ಬಂಟ್ವಾಳ : ತುರ್ತಾಗಿ ರೋಗಿಯನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆಂಬ್ಯುಲೆನ್ಸ್ ವಾಹನವೊಂದು ಸಮೀಪದ ವಗ್ಗ ಎಂಬಲ್ಲಿ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ.
ಖಾಸಗಿ ಆಂಬುಲೆನ್ಸ್ ಚಾಲಕ, ಗುರುವಾಯನಕೆರೆ ನಿವಾಸಿ ಶಬೀರ್ (32) ಮೃತರು. ಇವರು ತುರ್ತು ಚಿಕಿತ್ಸೆಯ ಕಾರಣಕ್ಕೆ ರೋಗಿಯೊಬ್ಬರನ್ನು ಅಂಬ್ಯುಲೆನ್ಸ್ ನಲ್ಲಿ ಬೆಳ್ತಂಗಡಿಯಿಂದ ಮಂಗಳೂರಿಗೆ ಕರೆತರುತ್ತಿದ್ದರು. ಈ ವೇಳೆ ಅತಿ ವೇಗದಿಂದಾಗಿ ಆಂಬುಲೆನ್ಸ್ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಧರೆಗೆ ಡಿಕ್ಕಿಯಾಗಿದ್ದು ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ. ಚಾಲಕ ಶಬೀರ್ ತಲೆಗೆ ಗಂಭೀರ ಗಾಯಗೊಂಡಿದ್ದ. ವಾಹನದಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಆದರೆ ಆ್ಯಂಬುಲೆನ್ಸ್ ಚಾಲಕ ಶಬೀರ್ ಚಿಕಿತ್ಸೆ ಗೆ ಸ್ಪಂದಿಸದೆ ಮೃತ ಪಟ್ಟ ಬಗ್ಗೆ ಆಸ್ಪತ್ರೆಯ ಮೂಲಗಳು ಪೋಲೀಸರಿಗೆ ಮಾಹಿತಿ ನೀಡಿದೆ. ಆ್ಯಂಬುಲೆನ್ಸ್ ವಾಹನದಲ್ಲಿದ್ದ ರೋಗಿಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
Discussion about this post