ಮಂಗಳೂರು: ನಗರದ ಪಡೀಲ್ ‘ಪ್ರಜಾಸೌಧ’ದಲ್ಲಿ ನಡೆದ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡುವ ನಿಟ್ಟಿನಲ್ಲಿ ಸುಮಾರು 200 ಮೀಟರ್ ಎತ್ತರದ ‘ಮಂಗಳೂರು ಐ’ (Mangaluru Eye) ವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿದಂತೆ ಕರಾವಳಿ ಮತ್ತು ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಒಟ್ಟು 61 ಪ್ರಮುಖ ವಿಷಯಗಳಿಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಭೆಯ ಅಧಿಕೃತ ವಿವರಗಳನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಯೋಜನೆಗಳು:
‘ಮಂಗಳೂರು ಐ’ ಯೋಜನೆ: ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ (ವಿಜಿಎಫ್ ಅನುದಾನದಡಿ) 200 ಮೀಟರ್ ಎತ್ತರದ ಗಗನಚುಂಬಿ ವಾಣಿಜ್ಯ ಗೋಪುರ ನಿರ್ಮಾಣವಾಗಲಿದೆ. ಇದರಲ್ಲಿ ಮೂರು ಸಮುದಾಯ ಭವನಗಳು, ಮೇಲ್ಭಾಗದಲ್ಲಿ ಸುತ್ತುವ ರೀವಲ್ವಿಂಗ್ ರೆಸ್ಟೋರೆಂಟ್ ಹಾಗೂ ನಗರವನ್ನು 360 ಡಿಗ್ರಿ ವೀಕ್ಷಿಸಲು ಎರಡು ಅಂತಸ್ತುಗಳ ವೀಕ್ಷಣಾ ಗ್ಯಾಲರಿ ಇರಲಿದೆ.
ಕರಾವಳಿ – ಮಲೆನಾಡು ಪ್ರವಾಸೋದ್ಯಮ ನೀತಿ 2026: ಈ ಭಾಗದ ಆರ್ಥಿಕತೆಗೆ ಉತ್ತೇಜನ ನೀಡಲು ಹೊಸ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ಪ್ರಸ್ತುತ ರಾಜ್ಯಕ್ಕೆ ಬರುವ ಒಟ್ಟು ಪ್ರವಾಸಿಗರಲ್ಲಿ ಶೇ. 40-45ರಷ್ಟು ಮಂದಿ ಕರಾವಳಿಗೆ ಭೇಟಿ ನೀಡುತ್ತಿದ್ದು, ಅಂದಾಜು 300 ಮಿಲಿಯನ್ ಯುಎಸ್ ಡಾಲರ್ (ಸುಮಾರು 2,876.44 ಕೋಟಿ ರೂ.) ವಿದೇಶಿ ವಿನಿಮಯ ಆದಾಯ ತರುತ್ತಿದೆ.
ಲೈಟ್ಹೌಸ್ ಪ್ರವಾಸೋದ್ಯಮ ಅಭಿವೃದ್ಧಿ: ಮಂಗಳೂರಿನ ಲೈಟ್ಹೌಸ್ ಸುತ್ತಲಿನ 1.5 ಎಕರೆ ಪ್ರದೇಶದಲ್ಲಿ ಪಿಪಿಪಿ (DBFOT) ಮಾದರಿಯಲ್ಲಿ 60.34 ಕೋಟಿ ರೂ. ವೆಚ್ಚದಲ್ಲಿ 3-ಸ್ಟಾರ್ ಅಥವಾ ಮೇಲ್ದರ್ಜೆಯ 35 ಕೊಠಡಿಗಳ ಅತಿಥ್ಯ ಮೂಲಸೌಕರ್ಯ ಅಭಿವೃದ್ಧಿ. 30 ವರ್ಷಗಳ ಗುತ್ತಿಗೆ ಅವಧಿಯಲ್ಲಿ ಸರ್ಕಾರಕ್ಕೆ ಕನಿಷ್ಠ 34.21 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಗುರುಪುರ ನದಿಯ ಉತ್ತರ ಮತ್ತು ದಕ್ಷಿಣ ದ್ವೀಪಗಳ ಅಭಿವೃದ್ಧಿ: 125.43 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಉತ್ತರ ದ್ವೀಪದ 30.42 ಎಕರೆಯಲ್ಲಿ 30 ಬರ್ತ್ಗಳ ಮರೀನಾ ಹಾಗೂ ದಕ್ಷಿಣ ದ್ವೀಪದ 17.28 ಎಕರೆಯಲ್ಲಿ 32 ಬರ್ತ್ಗಳ ಮರೀನಾ ಅಭಿವೃದ್ಧಿ.
ಬೀಚ್ ಪ್ರವಾಸೋದ್ಯಮ: ಒಡಿಕಾರ್, ತಣ್ಣೀರುಬಾವಿ, ತ್ರಾಸಿ-ಮರವಂತೆ ಹಾಗೂ ಚಿಕ್ಕಮಗಳೂರಿನ ಆಗುಂಬೆಯಲ್ಲಿ ಒಟ್ಟು 238 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ.
ಕರಾವಳಿ ದೋಣಿ ಸೇವೆ (Water Metro): ಮಂಗಳೂರಿನಿಂದ ಮರವಂತೆ, ಮುರುಡೇಶ್ವರ, ಗೋಕರ್ಣ ಹಾಗೂ ಕಾರವಾರದವರೆಗೆ 12 ಕರಾವಳಿ ಕೇಂದ್ರಗಳನ್ನು ಬೆಸೆಯುವ 343 ಕಿ.ಮೀ ವ್ಯಾಪ್ತಿಯ ಪ್ಯಾಸೆಂಜರ್ ಫೆರ್ರಿ ಸೇವೆ ಆರಂಭಿಸಲು ಪಿಪಿಪಿ ವಹಿವಾಟು ಸಲಹೆಗಾರರ ನೇಮಕಕ್ಕೆ ಅನುಮೋದನೆ.
ಕಾರವಾರ ವಿಮಾನ ನಿಲ್ದಾಣ ವಿಸ್ತರಣೆ : ಕಾರವಾರ ವಿಮಾನ ನಿಲ್ದಾಣ ಅಭಿವೃದ್ಧಿ ಯೋಜನೆಯ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಯೋಜನಾ ವೆಚ್ಚವನ್ನು 98.24 ಕೋಟಿ ರೂ.ಯಿಂದ 250.05 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಸ್ತುತ 2,000 ಮೀಟರ್ ಉದ್ದದ ರನ್ವೇಯನ್ನು 3,250 ಮೀಟರ್ಗೆ ವಿಸ್ತರಿಸಲಾಗುವುದು. ಇದರಿಂದ A-320 ಮಾದರಿಯ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ. ಭೂಸ್ವಾಧೀನ, ಸಂತ್ರಸ್ತರ ಪುನರ್ವಸತಿ, ಸಂಪರ್ಕ ರಸ್ತೆಗಳು, ಸಿವಿಲ್ ಎನ್ಕ್ಲೇವ್ ನಿರ್ಮಾಣ ಸೇರಿದಂತೆ ಸಂಬಂಧಿತ ಕಾಮಗಾರಿಗಳು ಪರಿಷ್ಕೃತ ವೆಚ್ಚದಲ್ಲಿ ಒಳಗೊಂಡಿವೆ.
ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ: ಮೀನುಗಾರಿಕಾ ವಿಶ್ವವಿದ್ಯಾಲಯ: ಮಂಗಳೂರಿನ ಹಳೆಯ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಉನ್ನತೀಕರಿಸಲು ತಾತ್ವಿಕ ಅನುಮೋದನೆ ನೀಡಲಾಗಿದ್ದು, ವಿದ್ಯಾರ್ಥಿಗಳ ಸೀಟು ಸಂಖ್ಯೆಯನ್ನು 60ರಿಂದ 200ಕ್ಕೆ ಹೆಚ್ಚಿಸಲಾಗುವುದು. ನೀಲನಕ್ಷೆ ಸಿದ್ಧಪಡಿಸಲು 11.50 ಕೋಟಿ ರೂ. ಮೀಸಲಿಡಲಾಗಿದೆ.
ಜೆಟ್ಟಿ ಹಾಗೂ ಬರ್ತಿಂಗ್ ಬೇಸಿನ್: ಮಂಗಳೂರಿನ ಕೋಟೆಪುರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಸಾಂಪ್ರದಾಯಿಕ ದೋಣಿಗಳ ನಿಲುಗಡೆಗೆ ಜೆಟ್ಟಿ ನಿರ್ಮಾಣ ಹಾಗೂ ಬೆಂಗ್ರೆ ಗ್ರಾಮದಲ್ಲಿ ಸಾಂಪ್ರದಾಯಿಕ ದೋಣಿಗಳಿಗೆ ಬರ್ತಿಂಗ್ ಬೇಸಿನ್ ಮತ್ತು ನೇವಿಗೇಷನ್ ಬಾಯ್ಸ್ ಅಳವಡಿಕೆಗೆ ಅನುಮೋದನೆ.
ಎಕ್ಕೂರಿನಲ್ಲಿ ಬೃಹತ್ ಮತ್ಸ್ಯ ಮಾರುಕಟ್ಟೆ: ಮಂಗಳೂರಿನ ಎಕ್ಕೂರು ಗ್ರಾಮದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೋಲ್ಸೇಲ್ ಫಿಶ್ ಮಾರ್ಕೆಟ್ ನಿರ್ಮಾಣ.
ಮಂಕಿ ಹಾಗೂ ಗಂಗೊಳ್ಳಿ ಬಂದರು: ಉತ್ತರ ಕನ್ನಡದ ಮಂಕಿಯಲ್ಲಿ 6,925 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಪರ್ಪಸ್ ಹಾರ್ಬರ್ ಮತ್ತು ಶಿಪ್ಯಾರ್ಡ್ ಹಾಗೂ ಗಂಗೊಳ್ಳಿಯಲ್ಲಿ 222 ಕೋಟಿ ರೂ. ವೆಚ್ಚದಲ್ಲಿ ಗ್ರೀನ್ಫೀಲ್ಡ್ ಶಿಪ್ ಬಿಲ್ಡಿಂಗ್ ಯೋಜನೆಗೆ ಮಂಜೂರಾತಿ.
ಶಿಕ್ಷಣ, ಆರೋಗ್ಯ, ವಸತಿ ಮತ್ತು ಕ್ರೀಡೆ: ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು: ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಸೇಡಿಯಾಪು ಬಳಿ 549.79 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ ಮತ್ತು ಹಾಸ್ಟೆಲ್ ನಿರ್ಮಾಣ.
ವೆನ್ಲಾಕ್ ಆಸ್ಪತ್ರೆ ಉನ್ನತೀಕರಣ: ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ರೀಜನಲ್ ಸೆಂಟರ್ ಆಗಿ ಪರಿವರ್ತಿಸಿ, ಹೆಚ್ಚುವರಿಯಾಗಿ 200 ಹಾಸಿಗೆಗಳು, ಐಸಿಯು ಮತ್ತು ನೂತನ ಉಪಕರಣಗಳನ್ನು ಒದಗಿಸಲು 425 ಕೋಟಿ ರೂ. ಮಂಜೂರು.
ನಿಯಮಾವಳಿ, ಭೂ ಮಂಜೂರಾತಿ ಮತ್ತು ಅಧಿಸೂಚನೆಗಳು:
ಸಿಆರ್ಝಡ್ (CRZ) ನಿಯಮಾವಳಿ ತಿದ್ದುಪಡಿ: 2019ರ ಕರಾವಳಿ ವಲಯ ನಿರ್ವಹಣಾ ಯೋಜನೆ (CZMP) ನಕ್ಷೆಯಲ್ಲಿದ್ದ ವ್ಯತ್ಯಾಸಗಳನ್ನು ಸರಿಪಡಿಸಿ, ಸ್ಥಳೀಯ ಜನರಿಗೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕವಾಗಿ ಪರಿಷ್ಕರಿಸಲು ಸಂಪುಟದ ಒಪ್ಪಿಗೆ.
ಒಳನಾಡು ಹಡಗು ಕಾಯ್ದೆ ತಿದ್ದುಪಡಿ: ಜನ ವಿಶ್ವಾಸ ಕಾಯ್ದೆಯನ್ವಯ ಒಳನಾಡು ಹಡಗು ನಿಯಮಗಳ ಉಲ್ಲಂಘನೆಯ ದಂಡ ತಿದ್ದುಪಡಿ ಹಾಗೂ ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮ.
ಅರಣ್ಯ ಇಲಾಖೆ ನೇಮಕಾತಿ ನಿಯಮ ತಿದ್ದುಪಡಿ (30% ಮೀಸಲಾತಿ): ಅರಣ್ಯ ರಕ್ಷಕ ಮತ್ತು ವೀಕ್ಷಕರ ನೇರ ನೇಮಕಾತಿಯಲ್ಲಿ ಅರಣ್ಯವಾಸಿ 13 ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ (ಸೋಲಿಗ, ಜೇನುಕುರುಬ, ಕಾಡುಕುರುಬ, ಕೊರಗ, ಮಲೆಕುಡಿಯ, ಇರುಳಿಗ, ಸಿದ್ಧಿ, ಬೆಟ್ಟಕುರುಬ, ಪಣಿಯನ್ ಇತ್ಯಾದಿ) ಶೇಕಡಾ 30ರಷ್ಟು ಮೀಸಲಾತಿ ಒದಗಿಸಲು ತಿದ್ದುಪಡಿ.
ಪ್ರಮುಖ ಭೂ ಮಂಜೂರಾತಿಗಳು: ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಸಂತ ಲಾರೆನ್ಸ್ ಚರ್ಚ್ ಅತ್ತೂರಿಗೆ 7.30 ಎಕರೆ, ಬಂಟ್ವಾಳದ ನಾವೂರು ಗ್ರಾಮದಲ್ಲಿ ಶಿವಗಿರಿ ಮಠದ ಗುರುಧರ್ಮ ಪ್ರಚಾರ ಸಭಾಗೆ 6.51 ಎಕರೆ, ಕಾಪು ಬೆಳಪು ಗ್ರಾಮದಲ್ಲಿ ಶ್ರೀ ಗುರುಬ್ರಹ್ಮ ಮುಗ್ಧೇರ್ಕಳ ದೇವಸ್ಥಾನಕ್ಕೆ 29 ಸೆಂಟ್ಸ್, ಕರಾವಳಿ ಲೇಖಕಿಯರ-ವಾಚಕಿಯರ ಸಂಘಕ್ಕೆ 0.05 ಎಕರೆ ಹಾಗೂ ಮುಲ್ಕಿ ಸುರತ್ಕಲ್ನಲ್ಲಿ ತಿರುಪತಿ ವೆಂಕಟೇಶ್ವರ ದೇವಸ್ಥಾನ ಟ್ರಸ್ಟ್ಗೆ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ 10 ಎಕರೆ ಭೂಮಿ ಮಂಜೂರು.
ಸ್ಥಳೀಯ ಸಂಸ್ಥೆಗಳ ಚುನಾವಣೆ: ಗ್ರಾಮ ಪಂಚಾಯಿತಿ ಚುನಾವಣೆಗೆ 1.20 ಲಕ್ಷ ಬ್ಯಾಲೆಟ್ ಬಾಕ್ಸ್ಗಳ ಖರೀದಿಗೆ 151 ಕೋಟಿ ರೂ. ಅನುಮೋದನೆ.
Discover more from Coastal Times Kannada
Subscribe to get the latest posts sent to your email.







Discussion about this post