ಮಂಗಳೂರು: ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಯುವತಿ ಮೃತಪಟ್ಟ ಘಟನೆ ಮಂಗಳೂರಿನ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ನಡೆದಿದೆ. ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಆಶ್ನಿ ಶೆಟ್ಟಿ (20) ಮೃತರು. ಇವರು ಸಿಎ ಅಭ್ಯಾಸ ಮಾಡುತ್ತಿದ್ದರು.
ಹರೀಶ್ ಮನೆಯಲ್ಲಿ ಸಣ್ಣ ಪ್ರಮಾಣದ ಹೈನುಗಾರಿಕೆ ನಡೆಸುತ್ತಿದ್ದು ಎಂದಿನಂತೆ ಶುಕ್ರವಾರ ಬೆಳಿಗ್ಗೆ ಸುಮಾರು 7 ಗಂಟೆಗೆ ದನ ಮೇಯಿಸಲು ತೆರಳಿದ್ದರು. ಅವರೊಂದಿಗೆ ಮನೆ ನಾಯಿಯೂ ತೆರಳಿತ್ತು. ತಂದೆಯೊಂದಿಗೆ ಹೋಗಿದ್ದ ನಾಯಿ ಬಂದಿಲ್ಲ ಎಂದು ಆಶ್ಮಿ ಗದ್ದೆ ಕಡೆಗೆ ತೆರಳಿದ್ದರು. ನಾಯಿ ನೀರು ತುಂಬಿದ್ದ ಗದ್ದೆಯಲ್ಲಿ ಬಿದ್ದು ಹೊರಳಾಡುತ್ತಿರುವುದನ್ನು ಕಂಡು ಆಶ್ಮಿ ನೀರಿಗಿಳಿದಿದ್ದಾರೆ. ನಾಯಿಗೆ ವಿದ್ಯುತ್ ಶಾಕ್ ಆಗಿರುವುದನ್ನು ತಿಳಿಯದೆ ನಾಯಿಯ ರಕ್ಷಣೆಗೆ ಧಾವಿಸಿದ್ದ ಆಶ್ಮಿ ಗದ್ದೆಗೆ ಕಾಲಿಡುತ್ತಲೇ ವಿದ್ಯುತ್ ಶಾಕ್ ಗೆ ಒಳಗಾಗಿದ್ದಾರೆ. ವಿದ್ಯುತ್ ಆಘಾತದಿಂದ ಆಶ್ಮಿ ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಗದ್ದೆಯಲ್ಲಿದ್ದ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯೊಂದು ತುಂಡಾಗಿ ಗದ್ದೆಗೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದ್ದು, ವಿದ್ಯುತ್ ಕಡಿತಗೊಳಿಸಿದ ಬಳಿಕ ನಾಯಿ ಮತ್ತು ಆಶ್ಮಿ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post