ಮಂಗಳೂರು, ಜ.27: ಕರ್ನಾಟಕದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡದು ಎನ್ನಲಾದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವನ್ನು ಮಂಗಳೂರು ಪೊಲೀಸರು ಕೆಲವೇ ಕೆಲವು ಸುಳಿವುಗಳನ್ನು ಹಿಡಿದು ಭೇದಿಸಿದ್ದಾರೆ. ವಿಶೇಷ ಅಂದ್ರೆ, ಇಂಥ ಪ್ರಕರಣಗಳಲ್ಲಿ ದರೋಡೆಯಾದ ಎಲ್ಲ ಚಿನ್ನಾಭರಣವೂ ರಿಕವರಿ ಆಗುವುದಿಲ್ಲ. ಕೋಟೆಕಾರು ದರೋಡೆಯಲ್ಲಿ ಕಳವಾಗಿದ್ದ 18.600 ಕೇಜಿ ಚಿನ್ನಾಭರಣ ಪೈಕಿ 18.300 ಕೇಜಿಯಷ್ಟು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಕ್ಕಾಗಿ ಮಂಗಳೂರಿನ ನಾಲ್ಕೈದು ಠಾಣೆಗಳ ಅಪರಾಧ ಪತ್ತೆಯಲ್ಲಿ ಪಳಗಿದ ಪೊಲೀಸರನ್ನು ಬಳಸಿಕೊಳ್ಳಲಾಗಿದೆ. ಐವರು ಇನ್ಸ್ ಪೆಕ್ಟರ್, ಐವರು ಸಬ್ ಇನ್ಸ್ ಪೆಕ್ಟರ್, ಇಬ್ಬರು ಎಸಿಪಿಗಳು ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದ್ದಾರೆ. ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಎಂಟು ಪೊಲೀಸ್ ತಂಡಗಳು ಕೆಲಸ ಮಾಡಿದ್ದವು. ವಶಪಡಿಸಿದ ಚಿನ್ನಾಭರಣವನ್ನು ಮಂಗಳೂರಿಗೆ ಎಸ್ಕಾರ್ಟ್ ಭದ್ರತೆಯಲ್ಲಿ ತರಲಾಗಿದ್ದು, ಕಮಿಷನರ್ ಕಚೇರಿಯಲ್ಲಿ ಮಾಧ್ಯಮದ ಮುಂದೆ ಪ್ರದರ್ಶನ ಮಾಡಲಾಗಿದೆ.




ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಕಮಿಷನರ್ ಅನುಪಮ್ ಅಗರ್ವಾಲ್ ಅವರು, ಮುಂಬೈಯಲ್ಲಿ ನೆಲೆಸಿರುವ ಮಂಗಳೂರು ಮೂಲದವ ಎನ್ನಲಾಗಿರುವ ಶಶಿ ತೇವರ ಎಂಬಾತ ಆರು ತಿಂಗಳ ಹಿಂದೆ ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್ ಎಂಬುದನ್ನು ತಿಳಿಸಿದ್ದ. ಅದರಂತೆ 2024ರ ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್ನಲ್ಲಿ ಮುರುಗಂಡಿ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಸೂಕ್ತ ದಿನವೆಂದು ನಿರ್ಧರಿಸಿ ಜ. 17ರಂದು ದರೋಡೆ ಕೃತ್ಯ ಎಸಗಿದ್ದಾರೆ. ಮೂರು ಮಂದಿ ಮುಂಬೈಯಿಂದ ಕಾರಿನಲ್ಲಿ ಬಂದಿದ್ದರೆ, ಇಬ್ಬರು ಆರೋಪಿಗಳು ರೈಲಿನಲ್ಲಿ ಆಗಮಿಸಿದ್ದರು. ಕೃತ್ಯ ನಡೆದ ದಿನದಂದು ಮಧ್ಯಾಹ್ನ 12.20ರ ವೇಳೆಗೆ ಸ್ಥಳಕ್ಕೆ ತಲುಪಿದ್ದ ಆರೋಪಿಗಳು, ಅಲ್ಲಿ ಕೆಲ ಹೊತ್ತು ಕಾದು 1.10ರ ವೇಳೆಗೆ ಬ್ಯಾಂಕ್ಗೆ ನುಗ್ಗಿ ಕೃತ್ಯ ಎಸಗಿ ಪರಾರಿಯಾಗಿದ್ದರು ಎಂದು ವಿವರಿಸಿದರು.


ಸೂತ್ರಧಾರ ಶಶಿ ದೇವರ್ ಯಾರು ? ಅಂದಹಾಗೆ, ಸ್ಥಳೀಯರ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗೆ, ಶಶಿ ದೇವರ್ ಎನ್ನುವಾತ ಎಲ್ಲಿಯ ವ್ಯಕ್ತಿಯೆಂದು ಇನ್ನೂ ತಿಳಿದಿಲ್ಲ. ಆತನ ಬಂಧನ ಬಳಿಕವೇ ಕೋಟೆಕಾರು ಬ್ಯಾಂಕನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದರು, ಇದರ ಬಗ್ಗೆ ಸುಳಿವು ಕೊಟ್ಟ ಸ್ಥಳೀಯರು ಯಾರು ಎನ್ನುವ ಮಾಹಿತಿ ಸಿಗಬೇಕಷ್ಟೇ ಎಂದು ಕಮಿಷನರ್ ತಿಳಿಸಿದ್ದಾರೆ. ಧಾರಾವಿ ಗ್ಯಾಂಗ್ ಸದಸ್ಯರೇ ಮಾಹಿತಿ ಕೊಟ್ಟಿದ್ದರೇ ಎನ್ನುವ ಪ್ರಶ್ನೆಗೆ, ಕಮಿಷನರ್ ಸ್ಪಷ್ಟ ಮಾಹಿತಿ ನೀಡಿಲ್ಲ. ನಮ್ಮ ಪೊಲೀಸರು ಸಿಸಿಟಿವಿ ಇನ್ನಿತರ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣ ಭೇದಿಸಿದ್ದಾರೆ ಎಂದರು. ಸದ್ಯದ ಮಾಹಿತಿ ಪ್ರಕಾರ, ಶಶಿ ದೇವರ್ ಮಂಗಳೂರು ಮೂಲದವನು ಎನ್ನಲಾಗುತ್ತಿದ್ದು, ಆತ ಮುಂಬೈ ಜೈಲಿನಲ್ಲಿದ್ದಾಗ ಮುರುಗಂಡಿ ಪರಿಚಯವಾಗಿತ್ತು. ಇಬ್ಬರೂ ಜೊತೆಗೂಡಿ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದರು.
ದರೋಡೆಯ ಬಳಿಕ ಆರೋಪಿಗಳಾದ ಮುರುಗಂಡಿ ತೇವರ್ ಮತ್ತು ಯೋಸುವಾ ರಾಜೇಂದ್ರನ್ ಫಿಯಟ್ ಕಾರಿನಲ್ಲಿ ತಲಪಾಡಿ ಗೇಟಿನಿಂದ ಕೇರಳ ಕಡೆಗೆ ಕಡೆಗೆ ಪರಾರಿಯಾಗಿದ್ದರೆ, ಉಳಿದ ನಾಲ್ಕು ಆರೋಪಿಗಳು ಮಂಗಳೂರು ರೈಲು ನಿಲ್ದಾಣದ ಮೂಲಕ ತೆರಳಿದ್ದಾರೆ. ಇವರಲ್ಲಿ ಮೂರು ಮಂದಿ ಆಟೋದಲ್ಲಿ ಮತ್ತು ಓರ್ವ ಬಸ್ಸಿನಲ್ಲಿ ತೆರಳಿದ್ದ. ಮುಂಬೈಗೆ ತೆರಳಿದ್ದ ಮುರುಗಂಡಿ ಮತ್ತು ತಂಡ ಅಲ್ಲಿಂದ ತಮಿಳುನಾಡಿಗೆ ಪರಾರಿಯಾಗಲು ಯೋಜನೆ ರೂಪಿಸಿದ್ದ. ದೋಚಿದ ಚಿನ್ನಾಭರಣವನ್ನು ಸಮಾನವಾಗಿ ಹಂಚಿಕೊಂಡು ಮುಂಬೈನ ಕಪ್ಪುಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ಲಾನ್ ಆರೋಪಿಗಳದ್ದಾಗಿತ್ತು. ಆರೋಪಿಗಳನ್ನು ಬಂಧಿಸುವುದು ಮಾತ್ರವಲ್ಲ, ಅವರಿಂದ ಬ್ಯಾಂಕ್ನಲ್ಲಿ ಅಡವಿಟ್ಟಿದ್ದ ಸುಮಾರು 1600 ಗ್ರಾಹಕರ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವುದು ಕೂಡಾ ಪೊಲೀಸರ ಪ್ರಮುಖ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ತಂಡಗಳ ಮೂಲಕ ಕಾರ್ಯಾಚರಣೆ ನಡೆಸಿದ ಕಾರಣ ಆರೋಪಿಗಳು ಚಿನ್ನಾಭರಣವನ್ನು ಮಾರಾಟ ಮಾಡುವ ಮೊದಲು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹೇಳಿದರು.
ಪೊಲೀಸ್ ತಂಡದಲ್ಲಿ ಎಸಿಪಿಗಳಾದ ಧನ್ಯಾ ನಾಯಕ್, ಮನೋಜ್ ನಾಯ್ಕ್, ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಕೋಣಾಜೆ ಇನ್ಸ್ ಪೆಕ್ಟರ್ ರಾಜೇಂದ್ರನ್, ಕಂಕನಾಡಿ ನಗರ ಠಾಣೆಯ ಟಿ.ಡಿ. ನಾಗರಾಜ್, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಗೌಡ, ಸಿಸಿಬಿಯ ಮಹಮ್ಮದ್ ರಫೀಕ್, ಪಿಎಸ್ಐಗಳಾದ ಕಾವೂರು ಠಾಣೆಯ ಮಲ್ಲಿಕಾರ್ಜುನ, ಸಿಸಿಬಿಯ ಸುದೀಪ್, ಶರಣಪ್ಪ, ಸುರತ್ಕಲ್ ಠಾಣೆಯ ರಾಘವೇಂದ್ರ, ಉಳ್ಳಾಲದ ಸಂತೋಷ್ ಸೇರಿ ಮಂಗಳೂರು ನಗರ ವ್ಯಾಪ್ತಿಯ ಠಾಣೆಗಳಲ್ಲಿರುವ ಕ್ರೈಮ್ ಪೊಲೀಸ್ ತಂಡವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪ್ರತ್ಯೇಕ ಸ್ಕ್ವಾಡ್ ತಂಡವೊಂದು ತಮಿಳುನಾಡಿಗೆ ತೆರಳಿ ಕಾರ್ಯಾಚರಣೆ ನಡೆಸಿತ್ತು. ಪೊಲೀಸರು ಒಗ್ಗೂಡಿ ಕೆಲಸ ಮಾಡಿದರೆ ಯಾವುದನ್ನೂ ಭೇದಿಸಬಹುದು ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.
Discover more from Coastal Times Kannada
Subscribe to get the latest posts sent to your email.







Discussion about this post