ಬೆಳ್ತಂಗಡಿ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಚೂರಿ ಇರಿದು ಹತ್ಯೆಗೈದ ಘಟನೆ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಕೊಲೆಯಾದವರನ್ನು ಬಾಜಾರು ನಿವಾಸಿ ರಫೀಕ್ ಎಂಬವರ ಪತ್ನಿ ಝೀನತ್(38) ಎಂದು ಗುರುತಿಸಲಾಗಿದೆ. ಗುರುವಾರ ಬೆಳಗ್ಗೆ ದಂಪತಿ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದ್ದು, ಈ ವೇಳೆ ರಫೀಕ್ ಪತ್ನಿ ಝೀನತ್ ರನ್ನು ಚೂರಿಯಿಂದ ಇರಿದು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.
ಝೀನತ್ ಹಾಗೂ ಗಂಡ ರಫೀಕ್ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಾಜಾರು ನಿವಾಸಿಗಳು. 18 ವರ್ಷಗಳ ಹಿಂದೆ ಮದುವೆ ಅಗಿ ಇಬ್ಬರು ಮಕ್ಕಳಿದ್ದರು. ಇನ್ನು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ರಫೀಕ್, ದುಡಿದ ಹಣವನ್ನು ಮನೆಗೆ ಕಳುಹಿಸುತ್ತಿದ್ದ. ಪತ್ನಿ ಮತ್ತು ಮಕ್ಕಳಿಗಾಗಿ ಒಂದು ಮನೆ ನಿರ್ಮಾಣ ಮಾಡುತ್ತಿದ್ದ. ಆದ್ರೆ ಕಳೆದ ಎರಡು ವರ್ಷದ ಹಿಂದೆ ರಫೀಕ್ ನ ಹೆಂಡತಿ ಅದೇ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಪತಿ ಆರೀಸ್ ನ ಜೊತೆ ಲವ್ವಿಡವ್ವಿ ಶುರು ಮಾಡಿಕೊಂಡಿದ್ದಾಳೆ ಎನ್ನುವುದು ಕಿವಿಗೆ ಬಿದ್ದಿತ್ತು. ಈ ಸಂಬಂಧ ಗ್ರಾಮದಲ್ಲಿ ಸಾಕಷ್ಟು ಜನರಿಂದ ಇದೇ ಅಭಿಪ್ರಾಯ ಕೇಳಿ ಬಂದಿತ್ತು. ಇದನ್ನು ನಂಬದ ರಫೀಕ್ ಸುಮ್ಮನಾಗಿದ್ದ.
ಇದು ಪದೇ ಪದೇ ಕೇಳಿ ಬಂದಿದ್ದರಿಂದ ವಿದೇಶದ ಕೆಲಸ ತೊರೆದು ಊರಿಗೆ ವಾಪಾಸ್ ಆಗಿದ್ದ. ಅರ್ದ ಕಟ್ಟಿದ ಮನೆಯಲ್ಲೇ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದ. ಅಕ್ರಮ ಸಂಬಂಧ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಆಗಾಗ ರಾಜೀ ಪಂಚಾಯತಿ ಕೂಡ ಆಗುತ್ತಿತ್ತು. ಇಂದು ಎಂದಿನಂತೆ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದಾನೆ. ಕೆಲಸಕ್ಕೆ ಹೋದವನು ಆಗಲೇ ವಾಪಾಸ್ ಆಗಿ ನೋಡುವಾಗ ಝೀನತ್ ಮನೆಯಲ್ಲಿರಲಿಲ್ಲ. ಬೀಡಿ ಕಟ್ಟುತ್ತಿದ್ದ ಝೀನತ್ ಅಂಗಡಿಗೆ ಬೀಡಿ ಕೊಡಲು ಹೋಗಿದ್ದಾಳೆಂದು ವಿಚಾರಿಸಿದಾಗ ಆಕೆ ಅಲ್ಲಿರಲಿಲ್ಲ. ಆಗ ವಿಚಾರ ಗೊತ್ತಾಗಿ ಅರ್ಧ ಕಿಲೋಮೀಟರ್ ದೂರದಲ್ಲಿರೋ ಕಾಡಿನ ಬಳಿ ಹೋಗಿದ್ದಾನೆ. ಆಗ ಅಲ್ಲಿ ಆರೀಸ್ ಹಾಗೂ ಝೀನತ್ ಒಟ್ಟಿಗೆ ಇರುವುದನ್ನು ನೋಡಿದ್ದಾನೆ. ಅಲ್ಲಿಂದ ಅವರನ್ನು ಅಟ್ಟಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಆದ್ರೆ, ಅವರು ಆಟೋದಲ್ಲಿ ಪರಾರಿಯಾಗಿದ್ದಾರೆ. ನಂತರ ಮನೆಗೆ ಬಂದು ಝೀನತ್ ಜೊತೆ ಗಲಾಟೆ ಮಾಡಿದ್ದು, ಈ ವೇಳೆ ಝೀನತ್ ಳಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿ ರಫೀಕ್ ನನ್ನು ಬಂಧಿಸಿದ್ದಾರೆ. ಇತ್ತ ಅರೀಸ್ ಊರಿನಿಂದ ಪರಾರಿಯಾಗಿದ್ದಾನೆ. ಊರಿನವರ ಅಭಿಪ್ರಾಯದ ಪ್ರಕಾರ ರಫೀಕ್ ಒಳ್ಳೆ ಮನುಷ್ಯನಾಗಿದ್ದ. ಆರೀಸ್ ನಿಂದಾಗಿ ಸಂಸಾರ ಒಡೆದುಹೋಗಿತ್ತು. ಈಗ ಎರಡು ಮಕ್ಕಳು ಅನಾಥರಾಗಿದ್ದಾರೆ. ಇದರಿಂದ ಆರೀಸ್ ಗೆ ನಾವೇ ಪಾಠ ಕಲಿಸುತ್ತೇವೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post