ತಿರುವನಂತಪುರಂ: 2011ರಲ್ಲಿ ಸೌಮ್ಯ ಎಂಬಾಕೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಬಿಗಿ ಭದ್ರತೆಯ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿದ್ದ ಅಪರಾಧಿ ಗೋವಿಂದಚಾಮಿ ಅಲಿಯಾಸ್ ಚಾರ್ಲಿ ಥಾಮಸ್ ಎಂಬಾತ ಶುಕ್ರವಾರ (ಜು.24) ಪರಾರಿಯಾಗಿದ್ದು, ಕೆಲವೇ ಗಂಟೆಗಳಲ್ಲಿ ಆತನನ್ನು ಮತ್ತೆ ಬಂಧಿಸಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನಿಂದ ಪರಾರಿಯಾಗಿದ್ದ ಅಪರಾಧಿ ಗೋವಿಂದಚಾಮಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜೈಲಿನ ಡಿಜಿಪಿ ಬಲರಾಮ್ ಕುಮಾರ್ ಉಪಾಧ್ಯಾಯ ತಿಳಿಸಿದ್ದಾರೆ. ಅಲ್ಲದೇ ಕರ್ತವ್ಯಲೋಪದ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಣ್ಣೂರು ನಗರು ವ್ಯಾಪ್ತಿಯ ಥಾಲಾಪ್ ಎಂಬಲ್ಲಿ ಪಾಳುಬಿದ್ದ ಕಟ್ಟಡದ ಬಳಿ ಎಡಗೈ ಇಲ್ಲದ ಅಪರಾಧಿ ಗೋವಿಂದಚಾಮಿಯನ್ನು ಬಂಧಿಸಲಾಗಿತ್ತು. ಬಿಗಿ ಭದ್ರತೆಯ ಜೈಲಿನಿಂದ ಆತ ಹೇಗೆ ತಪ್ಪಿಸಿಕೊಂಡ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಕಣ್ಣೂರು ನಗರ ಪೊಲೀಸ್ ಕಮಿಷನರ್ ನಿತಿನ್ ರಾಜ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಪರಾಧಿ ಸುಮಾರು 20ಕ್ಕೂ ಅಧಿಕ ದಿನಗಳಿಂದ ಜೈಲಿನಿಂದ ಪರಾರಿಯಾಗಲು ಸಿದ್ಧತೆ ನಡೆಸಿದ್ದ. ಆದರೆ ಈ ಕೃತ್ಯದಲ್ಲಿ ಬೇರೆಯವರು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಬಂಧಿತ ಗೋವಿಂದಚಾಮಿಯನ್ನು ಪ್ರಕ್ರಿಯೆಯ ಭಾಗವಾಗಿ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಜೈಲಿನ ಸೆಲ್ ಅನ್ನು ಪರಿಶೀಲನೆ ನಡೆಸಿದಾಗ, ಗೋವಿಂದಚಾಮಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿತ್ತು. ಕೂಡಲೇ ಜೈಲಿನ ಅಧಿಕಾರಿಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಜೈಲು ಆವರಣದಲ್ಲಿ ಆತನ ಪತ್ತೆಯಾಗಿಲ್ಲವಾಗಿತ್ತು. ಕೊನೆಗೆ ಜೈಲಿನ ಹೊರಭಾಗದಲ್ಲಿ ಆತನನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.
Discussion about this post