ಮಂಗಳೂರು, ನ.24: ಸುರತ್ಕಲ್ ಟೋಲ್ಗೇಟ್ ನ್ನು ಹೆಜಮಾಡಿ ಟೋಲ್ಗೇಟ್ನೊಂದಿಗೆ ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್ಗೇಟ್ನ ದರವನ್ನು ಪರಿಷ್ಕರಿಸಲಾಗಿದೆ. ಅಲ್ಲದೆ 2022ರ ಡಿಸೆಂಬರ್ 1ರಿಂದ ಅನ್ವಯಗೊಳಿಸಿ ಶುಲ್ಕ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುರುವಾರ ಆದೇಶ ಹೊರಡಿಸಿದೆ.

ಈ ಹಿಂದೆ ಸುರತ್ಕಲ್ನಲ್ಲಿ ವಸೂಲಿ ಮಾಡುತ್ತಿದ್ದ ಸಂಪೂರ್ಣ ಟೋಲ್ ಗೇಟ್ ಶುಲ್ಕವನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲಿ ಮಾಡಲು ಆದೇಶಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾ.ಹೆ.66ರ ಸುರತ್ಕಲ್ ಟೋಲ್ ಪ್ಲಾಝಾ (ಎನ್ಐಟಿಕೆ ಬಳಿ) ವಿಲೀನಕ್ಕೆ ಅನುಮೋದನೆ ನೀಡಿದೆ. ನವಯುಗ್ ಉಡುಪಿ ಟೋಲ್ ವೇ ಪೈಲಿನ (ಟೋಲ್) ಯೋಜನೆಯಡಿ ಬರುವ ರಾ.ಹೆ. 66ರ ಸುರತ್ಕಲ್ ಟೋಲ್ ಗೇಟ್ನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಝಾದಿಂದ ಸಂಗ್ರಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಈವರೆಗೆ ಸುರತ್ಕಲ್ ಟೋಲ್ಗೇಟ್ನಲ್ಲಿ ಕೆ.ಎ.19′ ಸಂಖ್ಯೆಯ ಖಾಸಗಿ ವಾಹನಗಳಿಗೆ ಶುಲ್ಕವಿರಲಿಲ್ಲ. ಆದರೆ ಇತರ ನೋಂದಣಿ ಸಂಖ್ಯೆಯ ವಾಹನಿಗರಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಇದೀಗ ಸುರತ್ಕಲ್ ಟೋಲ್ಗೇಟ್ ಶುಲ್ಕವನ್ನು ಹೆಜಮಾಡಿ ಟೋಲ್ಗೇಟ್ ಶುಲ್ಕದೊಂದಿಗೆ ಸೇರಿಸಿ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದ ಕಾರಣ ‘ಕೆ.ಎ.19’ ಸಂಖ್ಯೆಯ ಖಾಸಗಿ ವಾಹನಿಗರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಸುರತ್ಕಲ್ ಟೋಲ್ಗೇಟ್ ನಲ್ಲಿ ಹಿಂದೆ ಇತರ ವಾಹನಗಳು ಕಟ್ಟುತ್ತಿದ್ದ ಶುಲ್ಕವನ್ನು ಹೆಜಮಾಡಿಯಲ್ಲಿ ಸೇರಿಸಿ ಕಟ್ಟುವುದು ಅನಿವಾರ್ಯವಾಗಿದೆ.

ಸುರತ್ಕಲ್ ಟೋಲ್ಗೇಟ್ನ್ನು ತೆರವುಗೊಳಿಸಬೇಕು. ಹೆಜಮಾಡಿ ಟೋಲ್ಗೇಟ್ನೊಂದಿಗೆ ವಿಲೀನಗೊಳಿಸಿದರೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂಬ ಬೇಡಿಕೆಯನ್ನು ಮುಂದಿಟ್ಟು ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ಕಳೆದೊಂದು ತಿಂಗಳಿನಿಂದ ಆಹೋರಾತ್ರಿ ಧರಣಿ ನಡೆಸುತ್ತಿತ್ತು. ಇದೀಗ ಸುರತ್ಕಲ್ ಟೋಲ್ಗೇಟ್ನ್ನು ತೆರವುಗೊಳಿಸುವುದಕ್ಕೆ ಪೂರ್ವಭಾವಿಯಾಗಿ ಹೆಜಮಾಡಿ ಟೋಲ್ಗೇಟ್ನಲ್ಲಿ ವಸೂಲಿ ಮಾಡಲಾಗುತ್ತಿದ್ದ ಶುಲ್ಕವನ್ನು ಹೆಚ್ಚಿಸಿದೆ. ಇದು ‘ಕೆ.ಎ.19’ ನೋಂದಣಿಯ ಖಾಸಗಿ
ವಾಹನಿಗರಿಗೆ ಕೇಂದ್ರ ಸರಕಾರ ಎಸಗಿದ ದ್ರೋಹ, ವಂಚನೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ಸುರತ್ಕಲ್ ಟೋಲ್ಗೇಟ್ನಲ್ಲಿ ನಾಲ್ಕು ಚಕ್ರದ ವಾಹನಗಳ ಏಕಮುಖ ಪಾಸ್ಗೆ 60 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಹೆಜಮಾಡಿ ಟೋಲ್ಗೇಟ್ನಲ್ಲಿ 40 ರೂ. ವಿಧಿಸಲಾಗುತ್ತಿತ್ತು. ಇದೀಗ ಹೆಜಮಾಡಿ ಟೋಲ್ಗೇಟ್ನಲ್ಲಿ ಏಕಮುಖ ಪಾಸ್ಗೆ 100 ರೂ. ತುಲ್ಲ ವಿಧಿಸಲಾಗುತ್ತದೆ. ಅದೇ ರೀತಿ ಬಸ್ ಮತ್ತು ಟ್ರಕ್ಗಳಿಗೆ ಸುರತ್ಕಲ್ ಟೋಲ್ಗೇಟ್ನಲ್ಲಿ 210 ರೂ ಮತ್ತು ಹೆಜಮಾಡಿ ಟೋಲ್ ಗೇಟ್ ನಲ್ಲಿ 145 ರೂ. ವಿಧಿಸಲಾಗುತ್ತಿತ್ತು. ಪುಷ್ಯತ ದರವು 355 ರೂ.ಆಗಿದೆ. ಲಘು ವಾಣಿಜ್ಯ ಮತ್ತು ಲಘು ಸರಕು ವಾಹನಗಳಿಗೆ ಸುರತ್ಕಲ್ ಟೋಲ್ಗೇಟ್ನಲ್ಲಿ 100 ರೂ., ಹೆಜಮಾಡಿ ಟೋಲ್ಗೇಟ್ನಲ್ಲಿ 70 ರೂ. ವಿಧಿಸಲಾಗುತ್ತಿತ್ತು. ಬದಲಾವಣೆ ಬಳಿಕ ಹೆಜಮಾಡಿ ಟೋಲ್ಗೇಟ್ನಲ್ಲಿ 170 ರೂ. ವಸೂಲಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

2018ರಲ್ಲೇ ಆಗಿತ್ತು ವಿಲೀನ ನಿರ್ಣಯ : 2018ರಲ್ಲಿ ಹೆಜಮಾಡಿ ಟೋಲ್ ಗೇಟ್ ಶುರುವಾಗುವಾಗಲೇ ಸುರತ್ಕಲ್ ಟೋಲ್ ಗೇಟ್ ತೆರವಿನ ಬಗ್ಗೆ ಪ್ರಸ್ತಾಪ ಆಗಿತ್ತು. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ರಾಜ್ಯ ಸರಕಾರದ ಲೋಕೋಪಯೋಗಿ ಮತ್ತು ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸಭೆ ನಡೆಸಿದ್ದರು. ಸಭೆಯಲ್ಲಿ ವಿಲೀನದ ಸಂದರ್ಭ ಜನರಿಗೆ ಹೊರೆಯಾಗದಂತೆ ಶುಲ್ಕವನ್ನು ಕಡಿತಗೊಳಿಸಲು ಸೂಚಿಸಲಾಗಿತ್ತು. ಆದರೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಗಾಳಿಗೆ ತೂರಲಾಗಿದ್ದು ಯಾವುದೇ ದಾಕ್ಷೀಣ್ಯ ತೋರದೆ ಸುರತ್ಕಲ್ ನಲ್ಲಿದ್ದ ಶುಲ್ಕದ ಹೊರೆಯನ್ನು ಹೆಜಮಾಡಿದೆ ಹೊರಿಸಲಾಗಿದೆ. ಅದರ ಜೊತೆಗೆ, ಸುರತ್ಕಲ್ ನಲ್ಲಿ ಕೆಎ 19 ವಾಹನಗಳಿಗಿದ್ದ ರಿಯಾಯಿತಿಯನ್ನೂ ರದ್ದು ಪಡಿಸಲಾಗಿದೆ.
ಹೆಜಮಾಡಿ ಟೋಲ್ ಗೇಟ್ ನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿವೆ.
Discover more from Coastal Times Kannada
Subscribe to get the latest posts sent to your email.







Discussion about this post