ಮಂಗಳೂರು, ಫೆ.27: ತನ್ನ ಬ್ಯಾಂಕ್ ಖಾತೆಯನ್ನು ಸ್ನೇಹಿತನೇ ದುರುಪಯೋಗ ಮಾಡಿದ್ದಾನೆಂಬ ವ್ಯಕ್ತಿಯೊಬ್ಬರ ದೂರಿನ ಬೆನ್ನತ್ತಿದ ಮಂಗಳೂರಿನ ಸೈಬರ್ ಠಾಣೆ ಪೊಲೀಸರು ಹೈದ್ರಾಬಾದ್ ನಲ್ಲಿ ಕುಳಿತು ಸೈಬರ್ ಅಪರಾಧಕ್ಕೆ ಬ್ಯಾಂಕ್ ಖಾತೆಗಳನ್ನು ಪೂರೈಸುತ್ತಿದ್ದ ಐವರು ಖದೀಮರನ್ನು ಸೆರೆಹಿಡಿದಿದ್ದಾರೆ.
ಮಂಗಳೂರು ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬವರು ತನ್ನ ಸ್ನೇಹಿತ ಮುಲ್ಕಿ ನಿವಾಸಿ ಇಬ್ರಾಹಿಂ ಎಂಬವರಿಗೆ ಎರಡು ವರ್ಷಗಳ ಹಿಂದೆ ತನ್ನ ಚಾಲ್ತಿ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ಬಿಟ್ಟುಕೊಟ್ಟಿದ್ದರು. ಬ್ಯಾಂಕ್ ಖಾತೆಯ ಪಾಸ್ ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ಟೆಲ್ ಕಂಪನಿಯ ಸಿಮ್ ಕಾರ್ಡನ್ನು ನೀಡಿದ್ದರು. ಆದರೆ ತನ್ನ ಖಾತೆಯನ್ನು ದುರುಪಯೋಗ ಮಾಡಿರುವ ಬಗ್ಗೆ ಬ್ಯಾಂಕಿನಿಂದ ತಿಳಿದ ಮೊಹಮ್ಮದ್ ಇಕ್ಬಾಲ್ ಪೊಲೀಸ್ ದೂರು ನೀಡಿದ್ದರು.
ಪೊಲೀಸರು ಇಬ್ರಾಹಿಂನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ, ಕಮಿಷನ್ ಆಸೆಗೆ ಹೈದ್ರಾಬಾದ್ ನಲ್ಲಿರುವ ತಂಡಕ್ಕೆ ಬ್ಯಾಂಕ್ ಖಾತೆ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ. ಇದರಂತೆ, ಪೊಲೀಸರು ಅಲ್ಲಿಗೆ ತೆರಳಿ ಐದು ಜನರನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರಿನ ಶೇಖ್ ಕರೀಮುಲ್ಲಾ ಅಲಿಯಾಸ್ ರಸೂಲ್ (27), ಕರ್ನೂಲ್ ನ ಬುಡಿದಿನ್ನೆ ವಂಶಿ ಅಲಿಯಾಸ್ ಗುರು (21), ತೆಲಂಗಾಣ ಹೈದರಾಬಾದ್ ನ ಪಂಡಿತಿ ಕ್ರಾಂತಿ ಕುಮಾರ್ (36), ಮಂಗಳೂರು ಮೂಲ್ಕಿಯ ಇಬ್ರಾಹಿಂ (35), ತೆಲಂಗಾಣ ಹೈದರಾಬಾದ್ ನ ಬಡೆ ಶ್ರೀನಿವಾಸ್ (38), ನೆಲ್ಲೂರಿನ ಉತ್ಪಲ ಸಂತೋಷ್ ಕೃಷ್ಣ (35) ಬಂಧಿತರು.

ಆರೋಪಿಗಳಿಂದ 18 ಮೊಬೈಲ್ ಫೋನ್, 1 ಲ್ಯಾಪ್ ಟಾಪ್, 12 ಸಿಮ್ ಕಾರ್ಡ್, 15 ಚೆಕ್ ಬುಕ್, 12 ಬ್ಯಾಂಕ್ ಪಾಸ್ ಬುಕ್ , 18 ಡೆಬಿಟ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದೂರುದಾರರಾದ ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಅವರ ಚಾಲ್ತಿ ಖಾತೆಯನ್ನು ಸ್ನೇಹಿತ ಇಬ್ರಾಹಿಂ ಎಂಬಾತ ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಂಡಿದ್ದ. ಅದರಂತೆ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿ.ಎಂ. ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಸಿಮ್ ಕಾರ್ಡನ್ನು ಇಬ್ರಾಹಿಂಗೆ ನೀಡಿದ್ದರು. ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ತನಿಖೆ ಕೈಗೊಂಡು, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಪರಿಶೀಲಿಸಿದಾಗ, ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚಕರ ತಂಡ ಹೈದರಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ಕಂಡು ಬಂದಿದೆ. ಪೊಲೀಸ್ ಅಧಿಕಾರಿಗಳ ತಂಡ ಹೈದರಾಬಾದ್ ಗೆ ತೆರಳಿ ವಂಚಕರ ತಂಡವನ್ನು ಪತ್ತೆ ಮಾಡಿ, ಐವರನ್ನು ಹೈದರಾಬಾದ್ನಿಂದ ಹಾಗೂ ಓರ್ವನನ್ನು ಮಂಗಳೂರಿನಿಂದ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ ಬ್ಯಾಂಕ್ ಖಾತೆದಾರರಿಗೆ ಶೇ.4 ರಿಂದ 6ರಷ್ಟು ಕಮಿಷನ್ ನೀಡುವುದಾಗಿ ಅಕರ್ಷಕ ಜಾಹೀರಾತುಗಳನ್ನು ನೀಡುತ್ತಿದ್ದರು. ಇದಕ್ಕೆ ಸ್ಪಂದಿಸಿದ ವ್ಯಕ್ತಿಗಳ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರ ಮತ್ತು ಒಟಿಪಿ ಪಡೆದು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ಕಳುಹಿಸಿ, ವಂಚಿಸುತ್ತಿರುವುದು ತನಿಖೆ ವೇಳೆ ತಿಳಿದುಬಂದಿರುತ್ತದೆ.
ಮಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಒಂದು ಬ್ಯಾಂಕ್ ಖಾತೆಯ ಮೇಲೆ ಎನ್ ಸಿ ಆರ್ ಪಿ ಪೋರ್ಟಲ್ ನಲ್ಲಿ ದೇಶಾದ್ಯಂತ ಸುಮಾರು 5 ದೂರುಗಳು ದಾಖಲಾಗಿವೆ. ಆರೋಪಿಗಳಿಂದ ಸ್ವಾಧೀನಪಡಿಸಿದ ಮೊಬೈಲ್ ಫೋನ್ ಹಾಗೂ ಲ್ಯಾಪ್ ಟಾಪ್ ಪರಿಶೀಲಿಸಿ ದಾಗ ಒಟ್ಟು 72 ಖಾತೆಗಳ ವಿವರಗಳು ಕಂಡುಬಂದಿದ್ದು, ಅದರಲ್ಲಿ 30 ಬ್ಯಾಂಕ್ ಖಾತೆಗಳ ಮೇಲೆ ಪೋರ್ಟಲ್ ನಲ್ಲಿ ಒಟ್ಟು 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡುಬಂದಿದೆ.
ಫೆ.26ರಂದು ಒಂದೇ ದಿನ 2 ಕೋ. ರೂ.ಗೂ ಹೆಚ್ಚಿನ ಹಣಕಾಸಿನ ವಹಿವಾಟು ನಡೆಸಿರುವುದು ತನಿಖೆ ವೇಳೆ ಕಂಡುಬಂದಿದೆ. ಸೈಬರ್ ವಂಚಕರು ವಂಚನೆಗೆ ಬಳಸಿರುವ ಬ್ಯಾಂಕ್ ಖಾತೆಗಳ ಮೇಲೆ ದಾಖಲಾಗಿರುವ ಪ್ರಕರಣಗಳು ಹಾಗೂ ಹಣಕಾಸು ವಹಿವಾಟಿನ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post