ಮಂಗಳೂರು: ಭಾರತವು ಪ್ರಸಕ್ತ ಬಹುತೇಕ ಪೆಟ್ರೋ ಕೆಮಿಕಲ್ಸ್ ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡುತ್ತಿದೆ. ಇದರ ಬದಲು ಬೇಡಿಕೆಗೆ ಅನುಗುಣವಾಗಿ ಭಾರತದಲ್ಲೇ ಪೆಟ್ರೋ ಕೆಮಿಕಲ್ಸ್ ಉತ್ಪಾದನೆಗೆ ಗಮನ ಹರಿಸಬೇಕಿದೆ. ಈ ನಿಟ್ಟಿನಲ್ಲಿ ಎಂಆರ್ಪಿಎಲ್ ತನ್ನ 4ನೇ ಹಂತದ ವಿಸ್ತರಣೆಯ ಸಂದರ್ಭ ಪೆಟ್ರೋಕೆಮಿಕಲ್ಸ್ ಉತ್ಪಾದನೆಗೆ ಮೊದಲ ಆದ್ಯತೆ ನೀಡಲು ಉದ್ದೇಶಿಸಿದೆ ಎಂದು ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ತಿಳಿಸಿದ್ದಾರೆ.
ಶುಕ್ರವಾರ ಎಂಆರ್ಪಿಎಲ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಅವರು, 4ನೇ ಹಂತದ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಕುತ್ತೆತ್ತೂರು ಹಾಗೂ ಪೆರ್ಮುದೆ ಪ್ರದೇಶದಲ್ಲಿ ಪ್ರಗತಿಯಲ್ಲಿದೆ. ಸುಮಾರು 850 ಎಕರೆ ಪ್ರದೇಶ ಭೂಸ್ವಾಧೀನಕ್ಕೆ ಉದ್ದೇಶಿಸಲಾಗಿದ್ದು, ಕೆಲವು ಕಡೆ ಭೂಮಾಲಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ವಿಚಾರಣ ಹಂತದಲ್ಲಿದೆ ಹಾಗೂ ಸಂತ್ರಸ್ತರಿಗೆ 15 ಕಿ.ಮೀ. ದೂರದ ಮೂಳೂರು ಎಂಬಲ್ಲಿ 120 ಎಕರೆ ಪ್ರದೇಶ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಎಂಆರ್ಪಿಎಲ್ 1,600 ಎಕರೆ ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಈ ಪೈಕಿ ಶೇ.33ನ್ನು ಹಸಿರು ಪರಿಸರಕ್ಕಾಗಿ ಮೀಸಲಿರಿಸಲಾಗಿದೆ. 1,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಸ್ಥಾವರಗಳನ್ನು ಹೊಂದಿದೆ. 80 ಎಕರೆ ಟೌನ್ಶಿಪ್ಗೆ ಬಳಕೆಯಾಗಿದೆ. ಎಂಆರ್ ಪಿಎಲ್ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಮಾಲಿನ್ಯ ನಿಯಂತ್ರಣ ಕಡಿತಗೊಳಿಸುವ ನಿಟ್ಟಿನಲ್ಲಿ ಶೇ.10ರ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದಿಸುತ್ತಿದೆ. ಹರಿಹರ, ದಾವಣಗೆರೆಯಲ್ಲಿ ದಿನಕ್ಕೆ 60 ಸಾವಿರ ಲೀಟರ್ ಎಥೆನಾಲ್ ಉತ್ಪಾದಿಸುವ ಘಟಕವನ್ನು ಹೊಂದಿದೆ. ಭವಿಷ್ಯದಲ್ಲಿ ಈ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದವರು ತಿಳಿಸಿದ್ದಾರೆ.
ಎಂಆರ್ಪಿಎಲ್ ಕಚ್ಚಾ ತೈಲ ಆಮದು ಮಾಡಿ ಕೊಂಡು ಸಂಸ್ಕರಣೆ ಆರಂಭಿಸಿ 27 ವರ್ಷಗಳಾಗಿವೆ. ಮುಂದಿನ ವಿಸ್ತರಣೆ ಯೋಜನೆಯಲ್ಲಿ ಇಂಧನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಎಂಆರ್ಪಿಎಲ್ ವತಿಯಿಂದ ಮುಂದಿನ ಐದು ವರ್ಷಗಳಲ್ಲಿ 500 ರಿಟೇಲ್ ಔಟ್ಲೆಟ್ಗಳನ್ನು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ. ಸದ್ಯ ಪೆಟ್ರೋಲಿಯಂ ಉತ್ಪನ್ನಗಳ 47 ಚಿಲ್ಲರೆ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, 30 ಮಳಿಗೆಗಳು ನಿರ್ಮಾಣ ಹಂತದಲ್ಲಿವೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

ಪರಿಸರ ಸ್ನೇಹಿ ಯೋಜನೆಗಳು: ಎಂಆರ್ ಪಿಎಲ್ 350 ಎಕರೆ ಹಸಿರು ಪರಿಸರವನ್ನು ಉಳಿಸಿಕೊಂಡಿದೆ. ತಣ್ಣೀರುಬಾವಿ, ಬೆಂಗ್ರೆ ಪರಿಸರ, ಪಿಲಿಕುಳದಲ್ಲಿ 50 ಎಕರೆ ಪ್ರದೇಶದಲ್ಲಿ ಹಸಿರು ಪರಿಸರದ ಅಭಿವೃದ್ಧಿಗೆ ನೆರವು ನೀಡಿದೆ. ಪಿಲಿಕುಳದ 150 ಪ್ರಾಣಿಗಳ ಪೋಷಣೆಗೆ ಎರಡು ವರ್ಷ ನೆರವು ನೀಡಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಎಂಟು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿ ಸಿದೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ 30 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಕಟ್ಟಡ ನಿರ್ಮಿ ಸಿದೆ. ಕೋವಿಡ್ ಸಂದರ್ಭದಲ್ಲಿ ಪಿಪಿ ಕಿಟ್, ಮಾಸ್ಕ್ ತಯಾರಿಕೆ, ಆಹಾರ ಕಿಟ್ ಒದಗಿಸುವ ಮೂಲಕ ಸಂಸ್ಥೆ ಸಹಕಾರ ನೀಡಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಮಾಲಿನ್ಯ ನಿಯಂತ್ರಣಕ್ಕೆ 250 ಕೋ.ರೂ ವೆಚ್ಚ ; ಪರಿಸರಕ್ಕೆ ಹಾನಿಯಾಗದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನ್ಯಾಶನಲ್ ಎನ್ವರ್ ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ನೀರಿ) ತಜ್ಞರ ಸಮಿತಿಯು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅವರು ನೀಡುವ ಸಲಹೆ ಸೂಚನೆಗಳನ್ನೂ ಪಾಲಿಸಲಾಗುತ್ತಿದೆ. ಘಟಕದ 10 ಕಿ.ಮೀ. ವ್ಯಾಪ್ತಿಯಲ್ಲಿ ಎಂಟು ಹಳ್ಳಿಗಳಿಂದ ನೀರಿನ ಸ್ಯಾಂಪಲ್ ಪಡೆದು ತಪಾಸಣೆ ನಡೆಸಲಾಗಿದೆ. ಪರಿಸರ ಮಾಲಿನ್ಯದಂತಹ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದು ವೆಂಕಟೇಶ್ ಎಂ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂಆರ್ಪಿಎಲ್ ನಿರ್ದೇಶಕ (ರಿಫೈನರಿ) ಸಂಜಯ ವರ್ಮಾ, ಕಾರ್ಯನಿರ್ವಾಹಕ ನಿರ್ದೇಶಕರಾದ (ಪ್ರಾಜೆಕ್ಟ್) ಬಿ.ಎಚ್.ವಿ.ಪ್ರಸಾದ್, (ರಿಫೈನರಿ) ಶ್ಯಾಮ್ ಕಾಮತ್, ಜಿಜಿಎಂ (ಎಚ್ ಆರ್) ಕೃಷ್ಣ ಹೆಗ್ಡೆ, ಜಿಎಂ (ಕಾರ್ಪೊರೇಟ್ ಕಮ್ಯನಿಕೇಶನ್) ರುಡಾಲ್ಫ್ ನೊರೋನ್ಹಾ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post