ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್ ಸಿಬ್ಬಂದಿಗಳಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದ ನಿವಾಸಿಗಳಾದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಬಂಧಿತ ಆರೋಪಿಗಳು.
ಡಿಸೆಂಬರ್ 29 ರಂದು ಮುಂಜಾನೆ ಲಾರಿಯಲ್ಲಿ ಬಂದ ಆರೋಪಿಗಳು ಬ್ರಹ್ಮರಕೂಟ್ಲು ಟೋಲ್ ಬಳಿ ರಸ್ತೆಯ ವಿರುದ್ಧ ಧಿಕ್ಕಿನಿಂದ ಬಂದಿದ್ದು, ಟೋಲ್ ಸಿಬ್ಬಂದಿಗಳು ಟೋಲ್ ಹಣ ಕೇಳಿದಾಗ ಹಣ ನೀಡಲು ನಿರಾಕರಿಸಿ ಲಾರಿಯನ್ನು ಮುಂದಕ್ಕೆ ಚಲಾಯಿಸಿ ಟೋಲ್ ಗೇಟಿಗೆ ಹಾನಿ ಮಾಡಿದ್ದಾರೆ. ಬಳಿಕ ಲಾರಿ ಚಾಲಕ ಹಾಗೂ ಕ್ಲೀನರ್ ಇಬ್ಬರು ಸೇರಿ ಟೋಲ್ ಗೇಟ್ ಸಿಬ್ಬಂದಿಗಳಾದ ಅಂಕಿತ್ ಹಾಗೂ ರೋಹಿತ್ ಎಂಬವರಿಗೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಬಳಿಕ ಇನ್ನೊಂದು ಪಿಕಪ್ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದು ಟೋಲ್ ಬೂತ್ ಒಳಗಡೆ ನುಗ್ಗಿ ಮತ್ತೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಟೋಲ್ ಇನ್ ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಸರಗೋಡು-ಮುಳ್ಳೇರಿಯಾ ನಿವಾಸಿ ಪ್ರಶಾಂತ್ ಬಿ (25) ಅವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post