ಮಂಗಳೂರು: ಆ 2: ಕೇಂದ್ರ ಸರಕಾರದ ಮುದ್ರಾ ಯೋಜನೆಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ವಿವಿಧ ವ್ಯಕ್ತಿಗಳಿಂದ 20.50 ಲಕ್ಷ ರೂ. ಪಡೆದು ವಂಚಿಸಿರುವ ಕುರಿತಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕಾಶ್ ಪೂಜಾರಿ ಎಂಬಾತ ಪ್ರಕರಣದ ಆರೋಪಿ ನಗರದ ಐಸ್ಕ್ರೀಂ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದ ಅನಿಲ್ ಎನ್ನುವವರಿಗೆ, ಆರೋಪಿಯು ತಾನು ಮುದ್ರಾ ಯೋಜನೆಯ ಏಜೆಂಟ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ಈ ಯೊಜನೆಯಡಿ ಸಾಲ ಕೊಡಿಸುತ್ತೇನೆ ಎಂದು ತಿಳಿಸಿದ್ದಾನೆ.
ಅನಿಲ್ ಅವರು ಬೇಡ ಎಂದರೂ, ನಯವಾಗಿ ಮಾತನಾಡಿ ಅವರನ್ನು ಬಲೆಗೆ ಕೆಡವಿದ್ದಾನೆ. ಹಲವರಿಗೆ 15 ಲಕ್ಷ ರೂ. ವರೆಗೆ ಸಾಲ ತೆಗೆಸಿಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. 15 ಲಕ್ಷ ರೂ. ಸಾಲದ ಖರ್ಚಿಗೆ 1.50 ಲಕ್ಷ ರೂ. ನೀಡಬೇಕು, ಸಾಲ ಮಂಜೂರು ಆಗದೇ ಇದ್ದಲ್ಲಿ ಹಣ ವಾಪಸು ನೀಡುವುದಾಗಿಯೂ ತಿಳಿದ್ದಾನೆ ಎಂದು ದೂರಲಾಗಿದೆ.
ಪ್ರಕಾಶ್ ಪೂಜಾರಿಯ ಮಾತನ್ನು ನಂಬಿದ ಅನಿಲ್ 1.50 ಲಕ್ಷ ರೂ. ಒಟ್ಟುಗೂಡಿಸಿ ಆರೋಪಿಯ ಖಾತೆಗೆ ನೆಫ್ಟ್ ಮಾಡಿದ್ದಾರೆ. ಇದೇ ವೇಳೆ ಇತರರೂ ಆತನಿಗೆ ಹಣ ನೀಡಿದ್ದಾರೆ. ಸಾಲ ಮಂಜೂರಾಗದೇ ಇದ್ದಾಗ ಆತನ ಮನೆಗೆ ಹೋಗಿ ವಿಚಾರಿಸಿದ್ದು, ಸಾಲ ಮಂಜೂರಾಗುವ ಬಗ್ಗೆ ಭರವಸೆಯನ್ನೂ ನೀಡಿದ್ದ. ಹಲವು ದಿನಗಳು ಕಳೆದರೂ, ಸಾಲ ದೊರೆಯದೇ ಇದ್ದಾಗ ಆತನ ಮೊಬೈಲ್ಗೆ ಕರೆ ಮಾಡಿದ್ದು, ಅದು ಸ್ವಿಚ್ ಆಫ್ ಆಗಿದೆ. ಮನೆಗೆ ಹೋಗಿ ಕೇಳಿದಾಗ ಆತನ ತಾಯಿ ಮತ್ತು ಪತ್ನಿ ಆತ ಮನೆಗೆ ಬಾರದೆ 2 ವರ್ಷ ಆಯಿತು ಎಂದು ತಿಳಿಸಿದ್ದಾರೆ. ಇನ್ನಷ್ಟು ವಿಚಾರಿಸಿದಾಗ ಆತನ ಪತ್ನಿಯೂ ಸಾಲಕ್ಕೆ ಸಂಬಂಧಿಸಿದ ಹಲವರಿಂದ ಹಣ ಪಡೆದಿರುವುದು ತಿಳಿದುಬಂದಿದೆ.
ಹಲವರಿಗೆ 20.50 ಲಕ್ಷ ರೂ. ವಂಚನೆ: ದಂಪತಿಗಳಿಬ್ಬರು ಸೇರಿ ಅನಿಲ್ ಅವರಿಂದ 1.50 ಲಕ್ಷ ರೂ. ಮತ್ತು ಇತರ ಸಾರ್ವಜನಿಕರಾದ ದಿಶಾ ಡಿ. ನಾಯಕ್ ಅವರಿಂದ 1.50 ಲಕ್ಷ ರೂ., ಸುನೀಲ್ ಎಂಬವರಿಂದ 50 ಸಾವಿರ ರೂ., ವೇದಾ ಅವರಿಂದ 1 ಲಕ್ಷ ರೂ., ಸ್ವಾತಿ ಎಂ. 4.50 ಲಕ್ಷ ರೂ., ನರೇಂದ್ರ ಶೆಟ್ಟಿ 5 ಲಕ್ಷ ರೂ., ವೀಣಾ ನಾಯಕ್ 1 ಲಕ್ಷ ರೂ., ಮಹೇಶ್ ಮೇಸ್ತ 1 ಲಕ್ಷ ರೂ., ಕಾರ್ತಿಕ್ 1 ಲಕ್ಷ ರೂ., ಲೀಲಾವತಿ 2 ಲಕ್ಷ ರೂ., ನಿತ್ಯಾನಂದ ಮೇಸ್ತ 1.50 ಲಕ್ಷ ರೂ. ಹೀಗೆ ಒಟ್ಟು 20.50 ಲಕ್ಷ ರೂ. ಹಣವನ್ನು ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post