ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸುಮಾರು 32 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರು ಸಲ್ಲಿಸಿದ ಕೋರಿಕೆ ಯನ್ನು ಮನ್ನಿಸಿ ಪುತ್ತೂರು ಎಸಿ ಅವರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗಿಸ್ ಅವರಿಗೆ ಬೆಳ್ತಂಗಡಿ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದನ್ನು ಪರಿಶೀಲನೆ ನಡೆಸಿ ವರದಿಯ ಆಧಾರದಲ್ಲಿ ಸೆ.18ರಂದು ಮಹೇಶ್ ಶೆಟ್ಟಿ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ. ಗಡಿಪಾರು ಮಾಡಿದ ಆದೇಶದ ಪ್ರತಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿಗೆ ಬಂದ ಬಳಿಕ ಗಡಿಪಾರು ಮಾಡುವ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಗಡೀಪಾರನ್ನು ಪ್ರಶ್ನಿಸಿ ಸರಕಾರ ಅಥವಾ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಗಡೀಪಾರು ಆದೇಶವಾಗಿರುವುದರಿಂದ ಪುತ್ತೂರು ಎಸಿ ಕೋರ್ಟ್ಗೆ ತಿಮರೋಡಿ ಹಾಜರಾಗಬೇಕಿದೆ. ಈಗಾಗಲೆ ತಿಮರೋಡಿಗೆ ಶಸ್ತ್ರಾಸ್ತ್ರ ಕಾಯ್ದೆಯಡಿ ಸೆ.25ರೊಳಗೆ ವಿಚಾರಣೆಗೆ ಹಾಜರಾಗಲು ಎರಡನೇ ನೋಟಿಸ್ ನೀಡಲಾಗಿದ್ದು, ಈ ಮಧ್ಯೆ ನಿರೀಕ್ಷಣ ಜಾಮೀನು ಕೋರಿ ಮಂಗಳೂರು ಸತ್ರ ನ್ಯಾಯಾಲಯಕ್ಕೆ ತಿಮರೋಡಿ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ತೀರ್ಪು ಇನ್ನೂ ಬಂದಿಲ್ಲ. ಗಡೀಪಾರಿಗೂ ಮೊದಲು ತಿಮರೋಡಿಯನ್ನು ಬಂಧಿಸಿ ಬಳಿಕ ಪೊಲೀಸರ ಸಮ್ಮುಖದಲ್ಲಿ ರಾಯಚೂರು ಮಾನ್ವಿ ಪೊಲೀಸ್ ಠಾಣೆಗೆ ಹಾಜರು ಪಡಿಸುವುದು ಕಾನೂನಾತ್ಮಕ ಪ್ರಕ್ರಿಯೆಯಾಗಲಿದೆ. ಅಲ್ಲಿ ಒಂದು ವರ್ಷ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕಿದೆ.
Discover more from Coastal Times Kannada
Subscribe to get the latest posts sent to your email.
Discussion about this post