ಬೆಂಗಳೂರು, ಜುಲೈ 20; “ಶಿರಾಡಿಘಾಟ್ ರಸ್ತೆಯ ಹಾಸನ ಜಿಲ್ಲೆಯ ದೋಣಿಗಲ್ ಬಳಿ ಭೂಕುಸಿತವಾಗಿದೆ. ರಸ್ತೆ ದುರಸ್ತಿ ಆಗುವ ತನಕ ಅಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಲಾಖೆ ಅಧಿಕಾರಿಗಳ ಜೊತೆ ಮಳೆ, ಭೂಕುಸಿತದಿಂದ ಉಂಟಾದ ರಸ್ತೆಗಳ ಹಾನಿ, ದುರಸ್ತಿ ಬಗ್ಗೆ ಸಚಿವರ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, “ಶಿರಾಡಿಘಾಟ್ ರಸ್ತೆಯಲ್ಲಿ ಸುಮಾರು ಎರಡೂವರೆ ಕಿ. ಮೀ. ರಸ್ತೆಯಲ್ಲಿ ಏಕಮುಖ ಸಂಚಾರ ಇರಲಿದೆ” ಎಂದರು. “ಬೆಂಗಳೂರು-ಮಂಗಳೂರು ವಾಹನಗಳು ಶಿರಾಡಿ ಘಾಟ್ನ ಈಗಿರುವ ರಸ್ತೆಯಲ್ಲಿಯೇ ಹೋಗಲು ಅವಕಾಶ ನೀಡಲಾಗುತ್ತದೆ. ಆದರೆ, ಮಂಗಳೂರು-ಬೆಂಗಳೂರು ವಾಹನಗಳು ದೋಣಿಗಲ್ ಬಳಿ ಕಪ್ಪಳ್ಳಿ-ಕೆಸಗಾನಹಳ್ಳಿ ಮಾರ್ಗವಾಗಿ ಇರುವ ಹಳೆ ರಸ್ತೆ ಬಳಕೆ ಮಾಡಬೇಕು” ಎಂದು ಸಚಿವರು ವಿವರಣೆ ನೀಡಿದರು. “ಹಾಸನ ಜಿಲ್ಲಾಧಿಕಾರಿಗಳಿಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲು ತಕ್ಷಣ ಆದೇಶ ನೀಡಲಾಗುತ್ತದೆ. ದೋಣಿಗಲ್ ಬಳಿ ರಸ್ತೆ ದುರಸ್ತಿಗೆ ಕಚ್ಚಾ ಸಾಮಾಗ್ರಿ, ಯಂತ್ರೋಪಕರಣ ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ತಕ್ಷಣ ಕಾಮಗಾರಿ ಆರಂಭಿಸಲಾಗುತ್ತದೆ. ಸುಮಾರು ಒಂದೂವರೆ ತಿಂಗಳಿನಲ್ಲಿ ಕಾಮಗಾರಿ ಮುಗಿಯಲಿದೆ” ಎಂದು ಸಚಿವರು ಭರವಸೆ ಕೊಟ್ಟರು.
ದುರಸ್ತಿ ವಿಳಂಬವಾಗಿದೆ; “ಶಿರಾಡಿ ಘಾಟ್ ರಸ್ತೆ ದುರಸ್ತಿ ವಿಳಂಬವಾಗಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಹಲವು ಕಾರಣಗಳಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಈ ಕುರಿತು ತಿಳಿಸಲಾಗಿದೆ. ಅಗತ್ಯವಿದ್ದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ಮಾಡಿ ಸಹ ಮನವಿ ಮಾಡಲಾಗುತ್ತದೆ” ಎಂದು ಸಚಿವ ಸಿ. ಸಿ. ಪಾಟೀಲ್ ಹೇಳಿದರು. ಸಚಿವರು ಮಾತನಾಡಿ, “ಸಂಪಾಜೆ, ಅರೆಬೈಲ್, ಆಗುಂಬೆ, ಗೇರುಸೊಪ್ಪೆ, ಮಾಲ್ ಘಾಟ್ ಪ್ರದೇಶದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಎರಡೂ ಬದಿಗಳಲ್ಲಿ 63 ಕಡೆ ಭೂಕುಸಿತ ಮತ್ತು ಮುಚ್ಚಿ ಹೋಗಿದ್ದ ಚರಂಡಿ ತೆರವು ಮಾಡಲಾಗಿದೆ. ಹಾನಿಗೊಂಡ ಘಾಟ್ ರಸ್ತೆಗಳ ಶಾಶ್ವತ ಪುನರ್ ಸ್ಥಾಪನೆಗೆ 157 ಕೋಟಿ ಹಾಗೂ ತಾತ್ಕಾಲಿಕ ಪುನರ್ ಸ್ಥಾಪನೆಗೆ 10 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ” ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post