ಮಂಗಳೂರು: ಕಾಂಗ್ರೆಸ್ ಪಕ್ಷವು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಜೆ.ಆರ್.ಲೋಬೊ, ಹಾಗೂ ಪುತ್ತೂರು ಕ್ಷೇತ್ರಕ್ಕೆ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕಾರ್ಕಳದಲ್ಲಿ ಉದಯ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಮಂಗಳೂರು ಉತ್ತರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದಕ್ಕೆ ಮೂರನೇ ಪಟ್ಟಿಯಲ್ಲೂ ‘ಉತ್ತರ’ ಸಿಕ್ಕಿಲ್ಲ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ (ಹಿಂದಿನ ಮಂಗಳೂರು–1 ಕ್ಷೇತ್ರ) 1972ರಿಂದ ಕ್ರೈಸ್ತ ಧರ್ಮದ ಅಭ್ಯರ್ಥಿಗಳನ್ನೇ ಕಾಂಗ್ರೆಸ್ ಕಣಕ್ಕಿಳಿಸುತ್ತಾ ಬಂದಿದೆ. ಈ ಸಲ ಜೆ.ಆರ್.ಲೋಬೊ ಹಾಗೂ ಬಿಲ್ಲವ ಸಮುದಾಯದ ಪದ್ಮರಾಜ್ ನಡುವೆ ಪೈಪೋಟಿ ಏರ್ಪಟಿತ್ತು. ಪಕ್ಷದ ಹೈಕಮಾಂಡ್ ಕೊನೆಗೂಈ ಸಲವೂ ಕಾಂಗ್ರೆಸ್ ಕ್ರೈಸ್ತ ಧರ್ಮದ ಅಭ್ಯರ್ಥಿಗೇ ಟಿಕೆಟ್ ನೀಡಿದೆ.
ಇದು ಲೋಬೊ ಅವರ ಪಾಲಿಗೆ ಮೂರನೇ ಚುನಾವಣೆ ಆಗಲಿದೆ. ಸತತ ನಾಲ್ಕು ಬಾರಿ ಗೆದ್ದಿದ್ದ ಬಿಜೆಪಿಯ ಎನ್.ಯೋಗೀಶ್ ಭಟ್ ಅವರನ್ನು ಲೋಬೊ ಅವರು 2013ರಲ್ಲಿ ಸೋಲಿಸಿದ್ದರು. 2018ರಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ವಿರುದ್ಧ ಸೋತಿದ್ದರು.
ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ತೊರೆದು ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಸೇರಿರುವ ಅಶೋಕ್ ಕುಮಾರ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಈ ಕ್ಷೇತ್ರದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ– ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ನಡುವೆ ಟಿಕೆಟ್ಗಾಗಿ ಪೈಪೋಟಿ ಇತ್ತು.
Discover more from Coastal Times Kannada
Subscribe to get the latest posts sent to your email.
Discussion about this post