ಮಂಗಳೂರು, ಜ.16: ನಕಲಿ ಷೇರು ಮಾರುಕಟ್ಟೆ ಜಾಲದ ಮೂಲಕ ಅಪರಿಚಿತ ವ್ಯಕ್ತಿಗಳು ಮಂಗಳೂರಿನ ವ್ಯಕ್ತಿಯೊಬ್ಬರಿಂದ 77.96 ಲಕ್ಷ ರೂಪಾಯಿ ಹಣ ಪೀಕಿಸಿ ಮೋಸ ಮಾಡಿದ ಪ್ರಕರಣದಲ್ಲಿ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯೊಂದರ ಬೆನ್ನು ಹತ್ತಿ ಕಮಿಷನ್ ಆಸೆಗೆ ಹಣ ಪಡೆದು ಡ್ರಾ ಮಾಡಿಕೊಟ್ಟ ಕೇರಳ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ರಿಯಾಝ್ ಎಂ.ವಿ. (45) ಎಂಬವರನ್ನು ಬಂಧಿಸಲಾಗಿದೆ.
ಈ ಬಗ್ಗೆ ಮಂಗಳೂರು ನಗರ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ 108/2024 ಕಲಂ 66(ಸಿ) 66(ಡಿ) ಐಟಿ ಆಕ್ಟ್ 318(4),3(5) ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಾಗಿತ್ತು. ಅಪಚಿರಿತ ವ್ಯಕ್ತಿ ವಾಟ್ಸ್ ಆಪ್ ನಲ್ಲಿ ಮೆಸೇಜ್ ಮಾಡಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂದು ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ ಒಟ್ಟು 77,96,322.08/- ಹಣವನ್ನು ಪಡೆದು ವಂಚನೆ ಮಾಡಿದ್ದರು.
ತನಿಖೆ ನಡೆಸಿದ ಪೊಲೀಸರು ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆದಾರರ ವಿವರವನ್ನು ಸಂಗ್ರಹಿಸಿ ನೋಡಿದಾಗ ಪಶ್ಚಿಮ ಬಂಗಾಳದ ಮೂಲದ ವ್ಯಕ್ತಿಗೆ ರೂ 26,27,114.4/- ಹಣ ವರ್ಗಾವಣೆಯಾಗಿದ್ದು ಪತ್ತೆಯಾಗಿದೆ. ನಂತರದಲ್ಲಿ ಸದ್ರಿ ಆರೋಪಿಯ ಬ್ಯಾಂಕ್ ಖಾತೆಯಿಂದ ಕೇರಳದ ಕಣ್ಣೂರು ನಿವಾಸಿ ಉಮ್ಮರ್ ವಲಿಯ ಪರಂಬತ್ (41) ಎಂಬಾತನ ಬ್ಯಾಂಕ್ ಖಾತೆಗೆ ರೂ,6,00,000/- ರೂ. ಹಣ ರವಾನೆಯಾಗಿದ್ದು ಕಂಡುಬಂದಿತ್ತು. ಈ ಬಗ್ಗೆ ತನಿಖೆ ಕೈಗೊಂಡಾಗ ಕಣ್ಣೂರು ಜಿಲ್ಲೆಯ ಪತಾಯಕುನ್ನು ನಿವಾಸಿ ರಿಯಾಸ್ ಎಂ.ವಿ (45) ಎಂಬಾತ ಹಣವನ್ನು ವರ್ಗಾವಣೆ ಮಾಡಿಸಿದ್ದು, ಹಣ ವಿಥ್ ಡ್ರಾ ಮಾಡಿಕೊಟ್ಟಲ್ಲಿ ಕಮಿಷನ್ ನೀಡುವುದಾಗಿ ತಿಳಿಸಿದ್ದ ಎನ್ನುವ ಮಾಹಿತಿ ಸಿಕ್ಕಿತ್ತು. ಇದರಂತೆ, ರಿಯಾಸ್ ಸೂಚನೆಯಂತೆ 6,00,000 ಲಕ್ಷ ಹಣವನ್ನು ವಿಥ್ ಡ್ರಾ ಮಾಡಿರುವುದಾಗಿ ತಿಳಿಸಿದ್ದಾನೆ. ಸದ್ಯ ಪ್ರಕರಣದಲ್ಲಿ ಭಾಗಿಯಾದ ಈ ಇಬ್ಬರು ಕೇರಳ ಮೂಲದ ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ.
ಸೆನ್ ಠಾಣಾಧಿಕಾರಿಯೂ ಆದ ಎಸಿಪಿ ರವೀಶ್ ನಾಯಕ ಮತ್ತು ಸೆನ್ ಠಾಣಾ ನಿರೀಕ್ಷಕ ಸತೀಶ್ ಎಂ.ಪಿ., ಎಸ್ಸೈ ಗುರಪ್ಪಕಾಂತಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post