ಮಂಗಳೂರು : ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ – 2022 ರ ಉದ್ಘಾಟನಾ ಕಾರ್ಯಕ್ರಮ ನಗರದ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ರವಿವಾರ ನಡೆಯಿತು. ಸಮಾರಂಭದಲ್ಲಿ ಪಾಲ್ಗೊಂಡ ಅತಿಥಿ ಗಣ್ಯರಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ಗೂಡು ದೀಪ ಪಂಥಕ್ಕೆ ಚಾಲನೆ ನೀಡಲಾಯಿತು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಅರ್ಚಕರಾದ ವೇದ ಮೂರ್ತಿ ಅನಂತ ಪದ್ಮನಾಭ ಅಸ್ರಣರು ಆಶೀರ್ವಚನ ನೀಡಿದರು.

ದೀಪಾವಳಿ ಅಂಗವಾಗಿ ನಮ್ಮ ಕುಡ್ಲ ವಾಹಿನಿ ನಗರದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಗೂಡುದೀಪ ಪಂಥ’ ಕಲೆಯ ಸೊಬಗಿಗೆ ಕರಾವಳಿಯ ಸಂಸ್ಕೃತಿಯ ಬೆಡಗು ಸೇರಿಕೊಂಡು ಕಣ್ಮನ ತಣಿಸಿತು. ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಮೊದಲೆರಡು ವಿಭಾಗಗಳಲ್ಲಿ ಸ್ಪರ್ಧೆಗೆ ಬಂದಿದ್ದ ಗೂಡುದೀಪಗಳು ಶ್ರೀ ಕ್ಷೇತ್ರದ ಹೊರ ಆವರಣದಲ್ಲಿ ಮೇಳೈಸಿದರೆ ಗಾಜಿನ ಮನೆಯಲ್ಲಿ ನಡೆದ ಪ್ರತಿಕೃತಿ ವಿಭಾಗದ ಸ್ಪರ್ಧೆ ಕಲಾವಿದರ ಕಲ್ಪನೆಯ ಮೂಸೆಯಲ್ಲಿ ಮೂಡಿದ ಕಲಾಕೃತಿಗಳ ಮೂಲಕ ಮುದ ನೀಡಿತು.
ಗಾಜಿನ ಮನೆಯ ಹೊರಗೆ ವರಾಹ ರೂಪವನ್ನು ಸಿದ್ಧಗೊಳಿಸಿ ಇರಿಸಿ ಅದರ ಕೆಳಗೆ ‘ಕಾಂತಾರ’ ಎಂದು ಬರೆದಿಡಲಾಗಿತ್ತು. ಕೇದಾರನಾಥ ದೇವಸ್ಥಾನದ ಬೃಹತ್ ಮಾದರಿಗೆ ಪೇಪರ್ ರೋಲ್ಗಳನ್ನು ಬಳಸಲಾಗಿತ್ತು. ಐಸ್ಕ್ರೀಮ್ ತಿನ್ನುವ ಕಡ್ಡಿಗಳಿಂದ ತಯಾರಿಸಿದ ‘ಗುತ್ತುದ ಇಲ್ಲ್’ ಮುಂದೆ ಹಣತೆಗಳು ಬೆಳಗಿದಾಗ ನೋಡುಗರಲ್ಲಿ ಭಕ್ತಿ ಭಾವ ಮೂಡಿತು. ಎಂಟನೇ ತರಗತಿ ವಿದ್ಯಾರ್ಥಿ, ಕೊಲ್ಯದ ರಜತ್ ಶೆಣೈ ರಟ್ಟಿನಿಂದ ತಯಾರಿಸಿದ ಪುರಿ ಜಗನ್ನಾಥ ರಥಯಾತ್ರೆಯ ಚಿತ್ರಣ, ಪಿಯುಸಿ ವಿದ್ಯಾರ್ಥಿ ಚಿರಾಗ್ ಕಾವೂರು ಸೃಷ್ಟಿಸಿದ ಕಾಂತಾರ ಚಿತ್ರದ ಪೋಸ್ಟರ್ ಮಾದರಿ, ಉಡುಪಿಯ ಅಜಯ್ ಕಬ್ಬಿಣ ಮತ್ತು ಫೈಬರ್ನಿಂದ ನಿರ್ಮಿಸಿದ ‘ಚಲಿಸುವ ಹುಲಿ’ ಬಬ್ಬುಸ್ವಾಮಿ, ಬುದ್ಧ ಇತ್ಯಾದಿ ಹತ್ತಾರು ಕಲಾಕೃತಿಗಳು ಅಲ್ಲಿದ್ದವು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ , ಮಾಜಿ ಸಚಿವ ಕೃಷ್ಣ ಜೆ.ಪಾಲೇಮರ್, ಮೂಡಬಿದ್ರೆ ಶಾಸಕರಾದ ಉಮನಾಥ ಕೋಟ್ಯಾನ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಎಚ್. ಎಸ್.ಸಾಯಿರಾಂ, ಕ್ಷೇತ್ರದ ಉಪಾಧ್ಯಕ್ಷರಾದ ಉರ್ಮಿಳ ರಮೇಶ್ ಕುಮಾರ್, ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ದೇವೆಂದ್ರ ಪೂಜಾರಿ, ಕೋಶಾಧಿಕಾರಿ, ಪದ್ಮರಾಜ್ ಆರ್,, ಬಿ.ಜಿ.ಸುವರ್ಣ, ಶೇಖರ್ ಪೂಜಾರಿ, ಸೂರ್ಯ ಕುಮಾರ್, ಸುಧಾಕರ್ ರಾವ್ ಪೇಜಾವರ, ನಮ್ಮ ಕುಡ್ಲ ಸಂಸ್ಥೆಯ ನಿರ್ಧೇಶಕರಾದ ಹರೀಶ್ ಬಿ ಕರ್ಕೇರಾ, ಸುರೇಶ್ ಬಿ ಕರ್ಕೇರಾ, ಮೋಹನ್ ಬಿ. ಕರ್ಕೇರಾ, ಲೀಲಾಕ್ಷ ಕರ್ಕೇರಾ ಸೇರಿದಂತೆ ಮತ್ತಿರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.








Discussion about this post