆ ಚರ್ಚಿಸಿದರು. ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಆರೋಗ್ಯದ ಕುರಿತಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳು ನೀಡುತ್ತಿರುವ ಸೇವೆ ಹಾಗೂ ವ್ಯವಸ್ಥೆಗಳ ಕುರಿತಾಗಿ ಚರ್ಚಿಸಿದ್ದು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವೆಯೂ ಲಭ್ಯವಾಗಬೇಕು ಎಂದು ಶಾಸಕ ಯು.ಟಿ. ಖಾದರ್ ಅವರು ಬೇಡಿಕೆ ಇಟ್ಟಿದ್ದಾರೆ. ಇಲ್ಲಿ ಅಂತಹ ಸೇವೆ ನೀಡಲು ಸಾಧ್ಯವೇ ಎಂದು ಅವರ ಬೇಡಿಕೆಯನ್ನು ಪರಿಶೀಲಿಸಲಿದ್ದೇನೆ ಎಂದರು. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರಿಂದ ಡಯಾಲಿಸಿಸ್ ಸೇವೆ ತೃಪ್ತಿಕರವಾಗಿಲ್ಲ. ಅದರಲ್ಲಿ ಸಾಕಷ್ಟು ಗೊಂದಲವಿದೆ. ಅದಕ್ಕಾಗಿ ಹೊಸತಾಗಿ ಟೆಂಡರ್ ಕರೆಯುವ ಮೂಲಕ ಉತ್ತಮ ಸೇವೆ ನೀಡಲು ಪ್ರಯತ್ನಿಸಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾಧಿಕಾರಿ ರವಿಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್, ಜಿಪಂ ಸಿಇಒ ಡಾ.ಕುಮಾರ್, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ರಾಜು, ಉಳ್ಳಾಲ ತಹಶೀಲ್ದಾರ್ ಪ್ರಭಾಕರ್ ಖಜೂರೆ, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post