ಮಂಗಳೂರು: ಮಂಗಳೂರು ಪೊಲೀಸ್ ಆಯುಕ್ತರ ವಾಟ್ಸಪ್ ಪ್ರೊಫೈಲ್ ಫೋಟೋ ಹಾಕಿ ವಾಟ್ಸಪ್ ಮೆಸೇಜ್, ಕರೆ ಮೂಲಕ ತುರ್ತು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ವಾಟ್ಸ್ ಆ್ಯಪ್ ಪ್ರೊಫೈಲ್ ಪೊಟೋ ಬಳಸಿರುವ whatsapp ನಂಬರ್ ನಿಂದ ಮೆಸೇಜ್ ಮಾಡಿರುವ ಕಿಡಿಗೇಡಿ, ತನ್ನನ್ನು ಪೊಲೀಸ್ ಆಯುಕ್ತನೆಂದು ಪರಿಚಯಿಸಿಕೊಂಡು ತುರ್ತು ಹಣದ ಬೇಡಿಕೆ ಮುಂದಿಟ್ಟಿದ್ದಾನೆ. ಈ ರೀತಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ಆಯುಕ್ತರ ಹಲವು ಮಂದಿ ಪರಿಚಿತರಿಗೆ ಸಂದೇಶ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.
“ನಾನು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್. ನಾನು ಆಸ್ಪತ್ರೆಗೆ ದಾಖಲಾಗಿದ್ದು ತುರ್ತು ಹಣ ಬೇಕಾಗಿದೆ. ನನ್ನ ಯುಪಿಐ ವರ್ಕ್ ಮಾಡುತ್ತಿಲ್ಲ. ಅರ್ಜೆಂಟಾಗಿ ಹಣ ಟ್ರಾನ್ಸ್ ಫರ್ ಮಾಡಿ. ಒಂದು ತಾಸಿನೊಳಗೆ ವಾಪಸ್ ಮಾಡುತ್ತೇನೆ” ಎಂದು ತಿಳಿಸಿದ್ದಾನೆ. ಮೆಸೇಜ್ ಬೆನ್ನಲ್ಲೇ Whatsapp ಮೂಲಕ ಮಿಸ್ ಕಾಲ್ ಕೂಡ ಮಾಡಿದ್ದಾನೆ.
ಈ ಬಗ್ಗೆ ಪರಿಶೀಲನೆ ನಡೆಸಿದಾಗ ಇದು ವಂಚನೆಯ ಯತ್ನ ಎಂಬುದಾಗಿ ಗೊತ್ತಾಗಿದೆ. ಈ ಕುರಿತು ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದು ಇದೊಂದು ನಕಲಿ ಕರೆ. ಯಾರು ಕೂಡ ಸ್ಪಂದಿಸಬಾರದು ಎಂದು ತಿಳಿಸಿದ್ದಾರೆ.
Discussion about this post