ಮಂಗಳೂರು, ಅ.20 : ಸುರತ್ಕಲ್ ಟೋಲ್ಗೇಟ್ ವಿರುದ್ಧ ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ಹೋರಾಟ ಸಮಿತಿಯ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ. ಟೋಲ್ಗೇಟ್ ವ್ಯವಸ್ಥಾಪಕ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ನೀಡಿದ ಪ್ರತ್ಯೇಕ ದೂರನ್ನು ಆಧರಿಸಿ, ಸುರತ್ಕಲ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದೆ. ‘ಅ.18ರಂದು ಹೋರಾಟ ಸಮಿತಿಯ 30ಕ್ಕಿಂತ ಹೆಚ್ಚು ಸದಸ್ಯರು ಅಕ್ರಮ ಕೂಟ ಸೇರಿ ಸುರತ್ಕಲ್ ಟೋಲ್ ಪ್ಲಾಜಾ ಎದುರು ರಸ್ತೆಯಲ್ಲಿ ಕುಳಿತು ಘೋಷಣೆ ಕೂಗುತ್ತ, ವಾಹನ ಸಂಚಾರ ತಡೆದು ನಿಲ್ಲಿಸಿದರು. ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಿದರು‘ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯವರು ಎಸಿಪಿ ಕಚೇರಿಯಲ್ಲಿ ಅ.14ರಂದು ನಡೆದ ಸಭೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರೂ, ಅ.18ರಂದು ನಡೆಸಿದ ಪ್ರತಿಭಟನೆಯ ವೇಳೆ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದ್ದಾರೆ’ ಎಂದು ದೂರಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಹಾಗೂ ಸುರತ್ಕಲ್ ಎನ್ಐಟಿಕೆ ಟೋಲ್ನ ಶುಲ್ಕ ವಸೂಲಿ ಏಜೆನ್ಸಿ ನೂರ್ ಮೊಹಮ್ಮದ್ ಸಂಸ್ಥೆಯ ಸುರತ್ಕಲ್ ವಿಭಾಗದ ವ್ಯವಸ್ಥಾಪಕ ಶಿಶುಪಾಲ್ ಸಿಂಗ್ ಅವರು ಅ.18ರಂದೇ ದೂರು ನೀಡಿದ್ದು, ಪೊಲೀಸರು ಅದೇ ದಿನ ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 283, 149 (ಅಕ್ರಮ ಕೂಟ ಸೇರಿ, ಸಾರ್ವಜನಿಕರ ಸುರಕ್ಷತೆಗೆ ಅಡ್ಡಿಪಡಿಸಿದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಫ್ಐಆರ್ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
Discover more from Coastal Times Kannada
Subscribe to get the latest posts sent to your email.







Discussion about this post