ಮಂಗಳೂರು: ಇಲ್ಲಿನ ತಿಲಕನಗರದ ದಿಶಾ ಅಮೃತ್ ಅವರು, ಇದೇ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ನಲ್ಲಿ ನೌಕಾಪಡೆಯ ತುಕಡಿಯನ್ನು ಮುನ್ನಡೆಸಲಿದ್ದಾರೆ. ನೌಕಾಪಡೆಯ 144 ಸೈನಿಕರನ್ನು ಒಳಗೊಂಡ ತುಕಡಿ ಹಾಗೂ ಸ್ತಬ್ಧಚಿತ್ರವು ಈ ಕವಾಯತಿನಲ್ಲಿ ‘ನಾರಿಶಕ್ತಿ’ಯನ್ನು ಪ್ರದರ್ಶಿಸಲಿದೆ. ಅಂಡಮಾನ್ ನಿಕೋಬಾರ್ನಲ್ಲಿ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿರುವ ಮಗಳು ಗಣರಾಜ್ಯೋತ್ಸವ ಪರೇಡ್ನಲ್ಲಿ ತುಕಡಿಯ ನಾಯಕಿಯಾಗಿ ಹೆಜ್ಜೆಹಾಕುವುದನ್ನು ಕಣ್ತುಂಬಿಕೊಳ್ಳಲು ಆಕೆಯ ತಂದೆತಾಯಿ ಅಮೃತ್ ಕುಮಾರ್– ಲೀಲಾ ದಂಪತಿ ನವದೆಹಲಿಗೆ ತೆರಳಿದ್ದಾರೆ.

ಈ ಅವಕಾಶದ ಕುರಿತು ಪ್ರತಿಕ್ರಿಯಿಸಿರುವ ದಿಶಾ, ‘ನಾನು 2008ರಲ್ಲಿ ಎನ್ಸಿಸಿ ಕೆಡೆಟ್ ಆಗಿ ಗಣರಾಜ್ಯೋತ್ಸವದ ಕವಾಯತಿನಲ್ಲಿ ಭಾಗವಹಿಸಿದ್ದೆ. ಆಗಲೇ ಸೇನಾ ಅಧಿಕಾರಿಯಾಗಿ ಕವಾಯತಿನಲ್ಲಿ ಭಾಗವಹಿಸುವ ಕನಸು ಕಂಡಿದ್ದೆ. ಅದೀಗ ಸಾಕಾರಗೊಳ್ಳುತ್ತಿದೆ. ಇದನ್ನು ಜೀವಮಾನದ ಸಾಧನೆ ಎಂದೇ ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ. ‘ತಂದೆ–ತಾಯಿ ನನ್ನಲ್ಲಿ ಬಾಲ್ಯದಲ್ಲೇ ದೇಶಭಕ್ತಿಯನ್ನು ತುಂಬಿದ್ದರಿಂದ ಸೇನೆಯ ಸಮವಸ್ತ್ರ ತೊಡುವುದು ಸಾಧ್ಯವಾಗಿದೆ’ ಎಂದಿದ್ದಾರೆ.
ಮಂಗಳೂರಿನ ಬೋಳೂರು ನಿವಾಸಿ ಅಮೃತ್ ಕುಮಾರ್ ಮತ್ತು ಲೀಲಾ ದಂಪತಿಯ ಪುತ್ರಿಯಾಗಿರುವ ದಿಶಾ ಅವರು ನಗರದ ಕೆನರಾ ವಿದ್ಯಾಸಂಸ್ಥೆಯಲ್ಲಿ ಒಂದನೇ ತರಗತಿಯಿಂದ ಪಿಯುಸಿ ವರೆಗೆ ವಿದ್ಯಭ್ಯಾಸ ಪಡೆದಿದ್ದಾರೆ. ಬೆಂಗಳೂರು ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ನಲ್ಲಿ ಬಿ.ಇ ಪದವಿ ಪಡೆದಿದ್ದಾರೆ. ಅವರು 2016ರಲ್ಲಿ ನೌಕಾಪಡೆಗೆ ಆಯ್ಕೆಯಾಗಿದ್ದರು. ಅವರ ಸೋದರಿ ಜ್ಯೋತ್ಸಾ ಅವರೂ ಎಂಜಿನಿಯರ್ ಆಗಿದ್ದು ನಾರ್ವೆಯಲ್ಲಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಸೋದರಿಯರಿಬ್ಬರೂ ಭರತನಾಟ್ಯ ಹಾಗೂ ಹಿಂದದೂಸ್ತಾನಿ ಶಾಸ್ತ್ರೀಯ ಸಂಗೀತವನ್ನೂ ಅಭ್ಯಾಸ ಮಾಡಿದ್ದಾರೆ
Discover more from Coastal Times Kannada
Subscribe to get the latest posts sent to your email.







Discussion about this post