ಮಂಗಳೂರು: ಇ-ಸತ್ತು 2.0 ತಂತ್ರಾಂಶದ ವಿಫಲತೆಯಿಂದ ನಮೂನೆ 11ಎ ಮತ್ತು 11ಬಿ ಪ್ರಕ್ರಿಯೆ ತೀರ ವಿಳಂಬವಾಗುತ್ತಿದ್ದು, ಗ್ರಾಮೀಣ ಭಾಗದ ಆಸ್ತಿ ಮಾಲೀಕರು, ರೈತರು ಹಾಗೂ ಬಡ ಕುಟುಂಬಗಳು ಮನೆ ನಿರ್ಮಾಣ ಮಾಡಲಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ತಕ್ಷಣದಿಂದ ಫಾರಂ 11ಎ ಮತ್ತು ಫಾರಂ 11ಬಿ ನೀಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ತಂತ್ರಾಂಶದ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾರಂ 11ಎ ಮತ್ತು ಫಾರಂ 11ಬಿ ಅಡಿಯಲ್ಲಿ ಸಲ್ಲಿಸಲಾದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. 2025ರ ಡಿ.1ರಂದು ಇ-ಸತ್ತು 2.0 ಅನುಷ್ಠಾನಗೊಂಡಾಗಿನಿಂದ, ಫಾರಂ 11(ಎ) ಅಡಿಯಲ್ಲಿ ಒಟ್ಟು 1,84,222 ಅರ್ಜಿಗಳು ರಾಜ್ಯಾದ್ಯಂತ ಸಲ್ಲಿಕೆಯಾಗಿವೆ. ಇವುಗಳಲ್ಲಿ 23,802 ಅರ್ಜಿಗಳು ಇನ್ನೂ ಅನುಮೋದನೆಗಾಗಿ ಕಾಯುತ್ತಿವೆ, 639 ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ತಿರಸ್ಕರಿಸಲ್ಪಟ್ಟ ಅರ್ಜಿಗಳಲ್ಲಿ ಹೆಚ್ಚಿನವು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಬಂದವುಗಳು ಎಂದು ತಿಳಿಸಿದರು.
ಅದೇ ರೀತಿ, ಫಾರಂ 11(ಬಿ) ಅಡಿಯಲ್ಲಿ ಸ್ವೀಕರಿಸಿದ 15,936 ಅರ್ಜಿಗಳಲ್ಲಿ 8,892 ಅರ್ಜಿಗಳು ಬಾಕಿ ಉಳಿದಿವೆ. ದಕ್ಷಿಣ ಕನ್ನಡದಲ್ಲಿ 65 ಅರ್ಜಿಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 436 ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ ಎಂದು ಕಿಶೋರ್ ಹೇಳಿದರು.
ಅಧಿಕಾರ ಕೇಂದ್ರೀಕರಣದಿಂದ ತೊಂದರೆ: ಹಿಂದೆ ಗ್ರಾಮ ಪಂಚಾಯತ್ ಮಟ್ಟದಲ್ಲೇ ಪಿಡಿಒ ಹಾಗೂ ಅಧ್ಯಕ್ಷರ ವ್ಯಾಪ್ತಿಯಲ್ಲಿದ್ದ 11(ಎ) ಮತ್ತು 11(ಬಿ) ನೀಡುವ ಅಧಿಕಾರವನ್ನು ಈಗ ತಾಲೂಕು ಪಂಚಾಯತ್ ಇಒ ಹಾಗೂ ಜಿಲ್ಲಾಪಂಚಾಯತ್ ಸಿಇಒ ಮಟ್ಟಕ್ಕೆ ವಹಿಸಲಾಗಿದೆ.
ಈಗಾಗಲೇ ಅಪಾರ ಜವಾಬ್ದಾರಿ ಹೊಂದಿರುವ ಇಒ ಮತ್ತು ಸಿಇಒಗಳಿಗೆ ಈ ಹೆಚ್ಚುವರಿ ಹೊರೆ ನೀಡಿರುವುದರಿಂದ ಕಡತಗಳು ನೆನೆಗುದಿಗೆ ಬಿದ್ದಿವೆ. ಗ್ರಾಮೀಣ ಭಾಗದ ಸಾರ್ವಜನಿಕರು ಸಣ್ಣ ಕೆಲಸಕ್ಕೂ ತಾಲೂಕು/ಜಿಲ್ಲಾ ಕೇಂದ್ರಗಳಿಗೆ ದಿನನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಸಂವಿಧಾನದ ವಿಕೇಂದ್ರೀಕರಣದ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೆ, ತಂತ್ರಾಂಶದಲ್ಲಿನ ಸರ್ವರ್ ದೋಷದಿಂದ ನಿಗದಿತ 15 ದಿನಗಳ ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿಯಾಗುತ್ತಿಲ್ಲ. ಸರ್ಕಾರ ‘ಪೇಪರ್ಲೆಸ್’ ಹಾಗೂ ‘ಡಿಜಿಟಲೀಕರಣ’ ಎಂದು ಪ್ರಚಾರ ಮಾಡುತ್ತಿದ್ದರೂ, ಪ್ರತ್ಯಕ್ಷವಾಗಿ ಇಒ ಮತ್ತು ಸಿಇಒ ಕಚೇರಿಗಳಲ್ಲಿ ಭೌತಿಕ ಕಡತಗಳನ್ನು ಹಿಡಿದುಕೊಂಡು ಬರುವಂತೆ ಸಾರ್ವಜನಿಕರನ್ನು ಪೀಡಿಸಲಾಗುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದ್ದು, ಬಡ ವ್ಯಕ್ತಿಯೊಬ್ಬ ಮನೆ ಕಟ್ಟಲು ಪರವಾನಗಿ ಪಡೆಯಲು ರೂ.20,000ದಿಂದ ರೂ.30,000 ಲಂಚ ನೀಡಬೇಕಾದ ದುಸ್ಥಿತಿ ಬಂದೊದಗಿದೆ ಎಂದವರು ಆರೋಪಿಸಿದರು.
ನೂತನ ಆರ್ಡಿಪಿಆರ್ ಸಚಿವ ಈಶ್ವರ ಖಂಡ್ರೆ ಅವರಾದರೂ ಈ ತಾಂತ್ರಿಕ ಲೋಪ ಹಾಗೂ ಆಡಳಿತಾತ್ಮಕ ತೊಡಕುಗಳನ್ನು ತಕ್ಷಣವೇ ಸರಿಪಡಿಸಿ, 11(ಎ) ಮತ್ತು 11(ಬಿ) ಅಧಿಕಾರವನ್ನು ಮರಳಿ ಗ್ರಾಮ ಪಂಚಾಯ್ತಿ ಮಟ್ಟಕ್ಕೆ ನೀಡುವ ಮೂಲಕ ಬಡ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ವಸತಿ ಯೋಜನೆಗಳು ಶೂನ್ಯ: ಕಳೆದ ಎರಡು ವರ್ಷಗಳಲ್ಲಿ ಬಸವ ವಸತಿ ಯೋಜನೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ರಾಜ್ಯ ಸರ್ಕಾರ ಒಂದೇ ಒಂದು ಹೊಸ ಮನೆಯನ್ನೂ ಮಂಜೂರು ಮಾಡಿಲ್ಲ ಎಂದು ಕಿಶೋರ್ ಕುಮಾರ್ ಆರೋಪಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post