ಮಂಗಳೂರು: ಮೂಲ್ಕಿಯ ತಾಳಿಪಾಡಿಗುತ್ತು ಗ್ರಾಮದ ಗುತ್ತಕಾಡು ಐಕಳ ಹರೀಶ್ ಶೆಟ್ಟಿ ಅವರ ಮನೆಯಿಂದ 2 ಕೆಜಿ ಚಿನ್ನಾಭರಣ ಕಳವಾದ ಪ್ರಕರಣವನ್ನು ಭೇದಿಸಿರುವ ಸಿಸಿಬಿ ಪೊಲೀಸರು ಒಂದು ಕೆಜಿ 5 ಗ್ರಾಂ ಆಭರಣ ವಶಪಡಿಸಿಕೊಂಡಿದ್ದು ಇಬ್ಬರನ್ನು ಬಂಧಿಸಿದ್ದಾರೆ.

ಕಳೆದ ಜನವರಿ 15ರಂದು ರಾತ್ರಿ ಹರೀಶ್ ಶೆಟ್ಟಿ ಅವರು ಮನೆಯ ಬಾಗಿಲಿನ ಕೀಲಿ ಮುರಿದು ಚಿನ್ನ ಮತ್ತು ಬೆಳ್ಳಿಯ ಆಭರಣ ಹಾಗೂ ನಗದು ಕದ್ದಿದ್ದರು. ಸಿಸಿಟಿವಿ ದೃಶ್ಯಾವಳಿ ಅಥವಾ ಇತರ ಸಾಕ್ಷ್ಯಗಳು ಲಭಿಸಿದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಎಸಿಪಿ ಪಿ.ಎ ಹೆಗ್ಡೆ ಅವರ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡದವರು ಕಾರ್ಕಳ ತಾಲ್ಲೂಕಿನ ಬಜಗೋಳಿಯ ಗಣೇಶ್ ನಾಯ್ಕ್ (26) ಮತ್ತು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹಳೆ ಸಿದ್ದಾಪುರದ ಗುಯ್ಯಾ ಗ್ರಾಮ ನಿವಾಸಿ ರಂಜಿತ್ ಕೆ.ಆರ್ (26) ಎಂಬವರನ್ನು ಬಂಧಿಸಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅತ್ಯಂತ ಕ್ಲಿಷ್ಟಕರವಾಗಿದ್ದ ಪ್ರಕರಣವನ್ನು ಭೇದಿಸಿದ ಸಿಸಿಬಿ ತಂಡಕ್ಕೆ ರೂ. 10 ಪಾರಿತೋಷಕ ನೀಡಲಾಗುವುದು ಎಂದರು. ಮನೆ ಮಾಲೀಕರ ಹೇಳಿಕೆ ಪ್ರಕಾರ 2 ಕೆಜಿ ಚಿನ್ನ ಕಳವಾಗಿದೆ. ಹೀಗಾಗಿ ಉಳಿದಿರುವ 1 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಳ್ಳಬೇಕಾಗಿದೆ. 2 ಮೊಬೈಲ್ ಫೋನ್ಗಳು ಮತ್ತು ಕೃತ್ಯಕ್ಕೆ ಬಳಿಸಿದ ಕಬ್ಬಿಣದ ರಾಡ್ ಕೂಡ ಲಭಿಸಿದೆ. ವಶಪಡಿಸಿಕೊಂಡ ಸ್ವತ್ತಿನ ಒಟ್ಟು ಮೌಲ್ಯ ರೂ. 56,50,000 ಆಗಬಹುದು. ಪ್ರಮುಖ ಆರೋಪಿಗಳಿಬ್ಬರು ಕೇರಳ ಭಾಗದಲ್ಲಿ ತಲೆಮರೆಸಿಕೊಂಡಿದ್ದು ಸದ್ಯದಲ್ಲೇ ಬಂಧಿಸುವ ವಿಶ್ವಾಸವಿದೆ ಎಂದು ಅವರು ವಿವರಿಸಿದರು.
ಬಂಧಿತ ಆರೋಪಿ ಗಣೇಶ್ ಮೇಲೆ ಈ ಹಿಂದೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿತ್ತು. ಈತ ಮತ್ತು ಇತರ ಇಬ್ಬರು ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆಳರಾಯಿ ಚರ್ಚ್ ರಸ್ತೆಯ ಮನೆಯೊಂದರ ಬಾಗಿಲಿನ ಬೀಗ ಒಡೆದು ಬೆಲೆಬಾಳುವ ವಸ್ತುಗಳು ಹಾಗೂ ಬ್ರೀಝಾ ಕಾರು ಕದ್ದಿದ್ದು ಈ ಪ್ರಕರಣವೂ ಈಗ ಬೆಳಕಿಗೆ ಬಂದಿದೆ. ಕಾರು ವಶಪಡಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ, ಪಿಎಸ್ಐ ರಾಜೇಂದ್ರ ಬಿ, ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ, ಎಎಸ್ಐ ಶಶಿಧರ ಶೆಟ್ಟಿ, ಹರೀಶ್, ಮೋಹನ್ ಕೆ.ವಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಕುಲದೀಪ್ ಕುಮಾರ್ ಜೈನ್ ತಿಳಿಸಿದರು.
ಉಪ ಪೊಲೀಸ್ ಕಮಿಷನರ್ರಾದ ಅನ್ಶು ಕುಮಾರ್, ಬಿ.ಪಿ.ದಿನೇಶ್ ಕುಮಾರ್, ಸಿಸಿಬಿ ಸಹಾಯಕ ಪೊಲೀಸ್ ಕಮಿಷನರ್ ಪಿ.ಎ ಹೆಗ್ಡೆ ಮತ್ತು ಇನ್ಸ್ಪೆಕ್ಟರ್ ಶ್ಯಾಮಸುಂದರ್ ಇದ್ದರು.
Discover more from Coastal Times Kannada
Subscribe to get the latest posts sent to your email.







Discussion about this post