ಉಡುಪಿ, ಎಪ್ರಿಲ್ 11: ನೆಲ್ಯಾಡಿ ನಿವಾಸಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಪತ್ನಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ (28) ಅವರನ್ನು ಕಾರ್ಕಳ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಸುದೀಪ್ ರೈ ಅವರು ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಮೊದಲಿಗೆ ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ಕು ದಿನಗಳ ಬಳಿಕ ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿತ್ತು. ಅಷ್ಟರಲ್ಲಿ ಸ್ಥಿತಿ ಉಲ್ಬಣಗೊಂಡಿದ್ದು ಮಾರ್ಚ್ 29ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ತನಿಖೆಯ ವೇಳೆ, ಸುದೀಪ್ ರೈ ಅವರು ಫೆಬ್ರವರಿ 17ರಂದು ಪುತ್ತೂರು ಉಪ ನೋಂದಣಿ ಕಚೇರಿಯಲ್ಲಿ ಮನೆ ಮಂದಿಗೆ ತಿಳಿಸದೆ ಸೌಮ್ಯ ಶೆಟ್ಟಿ ಜೊತೆಗೆ ವಿವಾಹ ನೋಂದಣಿ ಮಾಡಿದ್ದರು ಎಂಬುದು ತಿಳಿದುಬಂದಿತ್ತು. ಆಬಳಿಕ ಕಾರ್ಕಳದಲ್ಲಿ ಜೊತೆಗಿದ್ದಾಗಲೇ ವಿಷ ಸೇವನೆಯಾಗಿತ್ತು.
ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸುದೀಪ್ ಅವರ ತಂದೆ ದಾಮೋದರ ರೈ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆಕೆಯ ಕಿರುಕುಳದಿಂದಲೇ ಮಗನ ಸಾವಾಗಿದೆ ಎಂದು ಆರೋಪಿಸಿದ್ದರು. ಆತ್ಮಹತ್ಯೆ ಪ್ರಚೋದನೆ ಶಂಕೆಯ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಸೌಮ್ಯ ಶೆಟ್ಟಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹರಿರಾಮ್ ತಿಳಿಸಿದ್ದಾರೆ. ಸುದೀಪ್ ಸಾವಿನ ಬಳಿಕ ಸೌಮ್ಯ ಶೆಟ್ಟಿ ವಿರುದ್ದ ಹಲವು ಆರೋಪಗಳು ಕೇಳಿಬಂದಿದ್ದವು. ಸುದೀಪ್ ತಂದೆ ಮತ್ತು ಸೌಮ್ಯಾ ಮಾಜಿ ಪ್ರಿಯಕರ ವೇಣು ಆಕೆಯ ವಿರುದ್ದ ಹಲವು ಆರೋಪಗಳನ್ನು ಮಾಡಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post