ಮಂಗಳೂರು: ಹೆಸರುಬೇಳೆ ಮತ್ತು ಐಸ್ ಕ್ರೀಂ ಸೇವಿಸಿ ಫುಡ್ ಪಾಯಿಸನ್ಗೊಳಗಾದ ನಾಲ್ವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಪ್ಪು ಬಪ್ಪಾಲ್ನ ನಿವಾಸಿಗಳಾದ ಅರವಿಂದ ರಾವ್ (52), ಪತ್ನಿ ಪ್ರಭಾವತಿ (45) ಮತ್ತು ಮಕ್ಕಳಾದ ಸೌರಭ್ (20) ಪ್ರತೀಕ್ (18) ಅನಾರೋಗ್ಯ ಹೊಂದಿದ್ದಾರೆ.
ಇವರು ನಿನ್ನೆ ರಾತ್ರಿ ಮಲಗುವ ಮೊದಲು ಹೆಸರುಬೇಳೆ ಮತ್ತು ಐಸ್ ಕ್ರೀಂ ತಿಂದಿದ್ದರು. ಆ ಬಳಿಕ ವಾಂತಿ ಶುರುವಾಗಿದೆ. ಆದರೆ, ಇಂದು ಬೆಳಗ್ಗೆ ಅವರು ಅಸ್ವಸ್ಥಗೊಂಡಿದ್ದಾರೆ. ಇಂದು ಬೆಳಗಾದರೂ ಬಾಗಿಲು ತೆರೆಯದ ಕಾರಣ ಅವರ ಸಂಬಂಧಿಗಳಾದ ಕೌಶಿಕ್, ಮಂಜುನಾಥ್, ಮತ್ತು ರೇಣುಕಾ ಎಂಬುವವರು ಮನೆಗೆ ಬಂದು ಬಾಗಿಲು ತೆಗಿಸಿದ್ದು, ವಾಂತಿ ಭೇದಿ ಮಾಡಿ ತೀವ್ರ ನಿತ್ರಾಣಗೊಂಡಿದ್ದ ನಾಲ್ವರನ್ನು ತಕ್ಷಣ ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿಯೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿರುವುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
ನಾಲ್ವರ ಆತ್ಮಹತ್ಯೆ ಎಂದು ವದಂತಿ : ಉದ್ದೇಶಪೂರ್ವಕವಾಗಿ ವಿಷ ಸೇವಿಸಿದ ಪ್ರಕರಣ ಎಂದು ಭಾವಿಸಲಾಗಿತ್ತು. ಕುಟುಂಬವು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದೆ ಎಂಬ ವದಂತಿಗಳು ಶೀಘ್ರದಲ್ಲೇ ಹರಡಲು ಪ್ರಾರಂಭಿಸಿ ಕೆಲ ಮಾಧ್ಯಮಗಳಲ್ಲೂ ವರದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ‘ಕುಟುಂಬಕ್ಕೆ ವಿಷಾಹಾರ ಸೇವನೆಯಿಂದ ತೀವ್ರ ತೊಂದರೆಯಾಗಿತ್ತು. ಕುಟುಂಬದ ನಾಲ್ವರು ಐಸ್ ಕ್ರೀಂ ಮತ್ತು ಸೊಪ್ಪಿನಿಂದ ತಯಾರಿಸಿದ ಸಿಹಿತಿಂಡಿ ಸೇವಿಸಿದ್ದು ಅದು ಫುಡ್ ಪಾಯಿಸನ್ ಆಗಿರಬಹುದು’ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ನಾಲ್ವರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post