ಕಾಸರಗೋಡು, ಫೆ.3: ರಾಷ್ಟ್ರೀಯ ಹೆದ್ದಾರಿ 66ರ ಕುಂಬ್ಳೆಯ ಅರಿಕ್ಕಾಡಿಯಲ್ಲಿ ಆರಂಭಿಸಲಾಗಿದ್ದ ಟೋಲ್ ಪ್ಲಾಜಾವನ್ನು ಮುಚ್ಚುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಆದೇಶಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿ ಆರಂಭಿಸಿದ 22 ದಿನಗಳ ಬಳಿಕ ವ್ಯಾಪಕ ಜನವಿರೋಧ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ.
ಜನವರಿ 12 ರಂದು ಟೋಲ್ ಸಂಗ್ರಹ ಆರಂಭವಾದ ದಿನದಿಂದಲೇ ಅರಿಕ್ಕಾಡಿ ಟೋಲ್ ಪ್ಲಾಜಾ ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ನೇತೃತ್ವದ ಕ್ರಿಯಾ ಸಮಿತಿ ಎರಡನೇ ದಿನದಿಂದಲೇ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತ್ತು. ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಈ ಆಂದೋಲನಕ್ಕೆ ಬೆಂಬಲ ನೀಡಿದ್ದವು. ಜನವರಿ 14ರಂದು ರಾತ್ರಿ ಸಾವಿರಾರು ಮಂದಿ ಏಕಾಏಕಿ ನುಗ್ಗಿ ಬಂದು ಟೋಲ್ ಗೇಟನ್ನು ಒದ್ದು ದಾಂಧಲೆ ನಡೆಸಿದ್ದರು.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮದ ಪ್ರಕಾರ, ಎರಡು ಟೋಲ್ ಪ್ಲಾಜಾಗಳ ನಡುವೆ ಕನಿಷ್ಠ 60 ಕಿ.ಮೀ. ಅಂತರವಿರಬೇಕು. ಆದರೆ ಅರಿಕ್ಕಾಡಿ ಟೋಲ್ ಪ್ಲಾಜಾವು ತಲಪಾಡಿ ಟೋಲ್ನಿಂದ 22 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಇದು ಜನರ ಮೇಲಿನ ಹೊರೆ ಎಂಬ ನೆಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು.
ಕುಂಬ್ಳೆ ಪೇಟೆಗೆ ಕೇವಲ 1 ಕಿ.ಮೀ. ದೂರದಲ್ಲಿ ಈ ಪ್ಲಾಜಾ ಇರುವುದರಿಂದ ಮತ್ತು ಸ್ಥಳೀಯ ಪ್ರಯಾಣಿಕರಿಗೆ ಇದು ದೊಡ್ಡ ಹೊರೆಯಾಗಿದ್ದರಿಂದ ಜನರು ಪಕ್ಷ ಭೇದ ಮರೆತು ವಿರೋಧಿಸಿದ್ದರು. ಇದೇ ವೇಳೆ, ಕ್ರಿಯಾ ಸಮಿತಿ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿ ಹೋರಾಟ ಆರಂಭಿಸಿದ್ದರು. ಇದರ ಜೊತೆಗೆ, ಬಿಜೆಪಿ ಜಿಲ್ಲಾ ಸಮಿತಿ ಮುಖಂಡರು ಕೇಂದ್ರ ಸಾರಿಗೆ ಸಚಿವರಿಗೂ ಮನವಿ ಮಾಡಿ ಟೋಲ್ ಅಕ್ರಮದ ಬಗ್ಗೆ ಮನವರಿಕೆ ಮಾಡಿಸಿದ್ದರು. ಇಂದು ಸಾರಿಗೆ ಇಲಾಖೆ ಟೋಲ್ ಗೇಟ್ ಬಂದ್ ಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡ ಸುರೇಂದ್ರನ್ ತನ್ನ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಸಚಿವ ಗಡ್ಕರಿಯವರನ್ನು ಅಭಿನಂದಿಸಿದ್ದಾರೆ.
ಇದೇ ವೇಳೆ, ಬಿಜೆಪಿಯಲ್ಲು ಕ್ರೆಡಿಟ್ ಪಡೆಯಲು ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧ್ಯಕ್ಷೆ ಅಶ್ವಿನಿ ನೇತೃತ್ವದಲ್ಲಿ ಕುಂಬಳೆಯಿಂದ ಟೋಲ್ ಗೇಟ್ ವರೆಗೆ ಮಾರ್ಚ್ ನಡೆಸಿ ಜೈಕಾರ ಹಾಕಿದ್ದಾರೆ. ಟೋಲ್ ಕೇಂದ್ರವನ್ನು ಮುಚ್ಚಿರುವುದರಿಂದ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ನಿರಾಳತೆ ಸಿಕ್ಕಂತಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post