ಮಂಗಳೂರು, ಫೆ.4: ನಿಗೂಢ ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಗಳೂರಿಗೆ ಹೊರಟಿದ್ದ ಯುವಕರ ತಂಡವೊಂದು ಸೆರೆಯಾಗಿದೆ. ಅನುಮಾನಾಸ್ಪ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಂಗ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಿಮ್ಗಳ ಸಾಗಾಟ ಬಯಲಿಗೆ ಬಂದಿದೆ.
ಐವರಿದ್ದ ಯುವಕ ತಂಡ 42 ಅಕ್ರಮ ಸಿಮ್ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸರ ಬಲೆಗೆ ಬಿದಿದೆ. ಫೆಬ್ರವರಿ 1 ರಂದು ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್ಗಳನ್ನು ಜಪ್ತಿ ಮಾಡಲಾಗಿದೆ. ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಸಿಲುಕಿದ್ದಾನೆ. ಆರೋಪಿ ಅಕ್ಬರ್ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್ ಖರೀದಿ ಮಾಡಿದ್ದ. ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ. ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿಗೆ ಆರೋಪಿಗಳು ಸಾಗಿಸುತ್ತಿದ್ದ ನಿಕಲಿ ಸಿಮ್ಗಳು ಬೆಂಗಳೂರಿನಲ್ಲಿರುವ ಆಗಂತುಕರ ಕೈ ಸೇರುತ್ತಿತ್ತಾ ಎನ್ನುವ ಶಂಕೆ ವ್ಯಕ್ತವಾಗಿದೆ. ಅಕ್ಬರ್ ಆಲಿ ಮೊದಲಿನಿಂದಲೂ ದುಬೈನಲ್ಲಿ ಇದ್ದುಕೊಂಡೇ ಸಿಮ್ ಕಾರ್ಡ್ ಸಂಗ್ರಹಿಸುತ್ತಿದ್ದನು. ತನ್ನ ಸ್ನೇಹಿತ ಮೊಹಮ್ಮದ್ ಮುಸ್ತಫಾನ ಮೂಲಕ ಸಿಮ್ಗಳನ್ನು ಕಲೆಕ್ಟ್ ಮಾಡುತ್ತಿದ್ದನು.
ಮೊಹಮ್ಮದ್ ಮುಸ್ತಫಾ ತನ್ನ ಸ್ನೇಹಿತರಾಗಿರುವ ರಮೀಝ್ ಮತ್ತು ಮಹಮ್ಮದ್ ಸಾಧಿಕ್ಗೆ ಸಿಮ್ಗಳ ವ್ಯವಸ್ಥೆಗೆ ಸೂಚನೆ ನೀಡುತ್ತಿದ್ದನು. ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟುನ್ನು ತಮ್ಮ ಅತ್ಮಿಯರಿಂದ ಕಮಿಷನ್ ಕೊಡಿಸಿ ಕಲೆಕ್ಟ್ ಮಾಡಿ ಮುಸ್ತಫಾನಿಗೆ ನೀಡುತ್ತಿದ್ದರು. ನಂತರ ಅಕ್ಬರ್ ಅಲಿ ಹೇಳಿದಂತೆ ಸಿಮ್ ಕಾರ್ಡ್ ಮಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.
ದುಬಾೖಯಲ್ಲಿ ಬಳಕೆ ಉದ್ದೇಶ? : ಆರೋಪಿಗಳು ಯಾವುದೇ ಸಂಘಟನೆ ಅಥವಾ ಪಕ್ಷದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಆರೋಪಿ ಅಕ್ಬರ್ ದುಬಾೖಯಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿನ ವ್ಯವಹಾರಕ್ಕೆ ಯುಪಿಐ ಐಡಿ ಆ್ಯಕ್ಟಿವೇಟ್ ಮಾಡಲು ದುಬಾೖಗೆ ಕೊಂಡೊಯ್ಯಲು ತನ್ನ ಸ್ನೇಹಿತರ ಮುಖಾಂತರ ಇಲ್ಲಿಂದ ಬೇರೆ ಬೇರೆ ಸಿಮ್ ಕಾರ್ಡ್ಗಳನ್ನು ಪಡೆದಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ದುಬಾೖಯಲ್ಲಿ ಒಂದು ಸಿಮ್ ಕಾರ್ಡ್ನಲ್ಲಿ ಕನಿಷ್ಠ 20 ಸಾವಿರ ರೂ. ಮಾತ್ರ ವ್ಯವಹಾರಕ್ಕೆ ಅವಕಾಶ ಇರುವುದರಿಂದ ಹಲವು ಸಿಮ್ಗಳನ್ನು ಪಡೆದುಕೊಂಡಿರುವ ಸಾಧ್ಯತೆ ಕಂಡುಬಂದಿದೆ.
ಒಬ್ಬನ ಹೆಸರಿನಲ್ಲಿ 9 ಸಿಮ್ ಕಾರ್ಡ್ ಪಡೆಯಲು ಅವಕಾಶ ಇದ್ದು ಎಲ್ಲ ಆರೋಪಿಗಳು ತಮ್ಮ ತಮ್ಮ ಮನೆಯವರ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಸ್ಥಳೀಯವಾಗಿಯೇ ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಕುಟುಂಬದ 10 ಮಂದಿಯ ಆಧಾರ್ ಕಾರ್ಡ್ಗಳನ್ನು ನೀಡಿ ನೆರಿಯದ ಎರಡು ಮೊಬೈಲ್ ಅಂಗಡಿಗಳಿಂದ ಕ್ರಮವಾಗಿ 9 ಮತ್ತು 33 ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆ.ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post