ಮಂಗಳೂರು : ಗ್ರಾಮೀಣ ಪ್ರದೇಶದಲ್ಲಿ ಬಡಮಕ್ಕಳ ಹಾಗೂ ಮಧ್ಯಮ ವರ್ಗದ ಆಶಾಕಿರಣವಾಗಿ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ದ ಪ್ರಥಮ ದರ್ಜೆ ಪದವಿ ಕಾಲೇಜು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ನೀಡಿ ಅವರ ಜೀವನವನ್ನು ಮುನ್ನಡೆಸಲು ದಾರಿದೀಪವಾಗಿದೆ. 2016 ರಲ್ಲಿ ಪ್ರಾರಂಭವಾದ ಈ ಪ್ರಥಮ ದರ್ಜೆ ಪದವಿ ಕಾಲೇಜು ಉಳ್ಳಾಲ ತಾಲೂಕಿನ ಹಲವಾರು ಗ್ರಾಮೀಣ ಪ್ರದೇಶದ ವಿದ್ಯಾದಾಹಿಗಳಿಗೆ ಪದವಿ ಪಡೆಯಲು ಅವಕಾಶ ಕಲ್ಪಿಸಿತ್ತು. ಇಲ್ಲಿ ಕೇವಲ ಉಳ್ಳಾಲ ತಾಲೂಕಿನ ವಿದ್ಯಾರ್ಥಿಗಳು ಮಾತ್ರವಲ್ಲದೇ ದೇಶದ ವಿವಿಧ ಭಾಗದ ವಿದ್ಯಾರ್ಥಿಗಳು ಮತ್ತು ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಕೂಡ ಶಿಕ್ಷಣ ಅರಸಿ ಬರುತ್ತಿರುವುದು ಇದು ಗ್ರಾಮೀಣ ಭಾಗದ ವಿಶ್ವವಿದ್ಯಾಲಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಗುರುತಿಸಿತ್ತು ಎಂಬುದಕ್ಕೆ ಒಂದು ದೊಡ್ಡ ಉದಾಹರಣೆಯಾಗಿದೆ. ವಿಶ್ವಿದ್ಯಾನಿಲಯಗಳು, ವೈದ್ಯಕೀಯ ಕಾಲೇಜು, ಹಾಗೂ ಇತರ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳ ತವರುರಾದ ಉಳ್ಳಾಲ ತಾಲೂಕಿನಲ್ಲಿ ವಿದ್ಯಾಬ್ಯಾಸ ವ್ಯಾಪಾರೀಕರಣ ನಡೆಯುತ್ತಿರುವಾಗ ಬಡವಿದ್ಯಾರ್ಥಿಗಳಿಗೆ ಆಶಾಕಿರಣವಾಗಿತ್ತು ಮಂಗಳೂರು ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಪದವಿ ಕಾಲೇಜು. ಆದರೆ ಈ ವರ್ಷ ಪ್ರವೇಶ ದಾಖಲಾತಿಗಳನ್ನು ಮಾಡದೆ, ಇಲ್ಲಿರುವ ಎಲ್ಲಾ ಪದವಿ ಕೋರ್ಸನ್ನ ಮುಚ್ಚಿಸಲಾಗಿದೆ. ಈ ರೀತಿಯಾಗಿ ಒಂದೊಂದು ಹಂತಗಳಲ್ಲಿ ಎಲ್ಲಾ ಕೋರ್ಸುಗಳನ್ನು ಮುಚ್ಚಿಸಿ ಮಂಗಳೂರು ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಪದವಿ ಕಾಲೇಜನ್ನು ಶಾಶ್ವತವಾಗಿ ಇತಿಹಾಸ ಪುಟವನ್ನು ಸೇರಿಸಿ ಇಲ್ಲಿ ಅಳಿದು ಹಾಕುವ ಹುನ್ನಾರ ನಡೆಯತ್ತಿದೆ. ಇದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯು ಹಲವಾರು ಕಾರಣಗಳನ್ನು ನೀಡುತ್ತಿದ್ದರೂ
ಖಾಸಗಿ ಸಂಸ್ಥೆಗಳ ಲಾಭಿಗೆ ಮಣಿದು ಮುಚ್ಚಿಸುವ ಹುನ್ನಾರ ನಡೆಯುತ್ತಿರುವುದು ಮಾತ್ರ ಸುಳ್ಳಲ್ಲ. ಯಾರೋ ಅಲ್ಪವ್ಯಕ್ತಿಗಳನ್ನು ಮೆಚ್ಚಿಸಲು ಫಂಡ್ ಕೊರತೆ ವಿಚಾರವನ್ನು ಮುಂದಿಟ್ಟು ಬಡ ವಿದ್ಯಾರ್ಥಿಗಳ ಬೆಳವಣಿಗೆಗೆ ಕತ್ತರಿ ಹಾಕಲು ಪ್ರಯತ್ನಿಸುತ್ತಿರುವ ನೂತನ ಉಪಕುಲಪತಿ ರವರ ಪರಿಶ್ರಮ ಖಂಡನಾರ್ಹ ವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟಾದರೆ ಪರಿಹಾರ ಮಾರ್ಗ ಹುಡುಕಬೇಕೇ ವಿನಃ ಕಾಲೇಜು ಮುಚ್ಚಿಸುವುದು ಸಮಂಜಸವಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆಯು ಮಧ್ಯೆ ಪ್ರವೇಶಿಸಿ ಅಲ್ಲಿರುವ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ಅಗತ್ಯವಿದೆ. ಹಾಗೆಯೇ ಕ್ಷೇತ್ರದ ಶಾಸಕರು, ಎಲ್ಲಾ ಜನಪ್ರತಿನಿಧಿಗಳು, ವಿದ್ಯಾ ಅಭಿಮಾನಿಗಳು,ಸರ್ವ ತುಳುನಾಡಿನ ಬಂಧುಗಳು ಪ್ರತಿಷ್ಠಿತ ಮಂಗಳೂರು ವಿಶ್ವವಿದ್ಯಾಲಯದ ಪ್ರಥಮ ದರ್ಜೆ ಪದವಿ ಕಾಲೇಜನ್ನು ಉಳಿಸಿ ಜಿಲ್ಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಳಕಾಗಬೇಕಾಗಿದೆ .
ಮಹಮ್ಮದ್ ಅಸ್ಗರ್, ನ್ಯಾಯವಾದಿ ಮಂಗಳೂರು
Discover more from Coastal Times Kannada
Subscribe to get the latest posts sent to your email.







Discussion about this post