ಮಂಗಳೂರು, ನ 30: ದೇಶದಲ್ಲಿ ಎಲ್ಲಿಯೂ ಲವ್ ಜಿಹಾದ್ ನಡೆದಿಲ್ಲ. ಪ್ರೀತಿಯ ಹಿನ್ನೆಲೆಯಲ್ಲಿ ಹಿಂದೂ ಯುವತಿಯರೇ ಸ್ವಇಚ್ಛೆಯಿಂದ ಮತಾಂತರಗೊಂಡ ಪ್ರಕರಣ ನಡೆದಿದೆ. ಬಲವಂತದ ಮತಾಂತರವನ್ನು ಮುಸ್ಲಿಂ ಸಮುದಾಯ ಬೆಂಬಲಿಸುವುದಿಲ್ಲ. ಒಂದು ವೇಳೆ ಹಾಗೇನಾದರೂ ನಡೆದರೆ ಅದನ್ನು ನಾವು ವಿರೋಧಿಸುತ್ತೇವೆ ಎಂದು ಮುಸ್ಲಿಂ ಜಸ್ಟಿಸ್ ಫೋರಂ ಕಮಿಟಿ ಮಂಗಳೂರಿನಲ್ಲಿ ಹೇಳಿದೆ.

ಮಂಗಳೂರು ನಗರದ ಖಾಸಗಿ ಹೊಟೇಲ್ನಲ್ಲಿ ಮುಸ್ಲಿಂ ಜಸ್ಟಿಸ್ ಫೋರಂ ಕಮಿಟಿಯ ಸ್ಥಾಪಕಾಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಮಾತನಾಡಿ, “ದೇಶದ ಯಾವುದೇ ಪೊಲೀಸ್ ಠಾಣೆಗಳಲ್ಲಿ ಈವರೆಗೆ ಲವ್ ಜಿಹಾದ್ ಬಗ್ಗೆ ಒಂದು ಪ್ರಕರಣವೂ ದಾಖಲಾಗಿಲ್ಲ. ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಮದುವೆಯಾಗುತ್ತಾರೆ. ನಂತರ ಒಂದೆರಡು ವರ್ಷಗಳಲ್ಲಿಯೇ ಚಿತ್ರಹಿಂಸೆ ನೀಡಿ ಅವರನ್ನು ಕೊಂದಿರುವ ಪ್ರಕರಣಗಳು ನಡೆದಿವೆ. ಇದು ಯಾವ ಜಿಹಾದ್?,” ಎಂದು ರಫೀಯುದ್ದೀನ್ ಕುದ್ರೋಳಿ ಪ್ರಶ್ನಿಸಿದರು.
“ದೆಹಲಿಯ ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪಾರ್ಸಿ ಸಮುದಾಯದವನಾಗಿದ್ದಾನೆ. ಆದರೆ ಆತನನ್ನು ಮಾಧ್ಯಮಗಳು ಮುಸ್ಲಿಂ ಎಂದು ಬಿಂಬಿಸುತ್ತಿದ್ದು, ಸಮಾಜಕ್ಕೆ ತಪ್ಪು ಸಂದೇಶವನ್ನು ಸಾರುತ್ತಿವೆ. ಅದೇ ರೀತಿ ಗೋಸಾಗಾಟ ಮಾಡುವವರು ಹಾಗೂ ಏಜೆಂಟ್ಗಳು ಮುಸ್ಲಿಮರೇತರರು ಆಗಿರುತ್ತಾರೆ. ಆದರೆ ವಾಹನಗಳ ಚಾಲಕರು ಮಾತ್ರ ಮುಸ್ಲಿಮರು ಆಗಿರುತ್ತಾರೆ. ಅವರು ಸಣ್ಣಪುಟ್ಟ ಹಣಕ್ಕಾಗಿ ಬಂದು ಈ ಕೃತ್ಯಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ,” ಎಂದು ಹೇಳಿದ್ದಾರೆ.

ಜಮಾಅರ್ನ ಪ್ರವಚನದಲ್ಲಿ ಹೇಳುವುದೇನು? : ಇನ್ನು ಗಾಂಜಾ ಪ್ರಕರಣದಲ್ಲಿ ಬಹಳಷ್ಟು ಮುಸ್ಲಿಂ ಯುವಕರ ಹೆಸರು ಕೇಳಿ ಬರುತ್ತಿವೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ. ಅದೇ ರೀತಿ ಶುಕ್ರವಾರದಂದು ಜಮಾಅರ್ನ ಪ್ರವಚನದಲ್ಲಿ ಗಾಂಜಾ ವ್ಯಸನಿಗಳಾಗಬಾರದು, ಅನೀತಿ, ಅನಾಚಾರಗಳ, ಅನ್ಯಾಯಗಳನ್ನು ಎಸಗಬಾರದು ಎಂದು ತಿಳಿ ಹೇಳಲಾಗುತ್ತದೆ. ಅಲ್ಲದೆ ಈ ಕೃತ್ಯಗಳಲ್ಲಿ ತೊಡಗಿದವರನ್ನು ಜಮಾಅತ್ನ ಸಂಪರ್ಕದಿಂದ ಕಡಿತಗೊಳಿಸಲಾಗುತ್ತದೆ ಎಂದು ಸೂಚನೆ ನೀಡುತ್ತೇವೆ ಅಂತಾ ಹೇಳಿದ್ದಾರೆ. ಅಲ್ಲದೇ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಸರ್ಕಾರದಿಂದ ಮಾಡುವ ಯೋಜನೆಯಲ್ಲ. ಅದು ಮುಸ್ಲಿಮರ ಹಣದಿಂದಲೇ ಮಾಡುವಂತದ್ದು, ಸರ್ಕಾರದಲ್ಲಿ ಹಣ ಎಲ್ಲಿದೆ? ಲವ್ ಜಿಹಾದ್ ಮಾಡುವವರಿಗೆ ಮರಣ ಶತಸಿದ್ಧ ಎಂಬ ಬಜರಂಗದಳ ಕಾರ್ಯಕರ್ತ ಹೇಳಿರುವುದು ಅವರ ಅಸ್ತಿತ್ವ ಪ್ರದರ್ಶನದ ಹೇಳಿಕೆಯಾಗಿದೆ. ಸಂಘಟನೆಯ ಗುರಾಣಿ ಹಿಡಿದು ಸಮಾಜದಲ್ಲಿ ಕಂದಕ ಸೃಷ್ಟಿಸುವ ಹೇಳಿಕೆ ನೀಡುವುದನ್ನು ವಿರೋಧಿಸಬೇಕಾಗಿದೆ ಎಂದು ರಫೀಯುದ್ದೀನ್ ಕುದ್ರೋಳಿ ಹೇಳಿದ್ದಾರೆ.

Discover more from Coastal Times Kannada
Subscribe to get the latest posts sent to your email.








Discussion about this post