ಬೆಂಗಳೂರು: ಖಾಸಗಿ ಕ್ಷಣದ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಕ್ಕೆ ಆಕ್ರೋಶಗೊಂಡ ಪ್ರಿಯತಮೆ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಪ್ರಿಯಕರನನ್ನೇ ಕೊಲೆ ಮಾಡಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೈಕೋಲೇಔಟ್ನಲ್ಲಿ ನಡೆದಿದೆ. ವಿಕಾಸ್ ಕೊಲೆಯಾದ ಪ್ರಿಯಕರ. ಪ್ರತಿಭಾ (25) ಮತ್ತು ಆಕೆಯ ಸ್ನೇಹಿತರಾದ ಸುಶೀಲ್ (25), ಗೌತಮ್ (27) ಬಂಧಿತರು. ಮತ್ತೊಬ್ಬ ಆರೋಪಿ ಸೂರ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ವಿಕಾಸ್ ಚೆನ್ನೈನಲ್ಲಿ ವೈದ್ಯರಾಗಿದ್ದರು. ಈ ವೇಳೆ ಪ್ರತಿಭಾ ಪರಿಚಯವಾಗಿದ್ದಳು. ಇಬ್ಬರೂ ಪ್ರೀತಿಸುತ್ತಿದ್ದರು. ಎರಡು ಕುಟುಂಬದವರೂ ಮದುವೆಗೆ ಸಮ್ಮತಿ ನೀಡಿದ್ದರು. ಈ ನಡುವೆ ಉನ್ನತ ಶಿಕ್ಷಣಕ್ಕೆ ವಿಕಾಸ್ ಚೆನ್ನೈನಿಂದ ನಗರಕ್ಕೆ ಬಂದಿದ್ದರು. ಪ್ರತಿಭಾ ಜತೆಗೆ ವಿಕಾಸ್ ಖಾಸಗಿಯಾಗಿ ಕಳೆದಿದ್ದ ಕ್ಷಣಗಳನ್ನು ವಿಡಿಯೊ ಮಾಡಿಕೊಂಡಿದ್ದ. ನಕಲಿ ಖಾತೆ ತೆಗೆದು ಸಾಮಾಜಿಕ ಜಾಲತಾಣಕ್ಕೆ ಆ ವಿಡಿಯೊ ಹರಿಯಬಿಟ್ಟಿದ್ದ. ಇದೇ ವಿಷಯದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ತನ್ನ ಮರ್ಯಾದೆ ಹೋಯಿತು ಎಂದು ಕುಪಿತಗೊಂಡಿದ್ದ ಪ್ರತಿಭಾ ವಿಡಿಯೊ ವಿಷಯವನ್ನು ಸ್ನೇಹಿತರಿಗೂ ತಿಳಿಸಿದ್ದಳು. ತನ್ನ ಮೂವರು ಸ್ನೇಹಿತರೊಂದಿಗೆ ಕೊಲೆಗೆ ಸಂಚು ರೂಪಿಸಿ ಮೈಕೋಲೇಔಟ್ ಮನೆಗೆ ಕರೆಸಿಕೊಂಡು ಹಲ್ಲೆ ನಡೆಸಿ ಕೊಲೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ. ‘ವಿಚಾರಣೆ ವೇಳೆ ಆರೋಪಿಗಳು ವಿಡಿಯೊ ವೈರಲ್ ಮಾಡಿದಕ್ಕೆೆ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
Discover more from Coastal Times Kannada
Subscribe to get the latest posts sent to your email.
Discussion about this post