ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ 27ರಂದು ಅಬ್ದುಲ್ ರಹಿಮಾನ್ ಕೊಲೆ ಮತ್ತು ಜೊತೆಯಿದ್ದ ಕಲಂದರ್ ಶಾಫಿ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸತ್ತಿದ್ದಾರೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಪ್ರಕಟಣೆ ಹೊರಡಿಸಿದ್ದು, ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಮುಂಡರಕೋಡಿಯ ದೀಪಕ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರದ ಪ್ರಥ್ವಿರಾಜ್ (21), ಅಮ್ಮುಂಜೆ ಗ್ರಾಮದ ಶಿವಾಜಿನಗರದ ಚಿಂತನ್ (19) ವಶಕ್ಕೆ ಪಡೆಯಲಾಗಿರುವ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ವಿಜಯಪ್ರಸಾದ್ ಅವರು ತನಿಖಾಧಿಕಾರಿಯಾಗಿದ್ದು, ಐದು ತನಿಖಾ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗಿದೆ. ತನಿಖಾ ತಂಡವು 29ರಂದು ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯವು ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಹಿಮಾನ್ ಕೊಲೆ ಮತ್ತು ಶಾಫಿ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈಗಾಗಲೇ ದಾಖಲಾಗಿದೆ.
ಟೆಂಪೊ ಚಾಲಕ ರಹಿಮಾನ್ ಎಲ್ಲರಿಗೂ ಬೇಕಾದ ವ್ಯಕ್ತಿ. ಮರಳು ಬೇಕು ಎಂದು ಕರೆ ಬಂದರೆ ಸಾಕು, ಜಾಗ ಎಲ್ಲಿ ಎಂದು ಕೇಳಿ ಹೊರಟುಬಿಡುತ್ತಾರೆ. ಯಾವುದೇ ಧರ್ಮ, ಜಾತಿ ನೋಡಿದವರಲ್ಲ. ಅವರ ಗ್ರಾಹಕರಲ್ಲಿ ಎಲ್ಲ ಧರ್ಮದವರೂ ಇದ್ದರು. ಮೇ 27ರಂದು ಮಧ್ಯಾಹ್ನ ಅವರಿಗೆ ಕರೆ ಬಂದಿತ್ತು. ಕೂಡಲೇ ಹೊರಟ ರಹಿಮಾನ್, 3 ರಿಂದ 3.30ರ ಅವಧಿಯಲ್ಲಿ ಕಲಂದರ್ ಶಾಫಿಯನ್ನು ಕರೆದುಕೊಂಡು ಹೊಳೆ ಬದಿಯಿಂದ ಮರಳು ಲೋಡ್ ಮಾಡಿ, ಕುರಿಯಾಳ ಗ್ರಾಮದ ಇರಾಕೋಡಿ ರಾಜೀವಿ ಎಂಬವರ ಮನೆ ಬಳಿ ಇಳಿಸಲು ಬಂದಿದ್ದರು.
ಈ ವೇಳೆ ಸುಮಾರು 15 ಜನರ ಗುಂಪು ಸುತ್ತುವರಿದು ಚಾಲಕನ ಸೀಟಿನಲ್ಲಿದ್ದ ರಹಿಮಾನ್ ಅವರನ್ನು ಹೊರಕ್ಕೆಳೆದು ತಲ್ವಾರಿನಿಂದ ದಾಳಿ ನಡೆಸಿದ್ದರು. ತಡೆಯಲು ಹೋದ ಶಾಫಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ರಹಿಮಾನ್ ಅವರನ್ನು ಆ ಜಾಗಕ್ಕೆ ಕರೆಸಿ ಕೊಲೆ ಮಾಡಲಾಯಿತೇ ಅಥವಾ ಅವರು ಅಲ್ಲಿಗೆ ಬರುವುದು ಗೊತ್ತಿದ್ದು ಕೊಲೆ ಮಾಡಲಾಯಿತೇ ಎಂಬ ಪ್ರಶ್ನೆ ಮೂಡಿದೆ. ಆರೋಪಿಗಳು ಪರಿಚಿತರೇ ಆಗಿದ್ದು ಹಳೆ ದ್ವೇಷವೇ ಅಥವಾ ಸುಹಾಸ್ ಶೆಟ್ಟಿ ಕೊಲೆಗೆ ಪ್ರತೀಕಾರಕ್ಕಾಗಿ ಕೊಲೆ ಮಾಡಿದ್ದಾರೆಯೇ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇತರ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post