ಉಳ್ಳಾಲ, ಜೂ 18 : ಮದುವೆ ಮೆಹೆಂದಿಯಂದು ನಾಪತ್ತೆಯಾಗಿದ್ದ ವರ ಮನೆಗೆ ವಾಪಸ್ಸಾಗಿದ್ದಾನೆ. ನಾಪತ್ತೆಯಾದ ಹಲವು ದಿನಗಳ ನಂತರ ಬಳ್ಳಾರಿಯಲ್ಲಿ ಇರುವುದಾಗಿ ಸಹೋದರಿಗೆ ಕರೆ ಮಾಡಿ ತಿಳಿಸಿದ ನಂತರ ಜೂ.16 ರಂದು ಕೊಣಾಜೆ ಠಾಣೆಗೆ ಬಂದು ಮನೆಗೆ ವಾಪಸ್ಸಾಗಿದ್ದಾರೆ.
ಕೊಣಾಜೆ ಪೊಲೀಸರು ಬೆಂಗಳೂರಿನ ಲಾಡ್ಜ್ ಒಂದರಲ್ಲಿದ್ದ ಕಿಶನ್ ನನ್ನು ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಗಡಿಭಾಗದ ವರ್ಕಾಡಿ ದೇವಂದಪಡ್ಪು ನಿವಾಸಿ, ಉದ್ಯಮಿ ಐತಪ್ಪ ಶೆಟ್ಟಿ ಅವರ ಮಗ ಕಿಶನ್ ಶೆಟ್ಟಿ ಮೇ 31ರಂದು ಮದುವೆಯ ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿದ್ದವ ನಾಪತ್ತೆಯಾಗಿದ್ದು ಹಲವು ಊಹಾಪೋಹಗಳನ್ನು ಸೃಷ್ಟಿಸಿತ್ತು. ಕಿಶನ್ ಶೆಟ್ಟಿ ಕುಂಜತ್ತೂರು ಬಳಿಯ ಅನ್ಯಜಾತಿಯ ಯುವತಿಯನ್ನು ಕಾಲೇಜು ಸಹಪಾಠಿಯಾಗಿದ್ದಾಗಲೇ ಪ್ರೀತಿಸಲಾರಂಭಿಸಿದ್ದರೂ ಇತ್ತೀಚೆಗಷ್ಟೇ ಬೇರೊಂದು ಯುವತಿಯ ಜತೆಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆ ಬಳಿಕ ಪ್ರೀತಿಸಿದ ಯುವತಿಯನ್ನು ತಿರಸ್ಕರಿಸುತ್ತಾ ಬಂದಿದ್ದ ಎನ್ನಲಾಗಿದ್ದು ಅದರಿಂದ ಕೆರಳಿದ ಯುವತಿ ತನ್ನ ಬಿಟ್ಟು ಬೇರೆ ಯಾರನ್ನೇ ಮದುವೆಯಾದರೂ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಹಿಂಜರಿಯಲಾರೆ ಅಥವಾ ಮದುವೆ ತಡೆಯುವುದಾಗಿ ಬೆದರಿಕೆ ಒಡ್ಡಿದ್ದಳು ಎನ್ನಲಾಗಿದ್ದು ಹೆದರಿದ ಕಿಶನ್ ಮೆಹಂದಿ ಶಾಸ್ತ್ರದಂದೇ ನಾಪತ್ತೆಯಾಗಿದ್ದ.
ಕಿಶನ್ ನಾಪತ್ತೆಯಾದ ಕೆಲ ದಿನಗಳ ಬಳಿಕ ತನ್ನ ತಂಗಿಯ ಮೊಬೈಲ್ ಗೆ ನಾನು ಬಳ್ಳಾರಿಯಲ್ಲಿದ್ದೇನೆ, ಇನ್ನು ಮುಂದೆ ಎಂದಿಗೂ ಮನೆಗೆ ಬರುವುದಿಲ್ಲ ಎಂದು ಸಂದೇಶ ರವಾನಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಅಂದು ಮಗನ ಜೀವಕ್ಕೆ ಅಪಾಯ ಇಲ್ಲವೆಂದು ಪೋಷಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post