ಮಂಗಳೂರು: ಕಿರು ಕಸುಬುದಾರರಿಗೆ ಮತ್ತು ದುಡಿಯುವ ವರ್ಗಕ್ಕೆ ನೆರವಾಗುವ ಉದ್ದೇಶದಿಂದ 1997ರಲ್ಲಿ ನಿರ್ಮಿಸಲಾದ ಮಂಗಳೂರಿನ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಕಟ್ಟಡದ ಉದ್ಘಾಟನೆ ಮತ್ತು ಬೆಳ್ಳಿಹಬ್ಬದ ಸಂಭ್ರಮಾಚರಣೆ ಏ.2ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಜೆ.ಪಾಲೇಮಾರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ರಜತಮಹೋತ್ಸವ ನೆನಪಿಗಾಗಿ ಮಂಗಳೂರಿನ ಜೆಪ್ಪು ಮೋರ್ಗನ್ಸ್ಗೇಟ್ ರಾಮಕ್ಷತ್ರಿಯ ಮಂದಿರದ ಬಳಿ ಸುಮಾರು ರೂ.8 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಹೊಸ ಸೌಲಭ್ಯಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಕಟ್ಟಡದಲ್ಲಿ ಗುರುವಾರ ಪೂಜಾವಿಧಿಗಳು ನಡೆದಿದ್ದು, ಏ.2ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದೆ’ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಜಯಾನಂದ ಅಂಚನ್, ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ.ಶಾಂತಾರಾಮ ಶೆಟ್ಟಿ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಮಾಜಿ ಶಾಸಕ ಜೆ.ಆರ್. ಲೋಬೊ, ಸಹಕಾರ ಸಂಘಗಳ ಉಪ ನಿಬಂಧಕ ಎಚ್.ಎನ್. ರಮೇಶ್, ಪಾಲಿಕೆ ಸದಸ್ಯೆ ಭಾನುಮತಿ ಪಿ.ಎಸ್. ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

1997ರಲ್ಲಿ ಕೇವಲ 3 ಲಕ್ಷ ರೂ. ಮೂಲ ಬಂಡವಾಳದೊಂದಿಗೆ 9 ಜನ ನಿರ್ದೇಶಕರು ಮತ್ತು 800 ಶೇರುದಾರರೊಂದಿಗೆ ಆರಂಭಗೊಂಡ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಇಂದು 2.8 ರೂ. ಕೋಟಿ ಬಂಡವಾಳದೊಂದಿಗೆ ಸುಮಾರು 5500ಕ್ಕೂ ಹೆಚ್ಚು ಶೇರುದಾರರನ್ನು ಹೊಂದಿದ್ದು, ವಾರ್ಷಿಕವಾಗಿ ಸುಮಾರು ರೂ. 400 ಕೋಟಿಗೂ ಮಿಕ್ಕಿ ವ್ಯವಹಾರವನ್ನು ನಡೆಸುವ ಮೂಲಕ ಸಮಾಜಕ್ಕೆ ಹಲವು ಉತ್ತಮ ಸೇವಾ ಸೌಲಭ್ಯಗಳು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಬಡವರ್ಗದವರಿಗೆ ಸಹಾಯ ಹಸ್ತ ಚಾಚುವ ಮೂಲಕ ಸಂಘವು ಉನ್ನತ ಮಟ್ಟಕ್ಕೇರಲು ಸಾಧ್ಯವಾಗಿದೆ. ಸಂಘವು 2022ರ ಸಾಲಿನಲ್ಲಿ 1 ಕೋಟಿಗೂ ಮಿಕ್ಕಿ ಲಾಭ ಪಡೆದಿದ್ದು, ಗ್ರಾಹಕರಿಗೆ ಶೇ. 20 ಡಿವಿಡೆಂಡ್ ನೀಡಿದೆ. ಸಂಘ ಸ್ಥಾಪನೆಯಾದ ವರ್ಷದಿಂದ ಈ ವರೆಗೆ ಎ ಗ್ರೇಡ್ ಮಾನ್ಯತೆ ಪಡೆದಿರುತ್ತದೆ ಎಂದು ಮಾಹಿತಿ ನೀಡಿದರು.
ಸಂಘವು ಜೆಪ್ಪು ಮೋರ್ಗನ್ಸ್ಗೇಟ್ನಲ್ಲಿ ಪ್ರಧಾನ ಕಚೇರಿ ಮತ್ತು ಶಾಖೆಯನ್ನು ಹೊಂದಿದ್ದು, ಹಂಪನಕಟ್ಟೆ, ಕಾವೂರು, ಕಾಟಿಪಳ್ಳ-ಕೈಕಂಬ ಮತ್ತು ಉಳ್ಳಾಲ ಮುಂತಾದೆಡೆ 5 ಶಾಖೆ ಹೊಂದಿದೆ. ಮುಂದಿನ ವರ್ಷದಲ್ಲಿ ಮತ್ತೆ ಐದು ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಕೆ. ದಿನೇಶ್ ರಾವ್, ನಿರ್ದೇಶಕರಾದ ಜೆ.ಕೆ.ರಾವ್, ಪಿ. ಬಾಬು, ಕೆ.ಎಸ್. ರಂಜನ್, ವಾರಿಜ ಕೆ., ಡಾ.ಎಚ್. ಪ್ರಭಾಕರ್, ಡಾ.ಮಂಜುಳಾ ಎ. ರಾವ್, ಕೆ.ರವೀಂದ್ರ, ಕೆ.ಜೈರಾಜ್ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಪ್ರಸಾದ್ ಪಿ.ಎ. ಇದ್ದರು.
Discover more from Coastal Times Kannada
Subscribe to get the latest posts sent to your email.







Discussion about this post