ಮಂಗಳೂರು: ಓವರ್ ಟೇಕ್ ವಿಚಾರದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರಿಗೆ ಅಡ್ಡಗಟ್ಟಿ, ತಲ್ವಾರ್ ಝಳಪಿಸಿದ್ದು, ಇದು ಕೊಲೆ ಯತ್ನ ಅಲ್ಲ ಎಂದು ದಕ್ಷಿಣ ಕನ್ನಡ ಎಸ್ಪಿ ಋಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ತಮಗೆ ನೀಡಿದ್ದ ಗನ್ ಮ್ಯಾನ್ನನ್ನು ಶಾಸಕ ಹರೀಶ್ ಪೂಂಜಾ ವಾಪಸ್ ಕಳುಹಿಸಿದ್ದಾರೆ. ಗುರುವಾರ ರಾತ್ರಿ ಮಂಗಳೂರಿನಿಂದ ಬೆಳ್ತಂಗಡಿಗೆ ಹೋಗುವ ಸಂದರ್ಭದಲ್ಲಿ ಫರಂಗಿಪೇಟೆ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದು ಶಾಸಕರ ಮುಂದೆ ಕೆಲವರು ತಲ್ವಾರ್ ಝಳಪಿಸಿದ್ದರು ಎಂದು ಶಾಸಕ ಹರೀಶ್ ಪೂಂಜಾ ಆರೋಪಿಸಿದ್ದರು. ಈ ಬಗ್ಗೆ ಶಾಸಕರ ಕಾರು ಚಾಲಕ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ,ಇದು ಕೊಲೆ ಯತ್ನ ಅಲ್ಲ. ಓವರ್ ಟೇಕ್ ವಿಚಾರದಲ್ಲಿ ನಡೆದ ಪ್ರಕರಣ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಾಣೆ ಹೇಳಿಕೆ ನೀಡಿದ್ದರು. ಪ್ರಕರಣದ ಬಳಿಕ ಗೃಹ ಸಚಿವರ ಸೂಚನೆಯ ಮೇರೆಗೆ ಶಾಸಕ ಹರೀಶ್ ಪೂಂಜಾಗೆ ದ.ಕ ಪೊಲೀಸ್ ಇಲಾಖೆ ಗನ್ ಮ್ಯಾನ್ ನೀಡಿತ್ತು. ಇದೀಗ ಎಸ್ಪಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಸರ್ಕಾರದಿಂದ ಕಳುಹಿಸಿದ್ದ ಗನ್ ಮ್ಯಾನ್ನ್ನು ಶಾಸಕ ಹರೀಶ್ ಪೂಂಜಾ ವಾಪಸ್ ಕಳುಹಿಸಿದ್ದಾರೆ.
Discussion about this post