ಮಂಗಳೂರು : ನವಮಂಗಳೂರು ಬಂದರಿನಿಂದ 100 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬೋಟ್ನ್ನು ಪತ್ತೆ ಹಚ್ಚಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಯು 31 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.
ಅ. 24ರಂದು ಗೋವಾ ತೀರದಲ್ಲಿ ಕಾಣಿಸಿಕೊಂಡಿದ್ದ ಈ ಬೋಟ್ ಬಳಿಕ ಕಾಣೆಯಾಗಿತ್ತು. ಈ ಕುರಿತು ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಸಿಬ್ಬಂದಿ ಮೂಲಕ ಹುಡುಕಾಟ ಆರಂಭಿಸಿದರೂ ಪ್ರಯೋಜನವಾಗಲಿಲ್ಲ. ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ, ಗಾಳಿಗೆ ಸಮುದ್ರ ಪ್ರಕ್ಷುಬ್ಧಗೊಂಡಿತ್ತು. ಈ ವೇಳೆ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಾಪತ್ತೆಯಾಗಿತ್ತು.


ಬೋಟ್ ಪತ್ತೆಗೆ ಪ್ರಯತ್ನಿಸಿದರೂ ಕಾರ್ಯಾಚರಣೆ ಫಲಿಸಿರಲಿಲ್ಲ. ಅಂತಿಮವಾಗಿ ಕೊಚ್ಚಿಯಿಂದ ಏರ್ ಕ್ರಾಫ್ಟ್ ತರಿಸಿ ಹುಡುಕಾಟ ಮುಂದುವರೆಸಿತ್ತು. ಶನಿವಾರ ಅಪಾಯಕ್ಕೆ ಸಿಲುಕಿದ್ದ ಬೋಟ್ ಅನ್ನು ಪತ್ತೆಹಚ್ಚಲಾಗಿದ್ದು, ಅದರಲ್ಲಿದ್ದ 31 ಮೀನುಗಾರರನ್ನು ರಕ್ಷಿಸಲಾಗಿದೆ.
ಸ್ಟೀಯರಿಂಗ್ ಗೇರ್ ದೋಷದಿಂದಾಗಿ ಈ ಬೋಟ್ ನಿಯಂತ್ರಣ ತಪ್ಪಿತ್ತು. ಆದ್ದರಿಂದ ಈ ಬೋಟ್ ಮಂಗಳೂರಿನ ಕರಾವಳಿಯಿಂದ ಸುಮಾರು 100 ನಾಟಿಕಲ್ ಮೈಲು (ಸುಮಾರು 185 ಕಿ.ಮೀ) ದೂರದ ಸಮುದ್ರದಲ್ಲಿ 11 ದಿನಗಳಿಂದ ತೇಲಾಡುತ್ತಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿಯ ಮಧ್ಯೆಯೂ, ಐಸಿಜಿಎಸ್ ಕಸ್ತೂರ್ಬಾ ಗಾಂಧಿ ನೌಕೆ, ಕೊಚ್ಚಿಯಿಂದ ಕರಾವಳಿ ರಕ್ಷಕ ದಳದ ಡೊರ್ನಿಯರ್ ವಿಮಾನ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ಕರಾವಳಿ ರಕ್ಷಕ ದಳದ ಸಿಬ್ಬಂದಿ ತಾಂತ್ರಿಕ ಮತ್ತು ಲಾಜಿಸ್ಟಿಕ್ ನೆರವು ನೀಡಿದ್ದಾರೆ. ಸ್ಟೀರಿಂಗ್ ದೋಷ ಸರಿಪಡಿಸಿ, ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆದು ತರುವಲ್ಲಿ ಯಶಸ್ವಿಯಾಗಿದೆ ಎಂದು ಎಂದು ಕೋಸ್ಟ್ ಗಾರ್ಡ್ ಪ್ರಕಟಣೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post