ಕೊಣಾಜೆ: ಪಜೀರು ಗ್ರಾಮದ ಕಂಬಳಪದವು ಬಳಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎಸಿಪಿ ಧನ್ಯಾ ನಾಯಕ್ ನೇತೃತ್ವದ ಆ್ಯಂಟಿ ಡ್ರಗ್ ಟೀಮ್ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಬಂಧಿತರಿಂದ ಸುಮಾರು ಒಂದೂವರೆ ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲಪಾಡಿಯ ಮರಿಯ ಚರ್ಚ್ ಕಂಪೌಂಡ್ ನಿವಾಸಿ ಗೌತಮ್(22), ಕುಂಪಲ ಹನುಮಾನ್ ದೇವಸ್ಥಾನ ಬಳಿಯ ನಿವಾಸಿ ಕಾರ್ತಿಕ್(27), ತೊಕ್ಕೊಟ್ಟು ಗಣೇಶ ನಗರದ ಗಣೇಶ ಮಂದಿರದ ಬಳಿ ನಿವಾಸಿ ನಿಖಿಲ್(28) ಬಂಧಿತ ಆರೋಪಿಗಳು. ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರಿನ ಕೈಗಾರಿಕಾ ನಿರ್ಜನ ಪ್ರದೇಶದಲ್ಲಿ ಸೋಮವಾರ ಆರೋಪಿಗಳು ಕಾರಿನಲ್ಲಿ ಎಂಡಿಎಂಎ ಪದಾರ್ಥ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತರಿಂದ 1.50,000 ರೂ. ಅಂದಾಜು ಮೌಲ್ಯದ 50 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತು ಹಾಗೂ ಮಾರಾಟ ಮಾಡಲು ಬಳಸಿದ ಕಾರು ಮತ್ತು 3 ಮೊಬೈಲ್ ಫೋನ್ ಗಳು, ಡಿಜಿಟಲ್ ತೂಕ ಮಾಪನ ಹಾಗೂ ಗಾಜಿನ ನಳಿಕೆಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ 7,76,980 ರೂ. ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾರ್ಗದರ್ಶನ, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ದಿನೇಶ್ ಕುಮಾರ್ ನಿರ್ದೇಶನದಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ಎನ್. ನಾಯಕ್ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ನಿರೀಕ್ಷಕ ರಾಜೇಂದ್ರ ಬಿ., ಪಿಎಸ್ಸೈ ನಾಗರಾಜ ಎಸ್., ಮತ್ತು ಆ್ಯಂಟಿ ಡ್ರಗ್ ತಂಡದ ಪಿಎಸ್ಸೈ ಪುನೀತ್, ಸಿಬ್ಬಂದಿಯಾದ ಸಾಜು ನಾಯರ್, ಮಹೇಶ್, ರೇಜಿ, ಶಿವಕುಮಾರ್, ಅಕ್ಬರ್, ರೇಷ್ಮಾ, ರಾಮ ನಾಯಕ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post