ಉಡುಪಿ: ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿಯು ಗುರುರಾಜ್ ಗಂಟಿಹೊಳೆ ಅವರಿಗೆ ಟಿಕೆಟ್ ನೀಡಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ನಾಲ್ಕು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿದಂತಾಗಿದೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ನವದೆಹಲಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಬೈಂದೂರು ಕ್ಷೇತ್ರದ ಅಭ್ಯರ್ಥಿಯ ಹೆಸರು ಇರಲಿಲ್ಲ. ಬಿಜೆಪಿ ಬುಧವಾರ ರಾತ್ರಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಟಿನ ಹೊಳೆ ಅವರಿಗೆ ಟಿಕೆಟ್ ನೀಡಲಾಗಿದೆ.
ಬಂಟ ಸಮುದಾಯಕ್ಕೆ ಸೇರಿರುವ ಗುರುರಾಜ್ ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ಗಂಟಿಹೊಳೆಯವರು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಆರೆಸ್ಸೆಸ್ನ ಸಂಪರ್ಕಕ್ಕೆ ಬಂದ 39ರ ಹರೆಯ ಗುರುರಾಜ್ ಈಗ ಸಂಘದ ಪೂರ್ಣಕಾಲಿಕ ಕಾರ್ಯಕರ್ತ ಹಾಗೂ ಬಿಜೆಪಿಯ ಸದಸ್ಯ. ಮಂಗಳೂರಿನಲ್ಲಿ ಪತ್ರಿಕೋದ್ಯಮದಲ್ಲಿ ಎಂ.ಎ. ಓದುತ್ತಿರುವಾಗ ಸಂಘ ನಿಕೇತನದ ಗರಡಿಯಲ್ಲಿ ಪಳಗಿದವರು. ಕಲಿಕೆಯ ಬಳಿಕ 10 ವರ್ಷಗಳ ಕಾಲ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ದುಡಿದು ಊರಿಗೆ ಮರಳಿದರು.
ಕಾಲಿಗೆ ಚಪ್ಪಲಿಯನ್ನೇ ಧರಿಸದೇ ಬರಿಗಾಲಿನಲ್ಲಿ ಈಗಲೂ ಓಡಾಡುವ ಗುರುರಾಜ್, ಉಪ್ಪುಂದ, ತೆಗ್ಗರ್ಸೆ ಪರಿಸರದಲ್ಲಿ ಗುರುವಣ್ಣನೆಂದೇ ಜನಪ್ರಿಯ ರಾದವರು. ಮಡಿಕೇರಿ, ಬೆಳ್ತಂಗಡಿಗಳಲ್ಲಿ ಸಂಘದ ಪರವಾಗಿ ಕೆಲಸ ಮಾಡಿದರು. ಮೂರು ವರ್ಷಗಳ ಕಾಲ ಅವರು ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದರೆ, ಮುಂದೆ ಮೂರು ವರ್ಷ ಉಪಾಧ್ಯಕ್ಷರಾದರು. ಇದೀಗ ಸಂಘ ಪರಿವಾರದ ಪ್ರತಿನಿಧಿಯಾಗಿಯೇ ಅವರು ಬಿ.ಎಂ. ಸುಕುಮಾರ್ ಶೆಟ್ಟಿ ಅವರ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಲು ಅವಕಾಶ ಪಡೆದಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post